ಸಹಕಾರ ರಂಗದಲ್ಲಿ ವಿಶ್ವಾಸಾರ್ಹತೆ ಉಳಿಸಿಕೊಂಡು ಹೋಗುವುದು ಬಹಳ ಮುಖ್ಯ : ಸಿಎಂ ಬೊಮ್ಮಾಯಿ

ಬೆಂಗಳೂರು: ಸಹಕಾರ ರಂಗದಲ್ಲಿ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಹೋಗುವುದು ಬಹಳ ಮುಖ್ಯ, ನಂಬಿಕೆಯನ್ನು ಉಳಿಸಿಕೊಳ್ಳಲು ಕಟಿಬದ್ಧವಾಗಿ ಆಗಿ ಕರ್ತವ್ಯ ನಿರ್ವಹಿಸಬೇಕು. ರಾಜ್ಯದ ಆರ್ಥಿಕ ಪ್ರಗತಿಗೆ ಸಹಕಾರ ರಂಗ ದೊಡ್ಡ ಕೊಡುಗೆಯನ್ನು ನೀಡಲು ಸಾಧ್ಯವಿದ್ದು, ಕರ್ನಾಟಕದಲ್ಲಿ ಸಹಕಾರ ಸಾಮರ್ಥ್ಯ ಪೂರ್ಣಪ್ರಮಾಣದಲ್ಲಿ ಬಳಕೆಯಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ಸಹಕಾರ ಇಲಾಖೆ & ರಾಜ್ಯದ ಎಲ್ಲಾ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಹಕಾರ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿರುವ ಬೊಮ್ಮಾಯಿ ಅವರು, ಮನುಷ್ಯ ಸಂಘಜೀವಿ, ಹಾಗಾಗಿ ಊರು, ಸಮುದಾಯಗಳ ನಿರ್ಮಾಣವಾಯಿತು. ಸಂಘಟಿತರಾಗಿರಲು ಸಹಕಾರ ಬೇಕು ಮನುಕುಲ ಸಹಕಾರದ ಮೇಲೆ ನಿಂತಿದೆ ಎಂದು ಹೇಳಿದರು.
ಪ್ರತಿ ಹಂತದಲ್ಲೂ ಪರಸ್ಪರ ಸಹಕಾರವಿದ್ದಾಗ ಎಲ್ಲರ ಬದುಕು ಚೆನ್ನಾಗಿರುತ್ತದೆ. ಈ ಧ್ಯೇಯದೊಂದಿಗೆ ಸಹಕಾರ ಚಳವಳಿ ನಡೆದಿದೆ. ಎಸ್.ಎಸ್.ಪಾಟೀಲರು ಪ್ರಥಮ ಸಹಕಾರಿ ಸಂಘವನ್ನು ಕಟ್ಟಿ ಸಹಕಾರ ಚಳವಳಿಗೆ ನಾಂದಿ ಹಾಡಿದರು. ಅಂದಿನಿಂದ ಕರ್ನಾಟಕದಲ್ಲಿ ಸಹಕಾರ ಕ್ಷೇತ್ರ ಅತ್ಯುತ್ತಮವಾಗಿ ಬೆಳೆದಿದೆ. ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಗಳಲ್ಲಿ ಸಹಕಾರ ಅತ್ಯಂತ ಯಶಸ್ವಿಯಾಗಿ ಬೆಳೆದಿದೆ. ಹಾಲು ಉತ್ಪಾದನೆ, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳು ಸಹಕಾರ ರಂಗದಲ್ಲಿ ಬೆಳೆಯುತ್ತಿದೆ.
ಕರ್ನಾಟಕ ಸಹಕಾರ ಇತಿಹಾಸದಲ್ಲಿ ಹಲವಾರು ಮೈಲಿಗಲ್ಲುಗಳಿವೆ. ಈ ನಿಟ್ಟಿನಲ್ಲಿ ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ, ಸಹಕಾರಿ ಬ್ಯಾಂಕ್ ಗಳು, ಕೆಎಂಎಫ್ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು. ಸಹಕಾರ ಮತ್ತು ಸರ್ಕಾರಗಳ ನಡುವೆ ಅನೋನ್ಯ ಸಂಬಂಧದ ಅವಶ್ಯಕತೆ ಇದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳ ಮುಖಾಂತರ ಸಹಕಾರಿ ರಂಗವನ್ನು ಅರ್ಥಪೂರ್ಣಗೊಳಿಸಬಹುದು. ಗ್ರಾಮೀಣ ಪ್ರದೇಶದ ಆರ್ಥಿಕತೆಯನ್ನು ಸಹಕಾರ ರಂಗ ನಿಯಂತ್ರಿಸಲು ಸಾಧ್ಯಿವಿದ್ದು, ಈ ಬಗ್ಗೆ ಚಿಂತನೆಯಾಗಬೇಕು ಎಂದು ಹೇಳಿದರು.
ರೈತಾಪಿ ವರ್ಗದ ಆರೋಗ್ಯ ರಕ್ಷಣೆಗಾಗಿ ಯಶಸ್ವಿನಿ ಯೋಜನೆಯನ್ನು ಪುನ:ಜಾರಿ ಮಾಡಲಾಗಿದೆ. ನಿಗದಿತ ಸಮಯದಲ್ಲಿ ಚಿಕಿತ್ಸೆ ನೀಡುವ ಈ ಯೋಜನೆಗೆ 300 ಕೋಟಿ ರೂ.ಗಳನ್ನು ನೀಡಲಾಗಿದೆ. 11 ಲಕ್ಷ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು ನೀಡಲಾಗಿದ್ದು, ರೈತ ಕೂಲಿಕಾರ್ಮಿಕರು, ಮೀನುಗಾರರ , ನೇಕಾರರ ಮಕ್ಕಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದೆ. ಸಹಕಾರಿ ರಂಗಕ್ಕೆ ಕ್ರಿಯಾಶೀಲ ಸಚಿವ ಎಸ್.ಟಿ.ಸೋಮಶೇಖರ್ ರಿಂದ ಸಹಕಾರಿ ರಂಗದ ಭವಿಷ್ಯ ಉಜ್ವಲವಾಗುತ್ತಿದೆ. ಸುಮಾರು 33 ಲಕ್ಷ ರೈತರಿಗೆ ಸಾಲ ಕೊಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಸಹಕಾರಿ ರಂಗದಲ್ಲಿ ಸೇವೆ ಮಾಡಬೇಕೇ ವಿನ: ಸಹಕಾರಿ ಸಾಹುಕಾರರಾಗಬಾರದು. ಸಹಕಾರಿ ರಂಗ ದಕ್ಷ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು ಎಂದು ತಿಳಿಸಿದರು.
ಕೇಂದ್ರದ ಗೃಹ ಸಚಿವ ಅಮಿತ್ ಶಾ, ಸಚಿವ ಪ್ರಹ್ಲಾದ್ ಜೋಷಿ, ಸದಾನಂದ ಗೌಡ, ಎಸ್.ಟಿ.ಸೋಮಶೇಖರ್, ಅಶ್ವತ್ಥ್ ನಾರಾಯಣ, ಆರ್.ಅಶೋಕ್ , ಜ್ಞಾನೇಂದ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.