ದಾವಣಗೆರೆ: (Gang Rape) ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಂತ ಅಮಾನುಷ ಹಾಗೂ ಆಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಕೌಟುಂಬಿಕ ಕಲಹದಿಂದ ಬೇಸತ್ತು ತವರೂರಿಗೆ ಹೊರಟಿದ್ದ 41 ವರ್ಷದ ವಿವಾಹಿತ ಮಹಿಳೆಗೆ ತಂಪು ಪಾನೀಯದಲ್ಲಿ ಅಮಲು ಪದಾರ್ಥ ನೀಡಿ, ಜಮೀನಿಗೆ ಅಪಹರಿಸಿ ಹತ್ತು ಮಂದಿ ಪಾಪಿಗಳು ಸಾಮೂಹಿಕ ಅತ್ಯಾಚಾರ (ಗ್ಯಾಂಗ್ ರೇಪ್) ಎಸಗಿದ್ದಾರೆ. ಅಷ್ಟೇ ಅಲ್ಲದೆ, ಸಂತ್ರಸ್ತೆಯ ಬೆತ್ತಲೆ ವೀಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ ವಿಕೃತಿ ಮೆರೆದಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶೇಖರ್ ಟಿ. ರವರ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ ಕಾರ್ಯಾಚರಣೆ ನಡೆಸಿರುವ ಬಸವಾಪಟ್ಟಣ ಪೊಲೀಸರು, ಒಟ್ಟು 10 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ಕಂಬಿ ಹಿಂದೆ ತಳ್ಳಿದ್ದಾರೆ
ಪ್ರಕರಣದ ಹಿನ್ನೆಲೆ ಮತ್ತು ಕೃತ್ಯದ ವಿವರ:
ಮೂಲಗಳ ಪ್ರಕಾರ, ಜೂನ್ 3 ರಂದು ಸಂಜೆ ಸಂತ್ರಸ್ತೆಯ ಗಂಡ ಮದ್ಯಪಾನ ಮಾಡಿ ಮನೆಗೆ ಬಂದಿದ್ದರಿಂದ ದಂಪತಿಗಳ ನಡುವೆ ವಾಗ್ವಾದ ನಡೆದಿತ್ತು. ಇದರಿಂದ ತೀವ್ರ ಬೇಸರಗೊಂಡ ಮಹಿಳೆ ನೇರಲಗುಂಡಿ ಗ್ರಾಮದಿಂದ ನಡೆದುಕೊಂಡು ತನ್ನ ತವರೂರಾದ ಯಲೋದಹಳ್ಳಿ ಗ್ರಾಮಕ್ಕೆ ಹೊರಟಿದ್ದರು. ರಾತ್ರಿ ಸುಮಾರು 7.30 ರ ವೇಳೆಗೆ ಯಲೋದಹಳ್ಳಿ ಗ್ರಾಮದ ಚಿಕನ್ ಅಂಗಡಿ ಬಳಿ ಮಹಿಳೆ ಅಳುತ್ತಾ ನಿಂತಿರುವುದನ್ನು ಗಮನಿಸಿದ ಸ್ಥಳೀಯ ಹುಡುಗನೊಬ್ಬ, “7-Up (ತಂಪು ಪಾನೀಯ) ಕುಡಿಯುತ್ತೀಯಾ ಅಕ್ಕ?” ಎಂದು ಕೇಳಿದ್ದಾನೆ. ನಡೆದು ಸುಸ್ತಾಗಿದ್ದ ಮಹಿಳೆ ಅದನ್ನು ಕುಡಿದ ತಕ್ಷಣ ಪ್ರಜ್ಞೆ ತಪ್ಪಿದ್ದಾರೆ.
ಬಳಿಕ ಆ ಹುಡುಗ ಮತ್ತು ಅವನ ಜೊತೆಯಲ್ಲಿದ್ದ ಮತ್ತೊಬ್ಬ ಸಂತ್ರಸ್ತೆಯನ್ನು ಬೈಕ್ನಲ್ಲಿ ಕೂರಿಸಿಕೊಂಡು ಯಲೋದಹಳ್ಳಿ ಗ್ರಾಮದ ಬಳಿಯ ಜಮೀನಿಗೆ ಕರೆದೊಯ್ದಿದ್ದಾರೆ. ಅಲ್ಲಿ ಮೊದಲೇ ಹೊಂಚು ಹಾಕಿ ಕುಳಿತಿದ್ದ ಕಾಮುಕರ ತಂಡ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯ ಮೇಲೆ ಜೂನ್ 3 ರ ರಾತ್ರಿಯಿಂದ ಜೂನ್ 4 ರ ಮುಂಜಾನೆ 3.20 ರವರೆಗೆ ಸತತವಾಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ ಸಂತ್ರಸ್ತೆಯ ಬೆತ್ತಲೆ ಫೋಟೋ ಹಾಗೂ ವೀಡಿಯೋಗಳನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಮುಂಜಾನೆ ಮಹಿಳೆಗೆ ಎಚ್ಚರವಾದಾಗ ಅವರು ಅಲ್ಲಿಂದ ತಪ್ಪಿಸಿಕೊಂಡು ಅಣ್ಣನ ಮನೆಗೆ ತಲುಪಿದ್ದಾರೆ.
ವೀಡಿಯೋ ವೈರಲ್: ತಡವಾಗಿ ಬೆಳಕಿಗೆ ಬಂದ ಸತ್ಯ!
ನಾಚಿಕೆಯಿಂದ ಮಹಿಳೆ ಈ ವಿಷಯವನ್ನು ಯಾರಿಗೂ ತಿಳಿಸಿರಲಿಲ್ಲ. ಆದರೆ ಜೂನ್ 8 ರಂದು ಸಂತ್ರಸ್ತೆಯ ಅಣ್ಣನ ಮಗ ಸತೀಶನು ಫೋನ್ ಮಾಡಿ, “ನಿನ್ನ ಬೆತ್ತಲೆ ವೀಡಿಯೋ ಮತ್ತು ಫೋಟೋಗಳು ಗ್ರಾಮಸ್ಥರ ಮೊಬೈಲ್ನಲ್ಲಿ ಹರಿದಾಡುತ್ತಿವೆ (ವೈರಲ್ ಆಗಿವೆ)” ಎಂದು ಹೇಳಿದಾಗ ಮಹಿಳೆಗೆ ಆಘಾತವಾಗಿದೆ. ತಕ್ಷಣವೇ ಗ್ರಾಮಕ್ಕೆ ಬಂದು ವಿಚಾರಿಸಿದಾಗ ಹತ್ತು ಮಂದಿ ಪಾಪಿಗಳು ಸೇರಿ ಈ ಕೃತ್ಯ ಎಸಗಿರುವುದು ದೃಢಪಟ್ಟಿದೆ. ತಕ್ಷಣವೇ ಮಹಿಳೆ ಬಸವಾಪಟ್ಟಣ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಬಂಧಿತ ಆರೋಪಿಗಳ ವಿವರ:
ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಐಪಿಐಸಿ/ಬಿಎನ್ಎಸ್ ಕಲಂ 70, 77 ರೆ/ವಿ 190 ಹಾಗೂ ಐಟಿ ಆಕ್ಟ್ ಕಲಂ 67(ಎ) ಅಡಿಯಲ್ಲಿ ಗುನ್ನೆ ನಂ. 88/2026 ರಂತೆ ಪ್ರಕರಣ ದಾಖಲಾಗಿದ್ದು, ಯಲೋದಹಳ್ಳಿ ಗ್ರಾಮದ ನಿವಾಸಿಗಳಾದ 10 ಜನರನ್ನು ಬಂಧಿಸಲಾಗಿದೆ, (ಬಂಧಿತ ಹತ್ತು ಆರೋಪಿಗಳಲ್ಲಿ ಒಬ್ಬಾತ ಅಪ್ರಾಪ್ತ (ಮೈನರ್) ಬಾಲಕನಾಗಿದ್ದಾನೆ.
ದಾವಣಗೆರೆ ಎಸ್ ಪಿ ಶೇಖರ್ ಟಿ. ಅವರ ಅಧಿಕೃತ ಪ್ರತಿಕ್ರಿಯೆ (SP Reaction):
ಈ ಭೀಕರ ಘಟನೆಯ ಕುರಿತು ಮಾಧ್ಯಮಗಳಿಗೆ ಅಧಿಕೃತ ಹೇಳಿಕೆ ನೀಡಿರುವ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶೇಖರ್ ಟಿ. ಅವರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
> “ಬಸವಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗ್ಯಾಂಗ್ ರೇಪ್ ಪ್ರಕರಣ ದಾಖಲಾಗಿದ್ದು, ಸಂತ್ರಸ್ತೆ ಒಟ್ಟು 10 ಜನರ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಎಲ್ಲಾ 10 ಆರೋಪಿಗಳನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಜೂನ್ 3 ರಂದು ರಾತ್ರಿ 7.30 ರ ಸುಮಾರಿಗೆ ಆರೋಪಿಗಳು ಮಹಿಳೆಗೆ ತಂಪು ಪಾನೀಯ ನೀಡಿದ್ದು, ಅದನ್ನು ಕುಡಿದು ಆಕೆ ಪ್ರಜ್ಞೆ ತಪ್ಪಿದಾಗ ಬೈಕ್ನಲ್ಲಿ ಜಮೀನಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ತದನಂತರ ಈ ಕೃತ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದನ್ನು ಆಧರಿಸಿ ಮಹಿಳೆ ದೂರು ದಾಖಲಿಸಿದ್ದಾರೆ. ವೀಡಿಯೋ ಮಾಡಿದವರು, ವೀಡಿಯೋ ಮಾಡಲು ಸಹಕರಿಸಿದವರು ಹಾಗೂ ಅತ್ಯಾಚಾರ ಎಸಗಿದವರು ಸೇರಿದಂತೆ ಎಲ್ಲರನ್ನೂ ದೂರಿನನ್ವಯ ಬಂಧಿಸಲಾಗಿದೆ. ಬಂಧಿತರಲ್ಲಿ ಒಬ್ಬ ಮೈನರ್ ಇದ್ದಾನೆ. ಸದ್ಯ ಪ್ರಕರಣದ ತನಿಖೆ ತೀವ್ರಗತಿಯಲ್ಲಿ ಸಾಗುತ್ತಿದೆ” ಎಂದು ಎಸ್ ಪಿ ಸ್ಪಷ್ಟಪಡಿಸಿದ್ದಾರೆ.
ಬಸವಾಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ಇಮ್ತಿಯಾಜ್ ಮತ್ತು ಶ್ರೀಮತಿ ಭಾರತಿ ಜೆ.ಇ ಅವರ ನೇತೃತ್ವದ ತಂಡ ಪ್ರಕರಣದ ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಕೈಗೆತ್ತಿಕೊಂಡಿದೆ. ಕಾಮುಕರ ಈ ವಿಕೃತ ಚೇಷ್ಟೆಗೆ ದಾವಣಗೆರೆ ಜಿಲ್ಲಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂಬ ಆಗ್ರಹ ಕೇಳಿಬರುತ್ತಿದೆ.
ವರದಿ: ಕುಮಾರ್ ಹೆಚ್ ಎಂ ಪಿ (Copyright projected)
Leave a comment