ಸಚಿವ ಮಲ್ಲಣ್ಣಗೆ ಅದ್ದೂರಿಯಾಗಿ ವೆಲ್ಕಮ್ ಮಾಡಿದ ಬೆಣ್ಣೆ ನಗರಿ ಕೈ ಪಡೆ
![](https://garudavoice.com/wp-content/uploads/2023/06/IMG_20230603_131423-1.jpg)
ದಾವಣಗೆರೆ: ಇಡೀ ನಗರದ್ಯಾಂತ ಸಚಿವರಿಗೆ ಶುಭ ಕೋರುವ ಫ್ಲೇಕ್ಸ್ಗಳು, ಅಲ್ಲದೇ ಕುಟುಂಬದೊಂದಿಗೆ ಇರುವ ಪೋಟೋ ಇರುವ ಫ್ಲೆಕ್ಸ್ಗಳನ್ನು ಇಕ್ಕೆಲಗಳಲ್ಲಿ ಹಾಕಿ ಅಭಿಮಾನ ಮೆರೆಯುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು, ಹೆದ್ದಾರಿಯಲ್ಲಿ ಸಚಿವರ್ ಡಿಫೆರೆಂಟ್ ಪೋಟೊ, ಅಲ್ಲದೇ ಸ್ವಾಗತಕ್ಕಾಗಿ ಡಿಜೆ, ಮಧ್ಯಾಹ್ನದಿಂದಲೇ ಸಚಿವರ ಆಗಮನಕ್ಕೆ ಕಾದಿದ್ದ ಕೈ ಪಡೆ…ಹೆಬ್ಬಾಳ್ ಟೋಲ್ ಗೇಟ್ ನಲ್ಲಿ ಸಚಿವರ ಆಗಮನಕ್ಕೆ ಕಾಯುತ್ತಿರುವ ಶಾಸಕರು, ಸಚಿವರು ಬರುವ ಹಿನ್ನೆಲೆಯಲ್ಲಿ ಸನ್ನದ್ದಾರಾಗಿದ್ದ ಕೈ ಪಡೆ….
ಇದು ದಾವಣಗೆರೆ ನಗರದ್ಯಾಂತ ಕಂಡು ಬಂದ ಒಂದು ಝಲಕ್… ರಾಜ್ಯ ಗಣಿ, ಭೂ ವಿಜ್ಞಾನ ಮತ್ತು ತೋಟಗಾರಿಕಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಅಭಿಮಾನಿ ಸಮೂಹ ಅದ್ದೂರಿಯಾಗಿ ಬರ ಮಾಡಿಕೊಳ್ಳಲು ಇಡೀ ದಾವಣಗೆರೆ ಮಧುವಣಗಿತ್ತಿಯಂತೆ ಸಿಂಗಾರಗೊಂಡಿತ್ತು.
ಬೆಂಗಳೂರಿನಿಂದ ಆಗಮಿಸಿದ್ದ ಸಚಿವರು ಹೆಬ್ಬಾಳ್ ಟೋಲ್ಗೇಟ್ಗೆ ಬರುತ್ತಿದ್ದಂತೆ ಹೂಗುಚ್ಚ ನೀಡಿ ಶುಭಾಶಯವನ್ನು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ಕೋರಿದರು. ಅಲ್ಲದೇ ಮಾಯಕೊಂಡ ಶಾಸಕ ಬಸವಂತಪ್ಪ ನೇತೃತ್ವದಲ್ಲಿ ಬೈಕ್ ರ್ಯಾಲಿಗೆ ಹೆಬ್ಬಾಳ್ ಟೋಲ್ಗೇಟ್ನಿಂದ ಚಾಲನೆ ಸಿಕ್ಕಿತು. ಇನ್ನು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ನಗರದ ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗ ಸಾವಿರಾರು ಅಭಿಮಾನಿಗಳು ಮಧ್ಯಾಹ್ನದಿಂದಲೇ ಬೇಸರಿಕೊಳ್ಳದೇ ತಮ್ಮ ನೆಚ್ಚಿನ ನಾಯಕನನ್ನು ಕಾಣಲು ಕಾಯುತ್ತಿದ್ದರು.
ದಾವಣಗೆರೆಗೆ ಆಗಮಿಸುವ ಮುನ್ನ ಸಿರಿಗೆರೆಯ ತರಳಬಾಳು ಮಠಕ್ಕೆ ಭೇಟಿ ನೀಡಿ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಆಶೀರ್ವಾದ ಪಡೆದುಕೊಂಡ ನಂತರ 6.30 ರ ಸುಮಾರಿಗೆ ಸಚಿವರು ದಾವಣಗೆರೆಗೆ ಆಗಮಿಸಿದರು. ನಂತರ ಹೂವಿನಿಂದ ಸಿಂಗರಿಸಿದ್ದ ಜಿಪಂ ಆವರಣದಲ್ಲಿರುವ ಜಿಲ್ಲೆಯ ನಿರ್ಮಾತೃ ದಿ. ಜೆ.ಎಚ್. ಪಟೇಲ್ ಪ್ರತಿಮೆ ಬಳಿ ಇಟ್ಟಿದ್ದ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ನಮನ ಸಲ್ಲಿಸಿದರು.
ಸಚಿವರು ಕಾರಿನಲ್ಲಿ ಆಗಮಿಸುತ್ತಿದ್ದಂತೆಯೆ ಅವರಿಗೆ ಹಾರ-ತುರಾಯಿ ಹಾಕಲು ನೂಕು ನುಗ್ಗಲು ಉಂಟಾಯಿತು. ಜನರನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಹರ ಸಾಹಸ ಪಡಬೇಕಾಯಿತು. ಸಾಗರೋಪಾದಿಯಲ್ಲಿ ಆಗಮಿಸಿದ್ದ ಎಸ್ಎಸ್ಎಂ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರ ಕೇಕೆ, ಶಿಳ್ಳೆ, ಜೈಕಾರ, ಹರ್ಷೋದ್ಘಾರಗಳು ಮುಗಿಲು ಮುಟ್ಟಿದ್ದವು.ಡಿಜೆಯಲ್ಲಿ ಸಿಂಹ..ಸಿಂಹ, ಜೈ ಜೈ ಮಲ್ಲಣ್ಣ ಹಾಡು ಯುವ ಕಾರ್ಯಕರ್ತರನ್ನು ಹುರಿದುಂಬಿಸಿದವು. ಕೆಲವರು ನಿಂತಲ್ಲೇ ಸೊಂಟ ತಿರುಗಿಸಿದರು. ಸಚಿವರು ಬರುವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಬಳಿ ಸಾವಿರಾರು ಕಾರ್ಯಕರ್ತರು ಹಾರ, ತುರಾಯಿಗಳ ಜತೆ ತಮ್ಮ ಬೈಕ್, ಕಾರುಗಳಿಗೆ ಕಾಂಗ್ರೆಸ್ ಬಾವುಟಗಳನ್ನು ಕಟ್ಟಿಕೊಂಡು ಹಾಜರಿದ್ದರು. ಇನ್ನೂ ಹೆಬ್ಬಾಳ್ ಟೋಲ್ನಲ್ಲಿ ಕಾರುಗಳು ಸಾಲುಗಟ್ಟಿ ನಿಂತಿದ್ದವು.
ಜಿಲ್ಲಾ ಪಂಚಾಯತ್ ಮುಂಭಾಗದಿಅದ ಆರಂಭಗೊಂಡ ಮೆರವಣಿಗೆ ಹದಡಿ ರಸ್ತೆಯ ಮೂಲಕ ಐಟಿಐ ಕಾಲೇಜು ಮುಂಭಾಗದ ಮೂಲಕ ಆಗಮಿಸಿತು. ದಾರಿ ಉದ್ದಕ್ಕೂ ಹಾರ, ತುರಾಯಿ ಹಿಡಿದುಕೊಂಡಿದ್ದ ಸಾವಿರಾರು ಅಭಿಮಾನಿಗಳು ಎಸ್ಎಸ್ಎಂ ಅವರಿಗೆ ಹಾರ ಹಾಕಲು ಸಾಧ್ಯವಾಗದೇ ನಿಂತಲ್ಲಿಂದಲೇ ಹೂವಿನ ಹಾರಗಳನ್ನು ತೆರೆದ ವಾಹನದತ್ತ ಎಸೆದರು. ಇದಕ್ಕೆ ಪ್ರತಿಯಾಗಿ ಎಸ್. ಎಸ್. ಮಲ್ಲಿಕಾರ್ಜುನ್ ಅಭಿಮಾನಿಗಳು, ಕಾರ್ಯುಕರ್ತರಿಗೆ ಕೈ ಮಗಿದು ಧನ್ಯವಾದ ಅರ್ಪಿಸಿದರು.
ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರೊಂದಿಗೆ ಹರಪನಹಳ್ಳಿ ಕ್ಷೇತ್ರದ ಶಾಸಕಿ ಲತಾ ಮಲ್ಲಿಕಾರ್ಜುನ್, ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ, ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್, ಜಗಳೂರು ಶಾಸಕ ಬಿ.ದೇವೆಂದ್ರಪ್ಪ, ಹರಿಹರ ಮಾಜಿ ಶಾಸಕ ಎಸ್.ರಾಮಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ, ದೂಡಾ ಮಾಜಿ ಅಧ್ಯಕ್ಷ ಮಾಲತೇಶರಾವ್ ಜಾಧವ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ಮೆರವಣಿಗೆಯು ದಾವಣಗೆರೆ ಜಿಲ್ಲಾ ಪಂಚಾಯತ್ ಮುಂಭಾಗ ಪ್ರಾರಂಭವಾಗಿ ಗಣೇಶ ದೇವಸ್ಥಾನ ಹದಡಿ ರಸ್ತೆ, ಐ.ಟಿ.ಐ. ಕಾಲೇಜ್ ಮುಂಭಾಗದಿಂದ 60 ಅಡಿ ರಸ್ತೆಯ ಮೂಲಕ ನಿಟುವಳ್ಳಿ ದುರ್ಗಾಂಬಿಕ ಸರ್ಕಲ್, ನಿಟುವಳ್ಳಿ, ಆರ್.ಎಸ್. ಶೇಖರಪ್ಪನವರ ಮನೆ ಮುಂಭಾಗ, ಕೊಂಡಜ್ಜಿ ಬಸಪ್ಪ ಸರ್ಕಲ್ ಹದಡಿ ರಸ್ತೆ, ವಿದ್ಯಾರ್ಥಿ ಭವನ ಸರ್ಕಲ್, ಹದಡಿ ರಸ್ತೆ, ಕೆ.ಇ.ಬಿ. ಸರ್ಕಲ್, (ಅಂಬೇಡ್ಕರ್ ಸರ್ಕಲ್) ಹದಡಿ ರಸ್ತೆ, ಜಯದೇವ ಸರ್ಕಲ್, ಮಹಾನಗರ ಪಾಲಿಕೆ ಕಛೇರಿ ಮುಂಭಾಗದಿಅದ ಅರುಣ್ ಸರ್ಕಲ್ ಮುಖಾಂತರ ರೈಲ್ವೆಗೇಟ್ ಮುಖಾಂತರ ಹೊಂಡದ ಸರ್ಕಲ್, ದುರ್ಗಾಂಬಿಕ ದೇವಸ್ಥಾನ ಶಿವಾಜಿ ವೃತ್ತ, ಹಗೇದಿಬ್ಬ ಸರ್ಕಲ್, ಅಜಾದ್ ನಗರದ ಮುಖ್ಯರಸ್ತೆ ಮೂಲಕ ಹಾದು ಅರಳಿಮರ ಸರ್ಕಲ್, ವೆಂಕಟೇಶ್ವರ ಸರ್ಕಲ್ ನಲ್ಲಿ ಮುಕ್ತಾಯ ಆಯಿತು. ಇನ್ನು ಜಿಪಂ ಬಳಿ ಜಿಲ್ಲಾಡಳಿತ ಸಚಿವರಿಗೆ ವೆಲ್ಕಮ್ ಕೋರಿದರು. ಡಿಸಿ ಶಿವಾನಂದ ಕಾಪಶಿ ಡಿಸಿ ಶಿವಾನಂದ ಕಾಪಶಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುರೇಶ್ ಇಟ್ನಾಳ್, ಎಸ್ಪಿ ಡಾ.ಕೆ. ಅರುಣ್ ಸಚಿವರಿಗೆ ಹೂ ಗುಚ್ಚ ನೀಡಿದರು. ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ರೇಣುಕಾ, ತಹಸೀಲ್ದಾರ್ ಡಾ. ಎಂ.ಎನ್. ಅಶ್ವಥ್ ಸೇರಿದಂತೆ ಅನೇಕ ಅಧಿಕಾರಿಗಳು ಹಾಜರಿದ್ದರು.