Beda Jangama:ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರ: ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 27 ರವರೆಗೆ ಅವಕಾಶ
ದಾವಣಗೆರೆ: ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುವ ಕುರಿತು ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಸೆ.27 ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ದಾವಣಗೆರೆ ತಹಸಿಲ್ದಾರ್ ತಿಳಿಸಿದ್ದಾರೆ.
ನಗರದ ಜೆ.ಹೆಚ್.ಪಟೇಲ್ ಬಡಾವಣೆ ವಾಸಿಗಳಾದ ಅದಿತಿ ಬಿ.ಎಂ ಬಿನ್ ಬಿ.ಎಂ. ದಾರೂಕೇಶ್, ನಗರ ಶಿವಕುಮಾರಸ್ವಾಮಿ ಬಡಾವಣೆಯ ಎಂ.ಹೆಚ್. ಹಾಲಸ್ವಾಮಿ ಬಿನ್ ಎಂ.ಹಾಲೇಶಪ್ಪ ಮತ್ತು ಎಂ.ಹೆಚ್. ಸಿದ್ದೇಶ್ ಬಿನ್ ಹಾಲೇಶಪ್ಪ, ಆಂಜನೇಯ ಬಡಾವಣೆಯ ಆರ್.ಪಿ. ಮೃತ್ಯುಂಜಯ ಬಿನ್ ಆರ್.ಪಿ. ಪ್ರಕಾಶ ಹಾಗೂ ಸರಸ್ವತಿ ನಗರದ ವಿರೇಶ್ ಎನ್. ಬಿನ್ ನಿರಂಜನಮೂರ್ತಿ, ಸಾನ್ವಿ ವಿ. ಬಿನ್ ವಿರೇಶ್ ಮತ್ತು ಅದ್ವಿತಿ ವಿ. ಬಿನ್ ವಿರೇಶ್ ಇವರು ವೀರಶೈವ ಜಂಗಮರಾಗಿದ್ದು, ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೋರಿ ಅರ್ಜಿ ಸಲ್ಲಿಸಿರುತ್ತಾರೆ.
ಈ ಅರ್ಜಿಗಳ ಕುರಿತು ಉಪವಿಭಾಗಾಧಿಕಾರಿಗಳು, ದಾವಣಗೆರೆ ಇವರು ವಿಚಾರಣೆ ನಡೆಸಿ, ಅಪೀಲುದಾರರ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿರುವ, ನಿಯಮಾನುಸಾರ ಮರು ವಿಚಾರಣೆ ನಡೆಸಲು ಆದೇಶಿಸಿರುವ ಹಿನ್ನೆಲೆಯಲ್ಲಿ ಮತ್ತು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) (ತಿದ್ದುಪಡಿ ಅಧಿನಿಯಮ 7) ತಿದ್ದುಪಡಿ ಮೂಲಕ ಪ್ರದತ್ತವಾಗಿರುವ ಅಧಿಕಾರದಡಿ ಹಾಗೂ ಇದೇ ಅಧಿನಿಯಮದಡಿ ರಚಿತವಾಗಿರುವ ನಿಯಮಗಳು ನಿಗಧಿಪಡಿಸಿರುವ ಕಾರ್ಯವಿಧಾನವನ್ನು ಅನುಸರಿಸಿ ವಿಚಾರಣೆಯನ್ನು ನಡೆಸಲಾಗಿರುತ್ತದೆ.
ಅಭ್ಯರ್ಥಿ ಅಥವಾ ಅವನ ತಂದೆ, ತಾಯಿ, ಪೋಷಕರು ಹಾಗೂ ಅವರ ಕುಟುಂಬದ ಪೂರ್ವಿಕರ ಮರೂರು ತಲೆಮಾರಿನ ಜಾತಿ ಬಗ್ಗೆ ಶಾಲಾ ದಾಖಲಾತಿ ಮತತು ಜಾತಿ ಪ್ರಮಾಣ ಪತ್ರದ ದಾಖಲಾತಿಗಳು ಅವಶ್ಯಕವಾಗಿದ್ದು, ಅವುಗಳನ್ನು ಪರೀಕ್ಷಿಸುವುದಕ್ಕೆ ಹಾಗೂ ಅನುಸೂಚಿತ ಜಾತಿ, ಅನುಸೂಚಿತ ಬುಡಕಟ್ಟು ಮತ್ತು ಇತರೆ ಹಿಂದುಳಿದ ವರ್ಗಗಗಳಿಗೆ ಸೇರಿದವರೆಂದು ರುಜುವಾತುಪಡಿಸಬೇಕಾಗಿರುವುದರಿಂದ, ಈ ಬಗ್ಗೆ ತಹಸಿಲ್ದಾರರ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಸಾರ್ವಜನಿಕರು ತಮ್ಮ ಯಾವುದೇ ಆಕ್ಷೇಪಣೆಗಳು ಇದ್ದಲ್ಲಿ ತಹಸಿಲ್ದಾರರು ದಾವಣಗೆರೆ ಕಚೇರಿಗೆ ಸೆ. 27 ರಂದು ಮಧ್ಯಾಹ್ನ 3 ಗಂಟೆಯೊಳಗಾಗಿ ಆಕ್ಷೇಪಣೆ ಸಲ್ಲಿಸಲು ಅವಕಾಶವಿರುತ್ತದೆ ಎಂದು ದಾವಣಗೆರೆ ತಾಲ್ಲೂಕು ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.