ಸಾಧನೆಯ ಉತ್ತುಂಗದಲ್ಲಿ ದಾವಣಗೆರೆಯ ‘ಸಾಧನ’ ರ ಸಾಧನೆಯು ಸಾಕ್ಷಿ.!
![ಸಾಧನೆಯ ಉತ್ತುಂಗದಲ್ಲಿ ದಾವಣಗೆರೆಯ 'ಸಾಧನ' ರ ಸಾಧನೆಯು ಸಾಕ್ಷಿ.!](https://garudavoice.com/wp-content/uploads/2023/05/IMG-20230530-WA0005-767x1024.jpg)
ಉಡುಪಿ: ಸ್ವಾಭಿಮಾನಿ ಮಹಿಳೆಯೊಬ್ಬಳು ಛಲ ತೊಟ್ಟರೆ ತನ್ನ ಧೈರ್ಯ ಹಾಗೂ ಅಭಿಮಾನದಿಂದ ಗೌರವವನ್ನು ಹೇಗೆ ಪಡೆಯಬಹುದು ಎಂಬುದಕ್ಕೆ ಸಾಧನಳೇ ಸಾಕ್ಷಿ…
ಶ್ರೀಮತಿ ರೇಖಾ ಮತ್ತು ಶ್ರೀ ಸೀತಾರಾಮ್ ರಾವ್ ಅವರ ಹಿರಿಯ ಮಗಳಾಗಿ ದಾವಣಗೆರೆಯಲ್ಲಿ 1986ರ ಜನವರಿ 14 ರಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಸಾಧನ ತನ್ನ ಪ್ರಾಥಮಿಕ ಶಿಕ್ಷಣ ವನ್ನು ಸರಕಾರಿ ಪ್ರಾಥಮಿಕ ಶಾಲೆ ದಾವಣಗೆರೆಯ ನಿಟುವಳ್ಳಿ, ಪ್ರೌಢ ಶಿಕ್ಷಣವನ್ನು ಸರಕಾರಿ ಅನುದಾನಿತ ರಾಘವೇಂದ್ರ ಹೈಸ್ಕೂಲ್ ದಾವಣಗೆರೆ ಯಲ್ಲಿ ಪಡೆದರು.
ತನ್ನ 16ನೇ ವಯಸ್ಸಿನಲ್ಲಿ ಕೊಪ್ಪಳ ತಾಲೂಕಿನ ಬನ್ನಿಗೋಳದ ಗಿರೀಶ್ ಆಶ್ರೀತ್ ರವರು ವಿವಾಹವಾಗಿ 3 ಗಂಡು ಮಕ್ಕಳ ತಾಯಿಯಾದರು ವಿವಾಹ ನಂತರದ 1೦ ವರ್ಷಗಳನ್ನು ಕೊಪ್ಪಳದ ತನ್ನ ಗಂಡನ ಮನೆಯಲ್ಲಿ ಕಳೆದ ಇವರು ಹಲವಾರು ಕೌಟುಂಬಿಕ ಸಮಸ್ಯೆಗಳನ್ನು ದಿಟ್ಟತನದಿಂದ ಎದುರಿಸಿದರು.
ಯಾವುದೇ ಕಷ್ಟ ಬಂದರೂ ತನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಎದೆಗುಂದದೆ ಮುನ್ನಡೆದ ದಿಟ್ಟ ಮಹಿಳೆ ತನ್ನ ಜೀವನದ ಮಹತ್ವದ ಹಾಗೂ ನಿರ್ಣಾಯಕ ಪಾತ್ರವನ್ನು ನಿರ್ವಹಿಸಿದ್ದು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಅನ್ನುವುದು ವಿಶೇಷ.
13 ವರ್ಷದ ಹಿಂದೆ ಪತಿಯು ಕೆಲಸ ಹರಸಿಕೊಂಡು ಕಾರ್ಕಳಕ್ಕೆ ಬಂದಾಗ ತನ್ನ ಸಣ್ಣಸಣ್ಣ ಮಕ್ಕಳೊಂದಿಗೆ ತಾನೂ ಹೆಜ್ಜೆಗಳನ್ನು ಇಟ್ಟು ಕಾರ್ಕಳದಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿ ಇಲ್ಲಿಂದ ಹೊಸ ಅಧ್ಯಾಯ ಪ್ರಾರಂಭಿಸಿದರು.
ಟೈಲರಿಂಗ್ ಬಗ್ಗೆ ಜ್ಞಾನ ಹೊಂದಿದ್ದ ಇವರು ತನ್ನ ಮಗನಿಗೆ ಪಾಠ ಹೇಳಿ ಕೊಡುವ ಜೊತೆಗೆ ತಾನೂ 2 ವರ್ಷದ ಫ್ಯಾಶನ್ ಡಿಸೈನಿಂಗ್ ಡಿಪ್ಲೊಮಾವನ್ನು ದಾವಣಗೆರೆಯ ಕಲಾ ನಿಕೇತನ ಫ್ಯಾಶನ್ ಡಿಸೈನಿಂಗ್ ಕಾಲೇಜಿನಲ್ಲಿ ಕಲಿತು, ಇನ್ನೂ ಕಲಿಯಬೇಕೆಂಬ ಛಲ ಹೊಂದಿದ್ದ ಛಲದಂಕ ಮಲ್ಲೆ ಮತ್ತೆ ಮುಂದುವರಿದು ಫ್ಯಾಶನ್ ಡಿಸೈನಿಂಗ್ ನಲ್ಲಿ ಬ್ಯಾಚುಲರ್ ಆಫ್ ವಿಜ್ಯುವಲ್ ಆರ್ಟ್ಸ್ ಪದವಿಯನ್ನು ಉತ್ತರ ಕನ್ನಡದ ಕಾರವಾರದ ಠಾಗೋರ್ ಆರ್ಟ್ಸ್ ಕಾಲೇಜಿನಲ್ಲಿ ಮುಗಿಸಿದರು ಮಾತ್ರವಲ್ಲದೆ ಮತ್ತೆ ದಾವಣಗೆರೆಯ ಕಲಾ ನಿಕೇತನ ಆರ್ಟ್ ಕಾಲೇಜಿನಲ್ಲಿ ಎಂಎಸ್ಸಿ ಫ್ಯಾಶನ್ ಡಿಸೈನಿಂಗ್ ಉನ್ನತ ಶಿಕ್ಷಣ ಪಡೆದರು .
ವೈವಾಹಿಕ ಜೀವನ ಹಾಗೂ ಕುಟುಂಬ ಜೀವನದೊಂದಿಗೆ ಶಿಕ್ಷಣವನ್ನು ತನ್ನ ಛಲದೊಂದಿಗೆ ಶಿಕ್ಷಣದೊಂದಿಗೆ ವ್ರತ್ತಿಯನ್ನು ಪ್ರಾರಂಭಿಸಿ ತನ್ನ ಕುಟುಂಬದ ಆಧಾರ ಸ್ತಂಭವಾಗಿ ನೆಲೆಯೂರಿದರು.
ತನ್ನ ಸ್ವಾಭಿಮಾನದ ಮೆಟ್ಟಲುಗಳನ್ನು ಏರಿ ಮುನ್ನಡೆಯುವ ಮೂಲಕ ಕಾರ್ಕಳದ ಪ್ರತಿಷ್ಠಿತ ನಿಟ್ಟೆ ವಿದ್ಯಾಸಂಸ್ಥೆಯ ಫ್ಯಾಶನ್ ಡಿಸೈನಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು ತದನಂತರ ಕಾರ್ಕಳ ಶ್ರೀ ಸಾಯಿ ಪದವಿ ಕಾಲೇಜಿನಲ್ಲಿ ಫ್ಯಾಶನ್ ಡಿಸೈನಿಂಗ್ ಕಾಲೇಜಿನ ಪ್ರಾಂಶುಪಾಲರಾಗಿ ಕೆಲಸ ನಿರ್ವಹಿಸಿದ್ದಾರೆ ಮಾತ್ರವಲ್ಲದೆ ಎಂ ಐ ಟಿ ಮಣಿಪಾಲ ಫ್ಯಾಶನ್ ಟೆಕ್ನಾಲಜಿ ಕಾಲೇಜಿನಲ್ಲಿ ಕೂಡ ಅತಿಥಿ ಉಪನ್ಯಾಸಕರಾಗಿ ತನ್ನ ಫ್ಯಾಶನ್ ನ ಬಗ್ಗೆ ಇರುವ ಜ್ಞಾನವನ್ನು ಪಸರಿಸುತ್ತಿದ್ದಾರೆ.
ಎಲ್ಲೂ ತನ್ನ ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ತನ್ನನ್ನು ತಾನು ನಡೆಸಿಕೊಂಡು ಹೋಗುತ್ತಿದ್ದ ಅವರು ಮಹಿಳೆಯರು ಸ್ವಾಭಿಮಾನಿಯಾಗಿ ಬದುಕಬೇಕು ಅನ್ನೋ ನೆಲೆಯಲ್ಲಿ ಬ್ಯಾಂಕ್ ಸಾಲ ಪಡೆದು ಕಾರ್ಕಳದಲ್ಲಿ ಗಾರ್ಮೆಂಟ್ ಉದ್ಯಮವನ್ನು ಪ್ರಾರಂಭಿಸಿದರು. ಪ್ರಾರಂಭದಲ್ಲಿ ಉತ್ತಮ ರೀತಿಯಲ್ಲಿ ಸಾಗಿದ ಉಧ್ಯಮ ಕೊರೋನಾದಿಂದಾಗಿ ಮುಚ್ಚುವ ಪರಿಸ್ಥಿತಿ ಎದುರಿಸಬೇಕಾಗಿ ಬಂದಾಗಲೂ ಎದೆಗುಂದದೆ ತನ್ನಲ್ಲಿರುವ ವಿಧ್ಯೆಯನ್ನೇ ಮಹಿಳೆಯರಿಗೆ ಧಾರೆಯೆರೆಯಲು ಮುಂದಾಗಿ ತನ್ನ ಕನಸಿನ ಕೂಸಾದ ಸುಮೇಧಾ ಪ್ಯಾಶನ್ ಇನ್ಸ್ಟಿಟ್ಯೂಟ್ ಎಂಬ ಫ್ಯಾಶನ್ ಡಿಸೈನಿಂಗ್ ಕಾಲೇಜನ್ನು ಆರಂಭಿಸಿದರು. ನಾಲ್ಕು ವರ್ಷಗಳ ಹಿಂದೆ ಕಾರ್ಕಳದಂತಹ ಸಣ್ಣ ಊರಿನಲ್ಲಿ ಆರಂಭಗೊಂಡ ಕಾಲೇಜು ರಾಜ್ಯ ಮಟ್ಟದಲ್ಲಿ ಹೆಸರು ಪಡೆಯುವಂತಾಗಲು ಸಾಧನ ಅವರ ಪರಿಶ್ರಮ, ಶ್ರದ್ಧೆ, ಆಸಕ್ತಿ,ಸಂಸ್ಥೆಯ ಮೇಲಿನ ಭಕ್ತಿಯೇ ಪ್ರತೀಕ.
ಕಾಲೇಜು ನಡೆಸುವ ಜೊತೆ ಜೊತೆಗೆ ಕನ್ನಡದ ಕಿರುತೆರೆ ತಾರೆಯರಿಗೆ ವಸ್ತ್ರ ವಿನ್ಯಾಸ ಮಾಡುವ ಮೂಲಕ ಫ್ಯಾಶನ್ ಜಗತ್ತಿಗೆ ಕಾಲಿಟ್ಟ ಸಾಧನ ಅಸಾಧಾರಣ ಸಾಧನೆಯನ್ನೇ ಮಾಡಿದ್ದಾರೆ. ವಸ್ತ್ರ ವಿನ್ಯಾಸ ದ ಮೂಲಕ ತನ್ನ ಫ್ಯಾಶನ್ ಬದುಕಿಗೆ ಮುನ್ನುಡಿ ಬರೆಯುವುದರ ಜೊತೆಗೆ ತನ್ನ ವಿದ್ಯಾರ್ಥಿಗಳನ್ನು ಇದರಲ್ಲಿ ತೊಡಗಿಸಿಕೊಂಡರು ಇವರ ಸಾಧನೆಯ ಹಾದಿಯಲ್ಲಿ ವಿಧ್ಯಾರ್ಥಿಗಳು ತಮ್ಮ ಝಲಕನ್ನು ತೋರಿಸುವ ಮೂಲಕ ಕಳೆದ ಸತತ 2 ವರ್ಷಗಳಿಂದ ರಾಜ್ಯ ಮಟ್ಟದಲ್ಲಿ ವಸ್ತ್ರ ವಿನ್ಯಾಸಕ್ಕಾಗಿ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದೆ ಯಾವ ಸಿನಿಮಾ ತಾರೆಯರಿಗೂ ನಾವು ಏನೂ ಕಮ್ಮಿ ಇಲ್ಲ ಎನ್ನುವ ಮಟ್ಟಿಗೆ ಬೆಳೆಯುತ್ತಿರುವ ಸುಮೇಧಾ ಫ್ಯಾಶನ್ ಇನ್ಸ್ಟಿಟ್ಯೂಟ್ ನ ವಸ್ತ್ರ ವಿನ್ಯಾಸ ಸಿನಿ ತಾರೆಯರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ.
ಮಹಿಳೆಯರಿಗಾಗಿ ಉಚಿತ ಟೈಲರಿಂಗ್, ಉಚಿತ ಫ್ಯಾಶನ್ ತರಬೇತಿ , , ಬ್ಯಾಗ್ ತಯಾರಿಕೆ, ಫ್ಯಾಬ್ರಿಕ್ ಪೈಂಟಿಂಗ್, ಜ್ಯುವೆಲ್ಲರಿ ಮೇಕಿಂಗ್ ಸಾರಿ ಗೊಂಡೆ ತಯಾರಿಕೆ, ಉಚಿತ ಎಂಬ್ರ್ರೈಡರಿ ತರಬೇತಿ ತರಬೇತಿ, ಅಂಗವಿಕಲ ಮಕ್ಕಳಿಗೆ ಉಚಿತ ತರಬೇತಿ ಶಿಬಿರ ಆಯೋಜಿಸುವ ಮೂಲಕ ಸಮಾಜಮುಖಿ ಕೆಲಸ ಪ್ರಶಂಸನೀಯ ಕಾರ್ಕಳದಂತಹ ಸಣ್ಣ ಊರಿನಲ್ಲಿ ಫ್ಯಾಶನ್ ಬಗೆಗಿನ ಗಂಧ ಗಾಳಿ ಇಲ್ಲದ ಪ್ರದೇಶದಲ್ಲಿ ಪ್ಯಾಶನ್ ಅಂದರೆ ಎನೋ ಅಸ್ಪಸ್ಯತೆಯಂತೆ ಕಾಣುವ ಈ ಕಾಲಘಟ್ಟದಲ್ಲಿ ಮೆಟ್ರೋ ಪಾಲಿಟನ್ ಸಿಟಿಗಳಲ್ಲಿ ನಡೆಸಿದಂತೆ ರಾಜ್ಯ ಮಟ್ಟದ ಕಾರ್ಪೊರೇಟ್ ಪ್ಯಾಶನ್ ಶೋ ಆಯೋಜಿಸುವ ಮೂಲಕ ಫ್ಯಾಶನ್ ನ ಶ್ರೀಗಂಧದ ಸುವಾಸನೆಯನ್ನು ಹರಡಿ ನೋಡುಗರ ಕಣ್ಣಿಗೆ ಸಂಸ್ಕೃತಿಯ ರಸದೌತಣ ಉಣಬಡಿಸುವ ಮೂಲಕ ಆಧುನಿಕ ಫ್ಯಾಶನ್ ಗೆ ಹೊಸ ಆಯಾಮ ನೀಡಿದ ಹಿರಿಮೆ ಸಾಧನಳಿಗೆ ಸಲ್ಲುತ್ತದೆ.
ಇವರ ಸಾಧನೆಯ ಕಿರೀಟಕ್ಕೆ ಹೆಮ್ಮೆಯ ಗರಿ ಮೂಡಿಸಿದ್ದು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸಿರಿ ಕಾರ್ಯಕ್ರಮದಲ್ಲಿನ ವಸ್ತ್ರ ವಿನ್ಯಾಸಕ್ಕಾಗಿ ರಾಜ್ಯ ಮಟ್ಟದ ಸಿರಿ ಪ್ರಶಸ್ತಿ, ಚಿತ್ತಾರ ಸಂಸ್ಥೆ ಬೆಂಗಳೂರು ಸಿನಿಮಾ ರಂಗದ ಸಾಧಕರಿಗೆ ನೀಡುವ ಗೋಲ್ಡನ್ ವುಮೆನ್ ಆಚಿವರ್ ಅವಾರ್ಡ್, ರಾಜ್ಯ ಮಟ್ಟದ ಹೆಮ್ಮೆಯ ಕನ್ನಡಿಗ ಪ್ರಶಸ್ತಿ, ರಾಜ್ಯ ಮಟ್ಟದ ವುಮೆನ್ ಎಂಟರ್ಪಿನಿಯರ್ ಅವಾರ್ಡ್, ಪಿಲ್ಮ್ ಪೇರ್ ಸೇವಾರತ್ನ ಅವಾರ್ಡ್ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ನೀಡುವ ಹಲವಾರು ಪ್ರಶಸ್ತಿ ಸನ್ಮಾನ ಗಳನ್ನು ಪಡೆದಿರುವ ಸಾಧನಳ ಸಾಧನೆಗಳಿಗೆ ಸಾಧನಳೇ ಸಾಟಿ. ಮಹಿಳೆಯರ ಸ್ವಾವಲಂಬಿ ಬದುಕಿಗೆ ಸಾಧನಾಳ ಸಾಧನೆಗಳೇ ಮಾರ್ಗದರ್ಶಿ.
…ಮೊಹಮ್ಮದ್ ಶರೀಫ್ ಕಾರ್ಕಳ….