ರಾಗಿ ಖರೀದಿ ಕೇಂದ್ರ ತೆರೆಯಲು ಆಗ್ರಹ
ದಾವಣಗೆರೆ: ರಾಜ್ಯಾದ್ಯಂತ ರಾಗಿ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಆಲೂರಿನ ಶ್ರೀ ಭೂತಪ್ಪ ಮತ್ತು ಶ್ರೀ ಚೌಡಮ್ಮ ಕೆರೆ ಬಳಕೆದಾರರ ಸಂಘದ ಅಧ್ಯಕ್ಷ ಕೆ.ಎಂ.ಹೇಮಂತರಾಜು ಮತ್ತು ಆಲೂರು ಚಿದಾನಂದಪ್ಪ
ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ನಮ್ಮನ್ನಾಳುವ ಸರ್ಕಾರಗಳು ರೈತರು ದೇಶದ ಬೆನ್ನೆಲಬು, ಜೈ-ಕಿಸಾನ್ ಎಂದೆಲ್ಲಾ ಕೇವಲ ಬಾಯಿಮಾತಲ್ಲಿ ಹೊಗಳಿ ನಮ್ಮಗಳ ಬೆನ್ನೆಲುಬನ್ನೇ ಮುರಿಯುವ ಹಂತಕ್ಕೆ ಬಂದಿವೆ. ನಾವು ಬೆಳೆದ ರಾಗಿಯನ್ನು ಖರೀದಿಸಲು, ಖರೀದಿ ಕೇಂದ್ರಗಳನ್ನು ತೆರೆಯದೇ ರೈತರು ಕಂಗಾಲಾಗುವಂತೆ ಮಾಡಿವೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸರ್ಕಾರಿ ನೌಕರರು ಒಂದು – ಎರಡು ದಿನ ಮುಷ್ಕರ ಮಾಡಿದರೆ, ಸಹ ಗ್ರಾಮ ಪಂಚಾಯ್ತಿಯ ಒಬ್ಬ ಸಾಮಾನ್ಯ ನೌಕರನಿಂದ ಹಿಡಿದು ಐಎಎಸ್ ನೌಕರರ ವರೆಗೂ ಸಂಬಳವನ್ನು ಹೆಚ್ಚಿಸುವ ಸರ್ಕಾರಗಳು, ರೈತರ ಹೆಸರಿನಲ್ಲಿ ಅಧಿಕಾರವೇರಿ, ಕೊನೆಗೆ ರೈತರನ್ನೇ ಮರೆತು ನಮ್ಮ ಹಿತಚಿಂತನೆಯನ್ನು ಮರೆತಿವೆ ಎಂದು ದೂರಿದ್ದಾರೆ.
ರೈತರು ಸರ್ಕಾರಕ್ಕೆ ತಮ್ಮ ಹಕ್ಕನ್ನು ಮುಂದಿಡುತ್ತಿದ್ದಾರೆ ಹೊರತಾಗಿ ಭಿಕ್ಷೆ ಬೇಡುತ್ತಿಲ್ಲ. ಹಗಲು ರಾತ್ರಿಯೆನ್ನದೇ, ಕಷ್ಟಪಟ್ಟು ಬೆಳೆದ ಬೆಳೆಗೆ ಸರಿಯಾದ ಬೆಲೆ ನೀಡುವಂತೆ ಕೇಳುತ್ತಿದ್ದೆವಾದರೂ ಅಧಿಕಾರಿಗಳಿಗೆ ಮತ್ತು ಜನ ಪ್ರತಿನಿಧಿಗಳಿಗೆ ನಮ್ಮ ಧ್ವನಿ ಕೇಳಿಸುತ್ತಿಲ್ಲ. ಕೂಡಲೇ ದೇಶದ ಬೆನ್ನೆಲುಬಾಗಿರುವ ರೈತನ ಬೇಡಿಕೆಗೆ ಸ್ಪಂದಿಸಿ ರಾಗಿಗೆಗೆ ೪,೦೦೦ ಬೆಲೆ ನಿಗದಿಪಡಿಸಿ, ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದ್ದಾರೆ.