ಹೊನ್ನಾಳಿ ಅಖಾಡದಲ್ಲಿ ಟಗರು ಡಿಚ್ಚಿ

ಹೊನ್ನಾಳಿ : ಅಖಾಡದಲ್ಲಿ. ಕಲಿಗಳಿಬ್ಬರ ಕಾದಾಟ… ಕಾಲು ಕೆರೆದು ಓಡಿ ಬಂದು ಢಿಚ್ಚಿ ಕೊಡುವ ಟಗರು….. ಕಾಲು ಕೆರೆದು ಮುನ್ನುಗ್ಗುವ ವೇಳೆ ಜನರ ಶಿಳ್ಳೆ… ಕಿಕ್ಕೆರೆದು ತುಂಬಿರುವ ಅಂಗಳ…

ಇದು ಹೊನ್ನಾಳಿ ತಾಲೂಕು ಕ್ರೀಡಾಂಗಣದಲ್ಲಿ ಶ್ರೀ ದುರ್ಗಮ್ಮದೇವಿ ಮತ್ತು ಶ್ರೀ ಮರಿಯಮ್ಮದೇವಿ ಜಾತ್ರಾ ಮಹೋತ್ಸವ ನಿಮಿತ್ತ ಶನಿವಾರ ನಡೆದ 11 ನೇ ವರ್ಷದ ರಾಷ್ಟ್ರ ಮಟ್ಟದ ಟಗರಿನ ಬಲಪ್ರದರ್ಶನ ಸ್ಪರ್ಧೆಯಲ್ಲಿ ಕಂಡು ಬಂದ ದೃಶ್ಯಗಳು.

ಎಡ ಮತ್ತು ಬಲದಿಂದ ಬರುವ ಟಗರುಗಳು ವೃತ್ತಾಕಾರದಲ್ಲಿ ಕಾದಾಟ ನಡೆಸಬೇಕಿತ್ತು.. ತನ್ನ ಮಾಲೀಕ ಹೆಸರಿಟ್ಟು ಕೂಗಿದ ವೇಳೆ ಓಡಿ ಬಂದು ಡಿಚ್ಚಿ ಕೊಡುತ್ತಿದ್ದ ಟಗರುವಿನ ಚಿತ್ರಣ ಮೈ ರೋಮಾಂಚನಗೊಳಿಸುತ್ತಿತ್ತು. ಎತ್ತ ನೋಡಿದರೂ ಅಲ್ಲಿ ಯುದ್ದೋತ್ಸಾಹವಿತ್ತು… ಕಲಿಗಳಿಬ್ಬರ ರಣರಂಗ ಪ್ರವೇಶ, ಮುಖಾಮುಖಿಗೆ ಟಗರುಗಳು ಅಣಿಯಾಗಿದ್ದವು, ವೇಗದ ಓಟದಿಂದ ನೆಗೆದು ಡಿಚ್ಚಿ ಹೊಡೆಯುವ ಈ ಕಲಿಗಳಿಗೆ ಕೋಡುಗಳೇ ಆಯುಧಗಳಾಗಿದ್ದವು.. ಮಾಲೀಕರೇ ಟಗರುಗಳಿಗೆ ಕ್ರೀಡಾ ಪ್ರೋತ್ಸಾಹಕರಾಗಿದ್ದರು.

ಟಗರಿನ ಮೈಯನ್ನು ಚೆನ್ನಾಗಿ ತಿಕ್ಕಿ, ಕೂದಲುಗಳನ್ನು ವಿವಿಧ ನಮೂನೆಯಿಂದ ಕತ್ತರಿಸಿ, ಜೂಲ್ ಹಾಕಿ, ಕೊಂಬುಗಳಿಗೆ ವಿವಿಧ ಬಣ್ಣ ಹಚ್ಚಿ ಶೃಂಗರಿಸಲಾಗಿತ್ತು. ಈ ನಡುವೆ ಟಗರು ಕಾಳಗ ನೋಡಲು ಹಳ್ಳಿಗಳಿಂದ ತಂಡೋಪತಂಡವಾಗಿ ಜನರು ಬಂದು ಆಟವನ್ನು ಪ್ರೋತ್ಸಾಹಿಸಿದರು. ಶಿವಮೊಗ್ಗ ನಾಗ…. ಸಿನಿಮಾ ನಟರಾದ ಸಿದ್ದಲಿಂಗು, ಪಾರಿಜಾತ, ಕಳ್ಳ ಮಳ್ಳ, ಡೆಡ್ಲಿ ಸೋಮ, ಕಿಲಾಡಿ ಕಿಟ್ಟ, ದುನಿಯಾ, ಕಿಚ್ಚ, ರೆಬೆಲ್ ಸ್ಟಾರ್‌, ಚಾಲೆಜಿಂಗ್ ಸ್ಟಾರ್, ಜಾಜಿ ಮಲ್ಲಿಗೆ, ನಾನಾ ಹೆಸರುಗಳಿಂದ ಗುರುತಿಸಲಾಗಿದ್ದ ಟಗರುಗಳ ಮುಗಿಲು ಮುಟ್ಟುವಂತಹ ಕೂಗಿನ ಮಧ್ಯೆ, ಟಗರು ಓಡುವ ದೂಳು, ನೆತ್ತಿಯ ಮೇಲಿನ ಸುಡು ಬಿಸಿಲು ಲೆಕ್ಕಿಸದೇ ಟಗರುಗಳ ಕಾಳಗ ಪಂದ್ಯ ರೋಮಾಂಚನ ಉಂಟು ಮಾಡಿತ್ತು.

ರಾಷ್ಟ್ರಮಟ್ಟದ ಈ ಟಗರಿನ ಕಾಳಗ ಸ್ಪರ್ಧೆಯಲ್ಲಿ ಹಲವು ಅದ್ಭುತ ಸನ್ನಿವೇಶಗಳು ಕಂಡು ಬಂದವು. ಮರಿ ಕುರಿ, 2 ಹಲ್ಲಿನ ಟಗರು, 4 ಹಲ್ಲಿನ ಟಗರು, 6-8 ಹಲ್ಲಿನ ಟಗರು ಭಾಗವಹಿಸಿದ್ದವು. ಟಗರುಗಳ ವಯೋಮಾನಕ್ಕೆ ಅನುಗುಣವಾಗಿ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಹಲ್ಲುಗಳು ಇರಲಾರದ್ದು ಮರಿ ಕುರಿ, 2 ಹಲ್ಲು, 4 ಹಲ್ಲು, 6 ಹಲ್ಲು, 8 ಹಲ್ಲು ಹೀಗೆ 5 ವಿಭಾಗಗಳನ್ನಾಗಿ ಮಾಡಲಾಗಿ ಸ್ಫರ್ಧೆ ನಡೆಯಿತು. ಮರಿ ಕುರಿಗೆ ಪ್ರಥಮ ಬಹುಮಾನ 15,000, 2 ಹಲ್ಲಿನ ಟಗರಿಗೆ 20,000, 6 ಹಲ್ಲಿನ ಟಗರಿಗೆ 40,000, 8 ಹಲ್ಲಿನ ಟಗರಿಗೆ 1 ಲಕ್ಷ ಬಹುಮಾನ ಘೋಷಿಸಲಾಗಿತ್ತು.

ದಾವಣಗೆರೆ, ಹೊನ್ನಾಳಿ, ಭದ್ರಾವತಿ, ಶಿವಮೊಗ್ಗ, ಹರಿಹರ , ಮಲೆಬೆನ್ನೂರು ಸೇರಿದಂತೆ ಒಟ್ಟು 250 ಟಗರುಗಳು ಕಾಳಗದಲ್ಲಿ ಭಾಗವಹಿಸಿದ್ದವು. ಇನ್ನು ಅಖಾಡದಲ್ಲಿ ಕೊಬ್ಬಿದ ಟಗರು ಎದುರಿನ ಟಗರಿಗೆ ಡಿಕ್ಕಿ ಹೊಡೆದಾಗ ಸೋಲು ಅನುಭವಿಸಿ ಬಾಲ ಮುದುಡಿಕೊಂಡು ನಾಚಿಕೊಂಡು ಪ್ರೇಕ್ಷಕರನ್ನು ದೂಡುತ್ತಾ ಓಡುತ್ತಿದ್ದ ದೃಶ್ಯ ನೆರೆದಿದಿದ್ದ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿತು. ಪ್ರೇಕ್ಷಕರು ಸುಡುಬಿಸಿಲಿನ ತಾಪಕ್ಕೆ ಕಬ್ಬಿನ ಹಾಲು, ಐಸ್ ಕ್ರೀಮ್, ಸೋಡಾ, ಕಲ್ಲಂಗಡಿ ಹಣ್ಣು ತಿಂದು ಬಾಯಾರಿಕೆ ನಿವಾರಿಸಿಕೊಂಡರು. ಮಿರ್ಚಿ ಮಂಡಕ್ಕಿ, ಎಗ್ ರೈಸ್ ಅಂಗಡಿಗಳು ಟಗರು ಕಾಳಗದಲ್ಲಿ ನೋಡುಗರಿಗೆ ವಿಧ ವಿಧ ತಿನಿಸು ನೀಡಿದವು. ಶಾಸಕ ರೇಣುಕಾಚಾರ್ಯ ಕಾಳಗಕ್ಕೆ ಚಾಲನೆ ನೀಡಿದರು. ಇಲ್ಲಿ ಮನರಂಜನೆಯೇ ಮುಖ್ಯವಾಗಿದ್ದು, ಒಂದು ವರ್ಷ ಮೊದಲೇ ಚಿಕ್ಕ ಕುರಿ ಮರಿಯನ್ನು ತಂದು ಸಾಕಿ ಕಾಳಗಕ್ಕೆ ಬಿಡುತ್ತಾರೆ. ಟಗರುಗಳ ಕಾಳಗ ಬಹು ರೋಮಾಚಂನ ಕಾರಿಯಾಗಿದ್ದು, ಎರಡರ ನಡುವೆ ನೇರ ಹೋರಾಟ ಇರುತ್ತದೆ. ಕಣಕ್ಕಿಳಿಯುವ ಈ ಟಗರುಗಳನ್ನು ಹತ್ತಿರಕ್ಕೆ ಎಳೆದು ತಂದು ಪರಸ್ಪರ ವಾಸನೆ ತೋರಿಸಲಾಗುತ್ತದೆ. ನಂತರ 25- 30 ಮೀಟರ್ ದೂರ ಹಿಂದೆ ಎದುರು ಬದುರು ನಿಲ್ಲಿಸಿ ಹುರಿದುಂಬಿಸುತ್ತಾರೆ.

ಜೋರಾಗಿ ಓಡಿ ಬಂದು ಹಾರಿ ಟಗರುಗಳು ಮುಖಾಮುಖಿ ಡಿಚ್ಚಿ ಹೊಡೆಯುತ್ತಿದ್ದು, ಸೊನ್ನಿ ಎಂದು ಕರೆಯುತ್ತಾರೆ. ಡಿಚ್ಚಿ ಹೊಡೆದ ನಂತರ ಟಗರು ಹಿಂದೆ ಸರಿದು ಪುನಃ ಡಿಚ್ಚಿ ಹೊಡೆಯುತ್ತವೆ. ಈ ಸ್ಪರ್ಧೆಯಲ್ಲಿ ಯಾವುದಾದರೊಂದು ಟಗರು ಮುಖ ತಿರುಗಿಸಿ ಓಡಿತೆಂದರೆ ಅದು ಸೋತಂತೆ. ಈ ಮೂರು ಸುತ್ತುಗಳ ಒಳಗೆ ಫಲಿತಾಂಶ ಬಾರದಿದ್ದರೆ ಎರಡೂ ಟಗರುಗಳನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಒಬ್ಬ ನಿರ್ಣಾಯಕ ಮತ್ತು ಎರಡೂ ಟಗರುಗಳ ಮಾಲೀಕರನ್ನು ಕಣದಲ್ಲಿ ಬಿಡುತ್ತಾನೆ. ಕಾಳಗದಲ್ಲಿ ಯಾವುದಾದರೂ ಟಗರು ಬಳಸಿದ್ದರೆ, ಅದನ್ನು ಸ್ಪರ್ಧೆಯಿಂದ ಹೊರಗಿಡಲಾಗುವುದು. ಟಗರುಗಳ ಸಾವು ನೋವುಗಳ ಏನೇ ವಿವಾದಗಳು ಬಂದರೆ ನಿರ್ಣಾಯಕರೇ ಅಂತಿಮ ತೀರ್ಮಾನ ನೀಡುವರು. ಒಟ್ಟಾರೆ ಗ್ರಾಮೀಣ ಕ್ರೀಡಾಕೂಟ ಸ್ಥಳೀಯವಾಗಿ ಸಾರ್ವಜನಿಕರಿಗೆ ಸಖತ್ ಮನರಂಜನೆ ನೀಡಿತು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!