ನವಂಬರ್ 2 ರಿಂದ 7 ರವರೆಗೆ ಸಾಣೆಹಳ್ಳಿಯಲ್ಲಿ ಶಿವಸಂಚಾರ ನಾಟಕೋತ್ಸವ
ದಾವಣಗೆರೆ: ಸಾಣೆಹಳ್ಳಿಯಲ್ಲಿ ಶಿವಸಂಚಾರ ನಾಟಕೋತ್ಸವ ಬೆಳ್ಳಿಹಬ್ಬ ಕಾರ್ಯಕ್ರಮವು ಬರುವ ನ. ೨ರಿಂದ ೭ ರವರೆಗೆ ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ ಸಾನಿಧ್ಯದಲ್ಲಿ ಕನ್ನಡ ರಾಜ್ಯೋತ್ಸವ, ವಿಚಾರ ಮಾಲಿಕೆ, ವಿಚಾರ ಸಂಕಿರಣ, ಶ್ರೀ ಶಿವಕುಮಾರ ಪ್ರಶಸ್ತಿ ಪ್ರದಾನ ಮತ್ತು ನಾಟಕೋತ್ಸವ ಜರುಗಲಿದೆ.
ನ.೨ರಂದು ಸಂಜೆ ೬ ಗಂಟೆಗೆ ಸಿಜಿಕೆ ನುಡಿ-ಚಿತ್ರ ಟಂಕಸಾಲೆಯನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದು, ಕವಿ, ಪ್ರೊ. ಡಾ. ದೊಡ್ಡರಂಗೇಗೌಡ ಕನ್ನಡ ರಾಜ್ಯೋತ್ಸವ ಉದ್ಘಾಟಿಸುವರು, ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ನಾಟಕೋತ್ಸವ ಹಾಗೂ ರಾಷ್ಟ್ರೀಯ ರಂಗಶಾಲಾ ಶಾಖೆಯ ನಿರ್ದೇಶಕರಾದ ವೀಣಾ ಶರ್ಮಾ ಭೂಸನೂರಮಠ ಶಿವಸಂಚಾರ ನಾಟಕಗಳ ಉದ್ಘಾಟನೆ ನೆರವೇರಿಸಲಿದ್ದಾರೆ.
ವಿಪ ಸದಸ್ಯ ಎಸ್. ರುದ್ರೇಗೌಡ, ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಕರ್ನಾಟಕ ರಾಜ್ಯ ಖನಿಜ ನಿಗಮ ಅಧ್ಯಕ್ಷ ಎಸ್. ಲಿಂಗಮೂರ್ತಿ, ರಂಗ ಸಂಘಟಕ ಶ್ರೀನಿವಾಸ್ ಜಿ. ಕಪ್ಪಣ್ಣ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಇದೇ ಸಂದರ್ಭದಲ್ಲಿ ಶಿವಸಂಚಾರ-೨೫ರ ಕೈಪಿಡಿ, ಹಿಂದಣ ಹೆಜ್ಜೆಯ ನೋಡಿ, ಸಮಾಧಾನ ಕೃತಿಗಳ ಲೋಕಾರ್ಪಣೆ ನಡೆಯಲಿದೆ. ಒಕ್ಕಲಿಗ ಮುದ್ದಣ್ಣ ನಾಟಕ ಪ್ರದರ್ಶನಗೊಳ್ಳಲಿದೆ.
ನ.೩ರಂದು ಸಂಜೆ ೬ ಕ್ಕೆ ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ’ಯುವಪೀಳಿಗೆಯ ಜವಾಬ್ದಾರಿ’ ಕುರಿತು ಸಿಐಡಿ ಎಸ್ಪಿ ರವಿ ಡಿ. ಚೆನ್ನಣ್ಣನವರ್ ಉಪನ್ಯಾಸ ನೀಡಲಿದ್ದಾರೆ. ಸಚಿವ ಜೆ.ಸಿ. ಮಾಧುಸ್ವಾಮಿ, ಸಂಸದ ಜಿ.ಎಂ. ಸಿದ್ದೇಶ್ವರ್, ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವಕುಮಾರ್, ಶಾಸಕರಾದ ಡಿ.ಎಸ್. ಸುರೇಶ್, ಟಿ.ರಘುಮೂರ್ತಿ, ವಿಪ ಸದಸ್ಯ ವೈ.ಎ. ನಾರಾಯಣಸ್ವಾಮಿ, ಚಿತ್ರದುರ್ಗ ಜಿಪಂ ಸಿಇಓ ಡಾ. ಕೆ. ನಂದಿನಿದೇವಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪಾದುಕ ಕಿರೀಟ ನಾಟಕ ಪ್ರದರ್ಶನಗೊಳ್ಳಲಿದೆ.
ನ.೪ರಂದು ಅಥಣಿ ಶ್ರೀ ಮೊಟಗಿಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಸಾನಿಧ್ಯದಲ್ಲಿ ಸಂಜೆ ೬ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ’ವಚನಗಳಲ್ಲಿ ಆರೋಗ್ಯ-ಆಹಾರ ವಿಷಯ ಕುರಿತು ಡಾ. ಅವಿನಾಶ್ ಕವಿ ಉಪನ್ಯಾಸ ನೀಡಲಿದ್ದಾರೆ, ಸಚಿವರಾದ ಕೆ.ಎಸ್. ಈಶ್ವರಪ್ಪ, ವಿ. ಸೋಮಣ್ಣ, ಶಾಸಕರಾದ ಜಿ.ಎಸ್. ತಿಪ್ಪಾರೆಡ್ಡಿ, ಬೆಳ್ಳಿ ಪ್ರಕಾಶ್, ಕೆ. ಪೂರ್ಣಿಮಾ, ರಾಜಕೀಯ ಪ್ರಮುಖ ಷಣ್ಮುಖಪ್ಪ ಹನುಮಲಿ, ನಟ ಸಂಗಮೇಶ ಉಪಾಸೆ, ಕರ್ನಾಟಕ ಸಂಘ ಪ್ರಧಾನ ಕಾಐದರ್ಶಿ ಆರ್. ರೇಣು ಕುಮಾರ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಕೆ.ಆರ್. ಮಂಗಳ ಅವರು ರಚಿಸಿರುವ ’ನಾನು ಯಾರು ಎಂಬ ಆಳ ನಿರಾಳ’ ಕೃತಿ ಲೋಕಾರ್ಪಣೆಗೊಳ್ಳಲಿದೆ.
ನ.೫ರಂದು ಸಂಜೆ ೬ ಕ್ಕೆ ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಮೈಸೂರು ಕುಂದೂರು ಮಠದ ಡಾ. ಶ್ರೀ ಶರತ್ಚಂದ್ರ ಸ್ವಾಮೀಜಿ ವಹಿಸಲಿದ್ದು, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್ ಕೊರೋನೋತ್ತರ ಬದುಕು ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ.
ಸಚಿವ ಬಿ.ಸಿ. ನಾಗೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ಎಸ್.ಎ. ರವೀಂದ್ರನಾಥ್, ಎನ. ಲಿಂಗಣ್ಣ, ಅರಸಿಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ, ಚಿತ್ರದುರ್ಗ ಎಸ್ಪಿ ಜಿ. ರಾಧಿಕಾ, ಚಿತ್ರದುರ್ಗದ ರಾಜಕೀಯ ಪ್ರಮುಖ ಹೆಚ್. ಆನಂದಪ್ಪ ಅತಿಥಿಗಳಾಗಿ ಆಗಮಿಸಲಿದ್ದಾರೆ. ಲೇಖಕ ಹೆಚ್.ಎಸ್. ನವೀನ್ಕುಮಾರ್ ಅವರ ಅಮೃತ ಬಿಂದುಗಳು ಕೃತಿ ಲೋಕಾರ್ಪಣೆಗೊಳ್ಳಲಿದೆ. ಗಡಿಯಾಂಕ ಕುಡಿಮುದ್ದ ನಾಟಕ ಪ್ರದರ್ಶನಗೊಳ್ಳಲಿದೆ.
ನ.೬ರಂದು ಬೆಳಿಗ್ಗೆ ೧೦:೩೦ ಕ್ಕೆ ನಡೆಯುವ ವಿಚಾರ ಸಂಕಿರಣದಲ್ಲಿ ಆನ್-ಲೈನ್ ಆಫ್-ಲೈನ್ ವಿಷಯ ಕುರಿತು ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಹಾಗೂ ಮೊಬೈಲ್ ಹತ್ತಿರ-ಪುಸ್ತಕ ದೂರ ದೂರ ವಿಷಯ ಕುರಿತು ಕವಿ ಮತ್ತು ನಾಟಕಕಾರ ಹೆಚ್. ಡುಂಡಿರಾಜ್ ಮಾತನಾಡಲಿದ್ದಾರೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಚಿತ್ರದುರ್ಗದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ. ರವಿಶಂಕರ ರೆಡ್ಡಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಸತ್ಯ ಹರಿಶ್ಚಂದ್ರ ನಾಟಕ ಪ್ರದರ್ಶನಗೊಳ್ಳಲಿದೆ.
ಅಂದು ಸಂಜೆ ೬ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಚಿಗರಹಳ್ಳಿ ಮರುಳಶಂಕರದೇವ ಗುರುಪೀಠದ ಶ್ರೀ ಸಿದ್ದಬಸವ ಕಬೀರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಉಪ್ಪಳ್ಳಿಯ ರಾಜ್ಯಮಟ್ಟದ ಸಾವಯವ ಕೃಷಿ ಉನ್ನತಾಧಿಕಾರ ಸಮಿತಿ ಅಧ್ಯಕ್ಷ ಆ. ಶ್ರೀ. ಆನಂದ ಸಾವಯವ ಕೃಷಿ ಕುರಿತು ಉಪನ್ಯಾಸ ನೀಡಲಿದ್ದಾರೆ. ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಕೃಷಿ ಸಚಿವ ಬಿ.ಸಿ. ಪಾಟೀಲ, ಚಿತ್ರದುರ್ಗ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಕುಲಪತಿ ಡಾ. ಕರಿಸಿದ್ದಪ್ಪ, ಚಿತ್ರ ನಿರ್ದೇಶಕ ನಂದಕಿಶೋರ್, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಡಾ. ಪಿ. ರಮೇಶ್ ಕುಮಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡಾ. ಚಂದ್ರಶೇಖರಯ್ಯ ಅವರು ರಚಿಸಿರುವ ಧೀರ ಸನ್ಯಾಸಿ ಕೃತಿ ಇದೇ ವೇಳೆ ಲೋಕಾರ್ಪಣೆಗೊಳ್ಳಲಿದೆ.
ನ.೭ರಂದು ಸಂಜೆ ೬ ಗಂಟೆಗೆ ಶ್ರೀ ಶಿವಕುಮಾರ ಪ್ರಶಸ್ತಿ ಪ್ರದಾನ ಮತ್ತು ಸಮಾರೋಪ ಸಮಾರಂಭ ಜರುಗಲಿದ್ದು, ರಂಗ ಸಂಘಟಕ ಕೆ.ವಿ. ನಾಗರಾಜಮೂರ್ತಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ, ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಿ ಸಿಎಂ ಬಸವರಾಜ್ ಬೊಮ್ಮಾಯಿ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಪಾಲ್ಗೊಳ್ಳಲಿದ್ದು, ಅತಿಥಿಗಳಾಗಿ ಶಾಸಕ ಗೂಳಿಹಟ್ಟಿ ಡಿ. ಶೇಖರ್, ಎಸ್.ವಿ. ರಾಮಚಂದ್ರಪ್ಪ, ಎಂ. ಚಂದ್ರಪ್ಪ, ನಟಿ ಡಾ. ಜಯಮಾಲ ಭಾಗವಹಿಸಲಿದ್ದಾರೆ. ಇದೇ ವೇಳೆ ಮಹಾಬೆಳಗು ನಾಟಕ ಪ್ರದರ್ಶನಗೊಳ್ಳಲಿದೆ.