ಏತನೀರಾವರಿ ಯೋಜನೆಗಳಡಿ ಕೆಲಸ ಮಾಡಲು ಸಿಕ್ಕಿರುವ ಅವಕಾಶ ನಿಮ್ಮೆಲ್ಲರ ಪುಣ್ಯ – ಇಂಜಿನಿಯರುಗಳಿಗೆ ತರಳಬಾಳು ಡಾ. ಶಿವಮೂರ್ತಿ ಸ್ವಾಮೀಜಿ ಹೇಳಿಕೆ

ದಾವಣಗೆರೆ: 21 ಕೆರೆಗಳ ಸಾಸ್ವೆಹಳ್ಳಿ ಏತನೀರಾವರಿ ಯೋಜನೆ, 57 ಕೆರೆಗಳ ಜಗಳೂರು ಏತನೀರಾವರಿ ಯೋಜನೆಗಳು ನಿಗಧಿತ ಅವಧಿಯಲ್ಲಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿ, ಈ ಏತನೀರಾವರಿ ಯೋಜನೆಗಳಡಿ ಕೆಲಸ ಮಾಡಲು ಸಿಕ್ಕಿರುವ ಅವಕಾಶ ನಿಮ್ಮೆಲ್ಲರ ಪುಣ್ಯ ಎಂದು ಭಾವಿಸಿ ಎಂದು ಏತನೀರಾವರಿ ಯೋಜನೆಯ ಇಂಜಿನಿಯರುಗಳಿಗೆ ತರಳಬಾಳು ಡಾ. ಶಿವಮೂರ್ತಿ ಸ್ವಾಮೀಜಿ ಹೇಳಿದರು.

ಇಂದು ಜಿ.ಎಂ.ಐ.ಟಿ. ಅತಿಥಿಗೃಹದಲ್ಲಿ ಕರೆದಿದ್ದ ಯೋಜನೆಗಳ ಸಾಧಕ ಬಾಧಕಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಕೆಲಸ ಮಾಡುವ ಇಚ್ಚಾಶಕ್ತಿ ನಿಮಗೆ ಬೇಕು ನಿಮ್ಮ ಈ ಕೆಲಸವನ್ನು ಮುಂದಿನ ತಲೆಮಾರು ನೆನಪಿನಲ್ಲಿಟ್ಟುಕೊಳ್ಳುತ್ತದೆ ಎಂದರು. ಭರಮಸಾಗರ ಏತನೀರಾವರಿ ಯೋಜನೆಗೆ ಅನೇಕ ಅಡ್ಡಿ ಆತಂಕಗಳು ಎದುರಾದವು ಅವನ್ನೆಲ್ಲಾ ಮೆಟ್ಟಿನಿಂತು ಇದೇ ತಿಂಗಳು 29 ರಂದು ಭರಮಸಾಗರ ಕೆರೆಗೆ ನೀರು ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇದೇ ಇಚ್ಚಾಶಕ್ತಿಯನ್ನು ಇತರೆಡಿಯಲ್ಲಿ ಪ್ರದರ್ಶಿಸಿ ಎಂದರು.

ಸಾಸ್ವೆಹಳ್ಳಿ ಏತನೀರಾವರಿ ಯೋಜನೆಯಡಿ ಯಾವುದೇ ಕಾರಣಕ್ಕೂ ಸಾಸ್ವೆಹಳ್ಳಿ ಬಳಿಯಿಂದ ಎತ್ತುವ ನೀರನ್ನು ಸೂಳೆಕೆರೆಯ ಕೆರೆ ನೀರಿನೊಂದಿಗೆ ಮಿಶ್ರ ಮಾಡಬೇಡಿ, ಒಂದು ವೇಳೆ ಮಿಶ್ರಣ ಮಾಡಿದ್ದೇ ಆದಲ್ಲಿ ಈಗಾಗಲೇ ಅನೇಕ ಕುಡಿಯುವ ನೀರಿನ ಯೋಜನೆಗಳ ಆಗರವಾಗಿರುವ ಶಾಂತಿಸಾಗರ ಕೋಲಾಹಲಕ್ಕೆ ಕಾರಣವಾಗಬಹುದು ಎಂದರು. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಸಾಸ್ವೆಹಳ್ಳಿ ಬಳಿ ತುಂಗಾ ಭದ್ರಾ ನದಿಯಿಂದ ಎತ್ತುವ ನೀರನ್ನು ಶಾಂತಿಸಾಗರಕ್ಕೆ ಹೊಂದಿಕೊಂಡಂತೆ ಸುಮಾರು 10-12 ಎಕರೆ ಜಾಗದಲ್ಲಿ ಸಮತೋಲನಾ ಜಲಾಶಯ ನಿರ್ಮಾಣ ಮಾಡಿ ಅದಕ್ಕೆ ತುಂಬಿಸಿ ನಂತರ ಅಲ್ಲಿಂದ ಮುಂದಿನ ಕೆರೆಗಳಿಗೆ ನೀರು ಹರಿಸಿ ಎನ್ನುವ ಸಲಹೆಯನ್ನು ನೀಡಿದರು.

ಏತನೀರಾವರಿ ಯೋಜನೆಯಡಿ ಬಂದೊದಗಬಹುದಾದ ಎಲ್ಲಾ ಸಮಸ್ಯೆಗಳು ಭರಮಸಾಗರ ಏತನೀರಾವರಿ ಯೋಜನೆಯಡಿ ಬಂದೊದಗಿದ್ದವು ಅವುಗಳನ್ನೆಲ್ಲಾ ಖುದ್ದು ನಾನೇ ಮುಂದೆ ನಿಂತು ಪರಿಹರಿಸಿದ್ದೇನೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಸಭೆಯ ಗಮನಕ್ಕೆ ತಂದರು.

ನೀವು ಸಮಸ್ಯೆಗಳೇನೆ ಇದ್ದರೂ ನನ್ನ ಗಮನಕ್ಕೆ ತನ್ನಿ ನೀವು ಸಮಸ್ಯೆಗಳನ್ನೇ ಹೇಳದಿದ್ದರೆ ನೀವು ಕೆಲಸ ಮಾಡುತ್ತಿಲ್ಲ ಎಂದರ್ಥ ಎಂದರು. ಕೆಲಸ ಮಾಡಲು ಆಸಕ್ತಿ ಇಲ್ಲದವರು ಬೇರೆ ಕಡೆ ವರ್ಗಾವಣೆ ಮಾಡಿಸಿಕೊಳ್ಳಿ, ಹಗಲು-ರಾತ್ರಿ ಎನ್ನದೇ ಕೆಲಸ ಮಾಡುವವರು ಮಾತ್ರ ಇದರಲ್ಲಿ ತೊಡಗಿಸಿಕೊಳ್ಳಿ ಎಂದರು.

ಪರಮಪೂಜ್ಯರಿಗೆ ಏತನೀರಾವರಿ ಯೋಜನೆಗಳ ಪರಿಣಾಮಕಾರಿ ಅನುಷ್ಟಾನದ ಬಗ್ಗೆ ವಿಶೇಷ ವಿದ್ವತ್ತು ಇದೆ, ನಮಗೆ ಊಹಿಸಲು ಸಾಧ್ಯವಾಗದಂತಹ ಸಮಸ್ಯೆಗಳನ್ನು ಪೂಜ್ಯರೂ ಊಹಿಸಬಲ್ಲರು, ರವಿ ಕಾಣದ್ದನ್ನು ಕವಿ ಕಂಡ ಎನ್ನುವ ರೀತಿ ಪೂಜ್ಯರು ಕವಿಗಳಿದ್ದ ಹಾಗೆ, ಪೂಜ್ಯರ ಮಾರ್ಗದರ್ಶನದಲ್ಲಿ ನಾವು ಮುಂದೆ ಸಾಗೋಣ ಎಂದರು.

ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ನೀವು ನಮಗೆ ತಿಳಿಸಿದ ಸಮಸ್ಯೆಗಳನ್ನು ಕಾಲಮತಿಯೊಳಗೆ ಪರಿಹರಿಸಿಕೊಟ್ಟಿದ್ದೇವೆ, ರೈಲ್ವೆ ಲೈನ್ ಕ್ರಾಸಿಂಗ್ ಇರಬಹುದು, ಬೆಸ್ಕಾಂ ನ ಹೈಟೆನ್ಷನ್ ಲೈನ್ ಕೆಳಗೆ ಪೈಪ್ ಲೈನ್ ಹಾಕಲು ಅನುಮತಿ ಇರಬಹುದು ಇಂತಹ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಿದ್ದೇವೆ. ಇಂತಹ ಯಾವುದೇ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ಅಥವಾ ಆಯಾ ಭಾಗದ ಶಾಸಕರುಗಳ ಗಮನಕ್ಕೆ ತಂದರೆ ಹೆಚ್ಚಿನ ಕಾಳಜಿ ವಹಿಸಿ ಪರಿಹರಿಸುತ್ತಾರೆ ಎಂದರು.

ಶಾಸಕರಾದ ಮಾಡಾಳ್ ವಿರುಪಾಕ್ಷಪ್ಪ ಮಾತನಾಡಿ ಅನೇಕ ಕಡೆ ಗ್ರಾಮಸ್ಥರ ಹಾಗೂ ರೈತರುಗಳ ಅಡಚಣೆಯನ್ನು ನಾನು ಪರಿಹರಿಸಿದ್ದೇನೆ ಎಂದರು.

ಸಮಾಲೋಚನಾ ಸಭೆಯಲ್ಲಿ ಪರಮಪೂಜ್ಯ ತರಳಬಾಳು ಜಗದ್ಗುರು ಡಾ: ಶಿವಮೂರ್ತಿ ಶಿವಾಚಾರ್ಯ ಮಹಸ್ವಾಮಿಗಳು ದಿವ್ಯಸಾನಿಧ್ಯ ವಹಿಸಿದ್ದರು, ಸಂಸದರಾದ ಡಾ:ಜಿ.ಎಂ.ಸಿದ್ದೇಶ್ವರ, ಶಾಸಕರುಗಳಾದ ಮಾಡಾಳ್ ವಿರುಪಾಕ್ಷಪ್ಪ, ಎಸ್.ವಿ.ರಾಮಚಂದ್ರಪ್ಪ, ಪ್ರೊಫೆಸರ್ ಲಿಂಗಣ್ಣ, ಜಿಲ್ಲಾಧಿಕಾರಿಗಳಾದ ಮಹಾಂತೇಶ್ ಬೀಳಗಿ, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ರಿಷ್ಯಂತ್ ಸಿಂಗ್, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಮಲ್ಲಿಕಾರ್ಜುನ ಗುಂಗೆ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಕರ್ನಾಟಕ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಶಿವಾನಂದ ಬಣಕಾರ್, ಅಧೀಕ್ಷಕ ಅಭಿಯಂತರರಾದ ರಮೇಶ್, ಕೆ.ಪಿ.ಟಿ.ಸಿ.ಎಲ್. ಅಧೀಕ್ಷಕ ಅಭಿಯಂತರರಾದ ಸುಭಾಷ್‌ಶ್ಚಂದ್ರ, ಕಾರ್ಯಪಾಲಕ ಅಭಿಯಂತರರುಗಳಾದ ಮಲ್ಲಪ್ಪ, ಸುರೇಶ್ ಸೇರಿದಂತೆ ಅನೇಕ ಅಧಿಕಾರಿಗಳು ಸಭೆಯಲ್ಲಿದ್ದರು.

Leave a Reply

Your email address will not be published. Required fields are marked *

error: Content is protected !!