ಹೆಲ್ತ್‌ ಇನ್‌ ಯುವರ್‌ ವಾರ್ಡ್‌.. 15 ರಿಂದ 20 ಸಾವಿರ ಜನರಿಗೆ ಒಂದು ನಮ್ಮ ಕ್ಲಿನಿಕ್‌

ನಮ್ಮ ಕ್ಲಿನಿಕ್‌

ಬೆಂಗಳೂರು: ಒಂದೇ ಸೂರಿನಡಿ ಎಲ್ಲಾ ರೀತಿಯ ಆರೋಗ್ಯ ಸೇವೆಗಳು ಸೇರಿದಂತೆ ಬಡವರ, ಮಧ್ಯಮ ವರ್ಗದವರ ಮತ್ತು ಕೊಳಚೆ ಪ್ರದೇಶ ನಿವಾಸಿಗಳ ಸಂಜೀವಿನಿಯಾಗಿ ನಮ್ಮ ಕ್ಲಿನಿಕ್ಗಳು ಕಾರ್ಯನಿರ್ವಹಿಸಲಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ನಲ್ಲಿ ಬಿಬಿಎಂಪಿ ವ್ಯಾಪ್ತಿಯ ನಮ್ಮ ಕ್ಲಿನಿಕ್ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸುಧಾಕರ್, ಆರೋಗ್ಯ ಸೇವೆಗಳಿಗೆ ದೊಡ್ಡ ಮಹತ್ವ ನೀಡುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಅಭಿನಂದಿಸಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 243 ನಮ್ಮ ಕ್ಲಿನಿಕ್ಗಳು ಕಾರ್ಯಾರಂಭ ಮಾಡಲಿದ್ದು ಸದ್ಯ 108 ಕ್ಲಿನಿಕ್ಗಳು ಉದ್ಘಾಟನೆಯಾಗಿದೆ. ಇನ್ನು ಎರಡು ವಾರಗಳಲ್ಲಿ ಉಳಿದ ನಮ್ಮ ಕ್ಲಿನಿಕ್ಗಳಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ನಮ್ಮ ಕ್ಲಿನಿಕ್ಗಳು ನಗರ ಪ್ರದೇಶದ ಬಡವರಿಗೆ, ಕೂಲಿ, ಕಾರ್ಮಿಕರಿಗೆ, ಕೊಳಚೆ ಪ್ರದೇಶ ನಿವಾಸಿಗಳ ಜನರ ಆರೋಗ್ಯಕ್ಕೆ ಸಂಬಂಧಿಸಿದ ಹಲವು ರೀತಿಯ ಚಿಕಿತ್ಸೆಗಳನ್ನು ನೀಡಲಿದೆ. ಈ ಹಿಂದೆ ನಗರ ಪ್ರದೇಶದ 50-60 ಸಾವಿರ ಜನರಿಗೆ 1 ಚಿಕಿತ್ಸಾ ಕೇಂದ್ರವಿತ್ತು. ನಾವು ಈಗ ಅದನ್ನು 15-20 ಸಾವಿರ ಜನಸಂಖ್ಯೆಗೆ ಒಂದು ನಮ್ಮ ಕ್ಲಿನಿಕ್ ಸಿದ್ದವಾಗಿದೆ. ಕೆಲವೇ ದಿನಗಳಿಗೆ ಮಹಿಳೆಯರಿಗೆ ಆಯುಷ್ಮತಿ ಕ್ಲಿನಿಕ್ ಕೂಡ ಕಾರ್ಯಾರಂಭ ಮಾಡಲಿದೆ ಎಂದು ಘೋಷಿಸಿದರು.

ಈ ಕ್ಲಿನಿಕ್ಗಳ ಮೂಲಕ ಪ್ರಾಥಮಿಕ ಚಿಕಿತ್ಸಾ ಸೇವೆಗಳು ಉತ್ಕೃಷ್ಟವಾಗಲಿದೆ. ಒಂದೇ ಸೂರಿನಡಿಯಲ್ಲಿ ಬಾಣಂತಿಯರ ಸೇವೆಗಳು, ನವಜಾತ ಶಿಶುವಿನ ಆರೋಗ್ಯ ಸೇವೆಗಳು, ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳ ಚಿಕಿತ್ಸೆ ಸೇವೆಗಳು, ರಾಷ್ಟ್ರೀಯ ಲಸಿಕಾಕರಣ ಎಲ್ಲಾ ರೀತಿಯ ಸೇವೆಗಳು ಸೇರಿದಂತೆ 12 ವಿವಿಧ ರೀತಿಯ ಸೇವೆಗಳನ್ನು ಈ ಕ್ಲಿನಿಕ್ ನೀಡಲಿದೆ. ಜೊತೆಗೆ ಮಹಾಲಕ್ಷ್ಮಿ ಪುರಂ ವ್ಯಾಪ್ತಿಯಲ್ಲಿ ಇಂದು 4 ಉತ್ಕೃಷ್ಟ ಶಾಲೆಗಳು ಲೋಕರ್ಪಣೆಯಾಗಿವೆ. ಒಂದು 30 ಹಾಸಿಗೆ ಸಾಮರ್ಥ್ಯದ ರೆಫರೆಲ್ ಆಸ್ಪತ್ರೆ ರಮಣೀಯ ಉದ್ಯಾನವನ ಕೂಡ ಸಾರ್ವಜನಿಕರಿಗೆ ಲಭ್ಯವಾಗಿದ ಎಂದರು.
ಪ್ರತೀ ವಾರ್ಡ್ನಲ್ಲಿ ನಮ್ಮ ಕ್ಲಿನಿಕ್ ಕಾರ್ಯ ನಿರ್ವಹಿಸಲಿದೆ. ಆರೋಗ್ಯ ಸೇವೆಗಳಿಗೆ ಸಿಎಂ ಒತ್ತು ಕೊಡುವ ಮೂಲಕ ಈ ಸರ್ಕಾರ ಪಾರದರ್ಶಕ, ಜನಪರ, ಬಡವರ ಪರ ಎಂದು ನಿರೂಪಿಸಿದ್ದಾರೆ. ಇಷ್ಟು ಮಾತ್ರವಲ್ಲ, ಹುಟ್ಟುವಾಗಲೇ ಶ್ರವಣ ದೋಷದಿಂದ ಇರುವ 500 ಮಕ್ಕಳಿಗೆ ಈಗಾಗಲೇ ಚಿಕಿತ್ಸೆ ನೀಡಲಾಗಿದೆ. 19 ವರ್ಷ ಮೇಲ್ಪಟ್ಟ ಎಲ್ಲರಿಗೂ ದೃಷ್ಟಿ ದೋಷ ನಿವಾರಣೆ ಮಾಡುವ ಕಾರ್ಯಕ್ರಮ ಚಾಲ್ತಿಯಲ್ಲಿದೆ. ಪ್ರತಿದಿನ 30 ಸಾವಿರಕ್ಕೂ ಅಧಿಕ ಡಯಾಲಿಸಿಸ್ ನಡೆಯುತ್ತದೆ. ಜನರಿಗೆ ಸರ್ಕಾರದ ಆರೋಗ್ಯ ಕ್ಷೇತ್ರದ ವ್ಯವಸ್ಥೆಗಳ ಮೇಲೆ ವಿಶ್ವಾಸವಿದೆ. ಕಳೆದ 1 ವರ್ಷದಲ್ಲಿ 33 ಲಕ್ಷಕ್ಕೂ ಅಧಿಕ ಜನರು ನಮ್ಮ ಆರೋಗ್ಯ ಸೇವೆಯನ್ನು ಪಡೆದಿದ್ದಾರೆ. ಇದಕ್ಕಾಗಿ 1,500 ಕೋಟಿ ರೂ. ಗೂ ಹೆಚ್ಚು ವ್ಯಯವಾಗಿದೆ ಎಂದರು.
ನಮ್ಮ ಕ್ಲಿನಿಕ್ ಆರೋಗ್ಯ ವಲಯದಲ್ಲಿ ಕ್ರಾಂತಿ ಉಂಟು ಮಾಡಲಿದೆ. ಗಂಭೀರ ಸಮಸ್ಯೆಯಿಂದ ಹಿಡಿದು, ಸಣ್ಣ ಸಮಸ್ಯೆ ತನಕವೂ ಇಲ್ಲಿ ಚಿಕಿತ್ಸೆ ಲಭ್ಯವಿದೆ. ಪ್ರತಿ ವರ್ಷ ಒಮ್ಮೆಯಾದರೂ ನಮ್ಮ ಕ್ಲಿನಿಕ್ ಗೆ ಭೇಟಿ ನೀಡಿ ನಿಮ್ಮ ತಪಾಸಣೆ ಮಾಡಿಕೊಳ್ಳಿ. ರೋಗ ಲಕ್ಷಣವನ್ನು ಆರಂಭದಲ್ಲೇ ಕಂಡು ಹಿಡಿದರೆ ಚಿಕಿತ್ಸೆ ಸುಲಭ. ಮಾರಕ ರೋಗಗಳಿಂದ ಬಚಾವಾಗಬಹುದು ಎಂದು ಹೇಳಿದರು.
ಸರ್ಕಾರ ಬ್ರಾಂಡ್ ಬೆಂಗಳೂರಿಗಾಗಿ ಶ್ರಮಿಸುತ್ತಿದೆ. ಕೆ.ಗೋಪಾಲಯ್ಯನವರಂತಹ ಜನಪ್ರಿಯ ಶಾಸಕರಿಂದ ಹಾಗೂ ಅವರ ಜನಪರ ಕೆಲಸಗಳಿಂದ ಬೆಂಗಳೂರಿನ ಸೌಂದರ್ಯ ಮತ್ತಷ್ಟು ಹೆಚ್ಚಿದೆ. ಇವರು ಬದ್ಧತೆಯಿಂದ ಕೆಲಸ ಮಾಡಿ ಜನರ ಮನಸ್ಸು ಗೆದ್ದಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಅಭಿವೃದ್ಧಿಯೇ ಮಂತ್ರ. ಆದರೆ ವಿಪಕ್ಷಗಳ ಕೆಲಸ ಕೇವಲ ಟೀಕೆಗೆ ಮಾತ್ರ ಸೀಮಿತವಾಗಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!