ಎಲ್ಲಾ ಕಾಲಕ್ಕೂ ಅನ್ವಯವಾಗುವಂತಹ ಮೌಲ್ಯಗಳನ್ನು ರಾಮಾಯಣ ಗ್ರಂಥದ ಮೂಲಕ ಓದುಗರಿಗೆ ತಲುಪಿಸಿದ್ದಾರೆ : ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

ದಾವಣಗೆರೆ: ಜಗತ್ತಿನ ಮಹಾಕಾವ್ಯ ರಚಿಸಿದ್ದು ವಾಲ್ಮೀಕಿ. ಅವರು ಕೇವಲ ಗ್ರಂಥಗಳನ್ನು ರಚಿಸಲಿಲ್ಲ, ಪಾತ್ರಗಳನ್ನು ಸೃಷ್ಟಿಸಲಿಲ್ಲ. ಬದಲಾಗಿ ಎಲ್ಲಾ ಕಾಲಕ್ಕೂ ಅನ್ವಯವಾಗುವಂತಹ ಮೌಲ್ಯಗಳನ್ನು ಈ ಗ್ರಂಥದ ಮೂಲಕ ಓದುಗರಿಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪರ್ಚನೆ ಸಲ್ಲಿಸುವ ಮೂಲಕ ಅವರು ಮಾತನಾಡಿದರು.

ರಾಮಾಯಣ ಕೃತಿ ರಚಿಸಿದ ವಾಲ್ಮೀಕಿ ಅವರು ತಮ್ಮ ಸಾಹಿತ್ಯ ಕೃತಿ ತರುವ ಮೂಲಕ ಸಮಾಜಕ್ಕೆ ದೊಡ್ಡ ಉಪಕಾರ ಮಾಡಿದ್ದಾರೆ. ರಾಮಾಯಣದ ಪಾತ್ರಗಳಾದ ರಾಮ, ಸೀತೆ, ಲಕ್ಷ್ಮಣ, ಸುಗ್ರೀವ, ದಶರಥ ಇವು ಕೇವಲ ಪಾತ್ರಗಳಲ್ಲ. ಇಂದಿಗೂ ನಮ್ಮ ನಿಮ್ಮ ಮಧ್ಯೆ ಇರುವ ವ್ಯಕ್ತಿಗಳು. ಆ ಪಾತ್ರಗಳಿಗೆ ಇಂದಿಗೂ ಆ ಪ್ರಸ್ತುತತೆ ಇದೆ. ಅಂಥ ಪಾತ್ರಗಳ ಮೂಲಕ ಕೃತಿಕಾರರು ಹೇಳಿದ ಮೌಲ್ಯಗಳು ನಮ್ಮ ಬದುಕಿನ ಆದರ್ಶಗಳಾಗಬೇಕು ಎಂದು ತಿಳಿಸಿದರು.

ಪ್ರತಿಯೊಂದು ದೇಶಗಳಲ್ಲೂ ಒಂದೊಂದು ಮಹಾಕಾವ್ಯವಿರುತ್ತದೆ. ಅವು ಜನರ ಹೃದಯ ಮುಟ್ಟುವ ಶಕ್ತಿ ಹೊಂದಿರುತ್ತದೆ. ಈ ನಿಟ್ಟಿನಲ್ಲಿ ವಾಲ್ಮೀಕಿ ರಚಿಸಿದ ರಾಮಾಯಣ ಕಾಲತೀತವಾದದ್ದು. ಎಲ್ಲಾ ದೇಶಗಳು ಭಾರತದತ್ತ ಒಮ್ಮೆ ತಿರುಗಿ ನೋಡುವಂತಹ ಕೃತಿ ರಚಿಸಿದ ಹೆಗ್ಗಳಿಕೆ ವಾಲ್ಮೀಕಿ ಅವರಿಗೆ ಸಲ್ಲುತ್ತದೆ ಎಂದು ಶ್ಲಾಘಿಸಿದರು.

ಜಿಲ್ಲಾ ಪಂಚಾಯತ್ ಸಿಇಓ ಡಾ.ವಿಜಯ ಮಹಾಂತೇಶ ಮಾತನಾಡಿ, ವಾಲ್ಮೀಕಿ ಅವರು ರಚಿಸಿದ ರಾಮಾಯಣ ಇಡೀ ವಿಶ್ವಕ್ಕೆ ಭಾರತ ನೀಡಿದ ಬಹುದೊಡ್ಡ ಸಾಹಿತ್ಯ ಕೊಡುಗೆ. ವಾಲ್ಮೀಕಿ ರಾಮಾಯಣ ದೇಶ-ಭಾಷೆಗೆ ಸೀಮಿತಗೊಳಿಸದೆ ಜಾಗತಿಕವಾಗಿ ಆರಾಧಿಸಲ್ಪಡುತ್ತದೆ. ರಾಮಾಯಣ ಬಂದು ಶತಮಾನಗಳೆ ಉರುಳಿದರು ಅದರಲ್ಲಿರುವ ದೇಶದ ಸಂಸ್ಕೃತಿ, ಆಚಾರ-ವಿಚಾರಗಳು, ಮಾನವೀಯ ಮೌಲ್ಯಗಳು ಇಂದಿಗೂ ಪ್ರಸ್ತುತ ಎಂದು ತಿಳಿಸಿದರು.

ಪಾಶ್ಚಿಮಾತ್ಯ ಹಾಗೂ ತಂತ್ರಜ್ಞಾನದಿಂದ ಸಂಸ್ಕೃತಿ, ಮೌಲ್ಯಗಳನ್ನು ಮರೆಯುತ್ತಿರುವ ಯುವಕರಿಗೆ ರಾಮಾಯಣದ ಮೂಲಕ ಸಂಸ್ಕೃತಿ ಬೆಳೆಸಬೇಕು. ಆಚಾರ-ವಿಚಾರಗಳನ್ನು ಎತ್ತಿ ಹಿಡಿಯುವ ಕೆಲಸವಾಗಬೇಕು ಎಂದರು.

ಮೇಯರ್ ಎಸ್.ಟಿ.ವೀರೇಶ್ ಮಾತನಾಡಿ, ಭಾರತದ ಮಹಾಕಾವ್ಯಗಳು, ಸಾಹಿತ್ಯ, ಕೃತಿಗಳನ್ನು ದಾಖಲೀಕರಿಸುವ ಮೂಲಕ ಸಂಸ್ಕೃತಿ, ಮಾನವೀಯ ಮೌಲ್ಯಗಳನ್ನು ಉಳಿಸಿದ್ದಾರೆ. ಆಧುನಿಕ ದಾರ್ಶನಿಕರಿಂದ ಪ್ರೇರಣೆಗೊಂಡ ಬರಹಗಾರರು ಸಾವಿರಾರು ಕೃತಿಗಳನ್ನು ರಚಿಸಿದ್ದಾರೆ. ರಾಮಾಯಣ ಕೇವಲ ಪುಸ್ತಕವಲ್ಲ. ಅದೊಂದು ಮೌಲ್ಯ. ಯಾರು ರಾಮಾಯಣ ಅಧ್ಯಯನ ಮಾಡಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೋ ಅವರು ಆದರ್ಶ ವ್ಯಕ್ತಿಗಳಾಗುತ್ತಾರೆ ಎಂದು ತಿಳಿಸಿದರು.

ಈ ವೇಳೆ ಬೆಂಗಳೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ (ಏಕಲವ್ಯ) ಡಾ.ಹೆಚ್.ಕೆ. ನರಸಿಂಹಮೂರ್ತಿ ಅವರು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕೌಸರ್ ರೇಷ್ಮ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆನಂದ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜನಾಯ್ಕ್.ಕೆ., ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ದೀಪ ಜಕಾತಿ, ನಾಯಕ ಸಮಾಜದ ಮುಖಂಡರಾದ ಬಿ.ವೀರಣ್ಣ, ಹದಡಿ ಹಾಲೇಶಪ್ಪ, ಶ್ರೀನಿವಾಸ ನಾಯಕ್, ಆಂಜನೇಯ ಗುರೂಜಿ, ಅಣಜಿ ಆಂಜಿನಪ್ಪ, ಮಲ್ಲಿಕಾರ್ಜುನ್ ಗುಮ್ಮನೂರ, ವಿರೇಶ್ ಫೈಲ್ವಾನ್, ಗಣೇಶ ಹುಲ್ಮನಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!