ಜೂನ್ 21.ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆ: ಯೋಗ, ಧ್ಯಾನ ನಮ್ಮ ಸಂಸ್ಕ್ರುತಿಯ ಪ್ರತೀಕ – ಯೋಗದಿಂದ ಏನೆಲ್ಲಾ ಉಪಯೋಗವಿದೆ..?

ದಾವಣಗೆರೆ: ಪ್ರತಿಯೊಬ್ಬರು ತಮ್ಮ ದೇಹಾರೋಗ್ಯ ಕ್ಕೆ, ಶಾಂತಿ,ನೆಮ್ಮದಿಗಾಗಿ ಭಾರತೀಯ ಸಂಸ್ಕೃತಿಯ ಪ್ರತೀಕವಾದ ಯೋಗ, ಧ್ಯಾನ ಹಾಗೂ ಪ್ರಾಣಾಯಮಕ್ಕೆ ಹೆಚ್ಚಿನ ಮಹತ್ವ ಕೊಡುವುದು ಅತ್ಯಂತ ಜರೂರಿನ ಸಂಗತಿಯಾಗಿದೆ.’ಯೋಗ’ ಎಂದರೆ ಕೇವಲ ಆಸನಗಳು,ಪ್ರಾಣಾಯಮ,ಧ್ಯಾನ ಹಾಗೂ ತಪಸ್ಸು ಎಂಬ ಕಲ್ಪನೆಯೇ ಆಗಿದೆ. ‘ಯೋಗ’ ಎಂದರೆ ಅದೊಂದು ಬದುಕಿನ ಕಲೆ.Yoga is art of life.ನಾವು ಬದುಕುವುದು ಏಕೆ? ಬದುಕುವುದು ಹೇಗೆ? Why to live? How to live ಎಂದು ತಿಳಿಸುವ ಬದುಕಿನ ಕಲೆಯೇ ಯೋಗ ಎಂದು ತಿಳಿಯಬಹುದು.’ಯುಜ್ಯತೇ ಇತಿಯೋಗ’: ಈ ಯೋಗದ ಶಬ್ದ ವ್ಯಾಪಕ ಅರ್ಥದಲ್ಲಿ ಗಮನಿಸಬಹುದು.ಉದ್ಯೋಗ ಸಿಕ್ಕರೂ ಯೋಗ,ವಿವಾಹವಾದರೂ ಯೋಗ,ಲಾಟರಿಹೊಡೆದರೂ ಯೋಗ,ಮನೆ ಕಟ್ಟಿಸಿದರೂ ಯೋಗ,ಆಸ್ತಿ ಖರೀದಿಸಿದರೂ ಯೋಗ,ಹೀಗೆ ಎಲ್ಲವೂ ಯೋಗವೇ…ನಮ್ಮ ಚಂಚಲ ಮನಸ್ಸು,ವೇಗ, ಹಾಗೂ ಸೂಕ್ಷ್ಮತೆಗಳನ್ನು ಜಡವಾದ ಶರೀರದೊಡನೆ ಸೇರಿಸುವುದು ‘ಯೋಗವೇ’ಆಗಿದೆ.

ಮನಸ್ಸಿನ ನಿಯಂತ್ರಣವೇ ಯೋಗ
ಯೋಗ ಪಿತಾಮಹ ಪತಂಜಲಿ ಮುನಿಗಳು ತಿಳಿಸುವಂತೆ “ಚಿತ್ತವೃತ್ತಿಗಳ ನಿರೋಧ್ ಅಥವಾ ನಿಯಂತ್ರಿಸುವುದೇ ಯೋಗ” ಎಂದಿರುವರು.ಹಾಗೆಯೇ ಮನಸ್ಸನ್ನು ಪ್ರಶಮನಗೊಳಿಸುವ, ಶಾಂತಗೊಳಿಸುವ ಉಪಾಯವೇ ಯೋಗ. ಒಟ್ಟಾರೆ ‘ಯೋಗವು’ ಒಂದು ಶುದ್ದಿ ಮನಃಶಾಸ್ತ್ರ. ಯೋಗದಲ್ಲಿ ನಾಲ್ಕು ಪಥಗಳಿವೆ. ಜ್ಞಾನಯೋಗ,ಭಕ್ತಿಯೋಗ, ಕರ್ಮಯೋಗ ಹಾಗೂ ರಾಜಯೋಗ.ಶಾರೀರಿಕ ದೃಢತೆ ಮತ್ತು ಮಾನಸಿಕ ಸ್ಥಿರತೆ ಈ ಎರಡನ್ನೂ ಯೋಗಾಸನಗಳು ನೀಡುತ್ತವೆ.ಶರೀರದ ಜೊತೆಗೆ ಮನಸ್ಸನ್ನು ಪಳಗಿಸುವ ಕ್ರಿಯೆ ಇಲ್ಲಿದೆ. ಅಭ್ಯಾಸಕ್ಕೆ ಅನುಗುಣವಾಗಿ ಆಸನಗಳನ್ನು ಬೆನ್ನಿನ ಮೇಲೆ ಮಲಗಿ,ಹೊಟ್ಟೆಯ ಮೇಲೆ ಮಲಗಿ,ಕುಳಿತು ಹಾಗೂ ನಿಂತು ಮಾಡುವ ಆಸನಗಳೆಂದು ನಾಲ್ಕು ವಿಧಗಳಿವೆ.ಪರಿಣಾಮದ ದೃಷ್ಟಿಯಿಂದ ಆಸನಗಳನ್ನು ನಿರ್ಮಾಣಾತ್ಮಕ,ಧ್ಯಾನಾತ್ಮಕ,ಹಾಗೂ ವಿಶ್ರಾಂತಿ ದಾಯಕ ಆಸನಗಳೆನ್ನಬಹುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನಿಧಾನಗತಿ, ಸೂಕ್ತ ಗಮನ,ಪ್ರಸನ್ನತೆ,ಉಸಿರಾಟದೊಡನೆ ಅಭ್ಯಾಸ ಹಾಗೂ ಅಂತಿಮ ಸ್ಥಿತಿ ಕಾಯ್ದುಕೊಳ್ಳುವುದು ಅಗತ್ಯವಾಗಿದೆ.ಸೂರ್ಯ ನಮಸ್ಕಾರದಿಂದ ಆರಂಭವಾಗಿ ಶವಾಸನದವರೆಗೆ 43 ಆಸನಗಳಿವೆ.ಘೇರಂಡ ಸಂಹಿತೆಯಲ್ಲಿ 84 ಪ್ರಕಾರಗಳನ್ನು ತಿಳಿಸಿದೆ.

ಯೋಗ ನಮ್ಮಸಂಸ್ತ್ರತಿಯ ಪ್ರತೀಕ.
‘ಯೋಗ’ ನಿಮ್ಮ ದೇಶದ ವಿಶಿಷ್ಟ ಕೊಡುಗೆ, ಸಂಸ್ಕ್ರುತಿಯ ಪ್ರತೀಕ.ಇಂದು ಜಾಗತಿಕ ಮಹತ್ವ ದೊರಕಿರುವುದು ಸಂತಸದ ಸಂಗತಿ. ಈ ಕುರಿತು ಅನೇಕ ಪ್ರಾಚೀನ ಗ್ರಂಥಗಳು ಪ್ರಕಟವಾಗಿವೆ. ಇಂದು ಏನನ್ನೂ ತೊರೆಯಬೇಕೆಂದು ಹೇಳುವ ತತ್ವವಲ್ಲ. ಮನಸ್ಸನ್ನು ನಿಯಂತ್ರಿಸುವ,ಏಕಾಗ್ರತೆ ಸಾಧಿಸಲು ಉಪಯುಕ್ತವಾದ ದ್ದು. ಅಭ್ಯಾಸ,ಪ್ರಯತ್ನಗಳಿಂದ ಶರೀರದ ಬೇರೆ ಬೇರೆ ಅಂಗಗಳಿಗೆ,ಸ್ನಾಯುಗಳಿಗೆ ಮತ್ತು ನರನಾಡಿಗಳಿಗೆ ಸುಖವ್ಯಾಯಾಮದಿಂದ ಹೊಸ ಚೈತನ್ಯ ನೀಡಬಹುದೆಂದು ರನ್ನು ಯೋಗವು ವೈಜ್ಞಾನಿಕ ವಿಧಾನದಲ್ಲಿ ತಿಳಿಸುತ್ತದೆ. ಪತಂಜಲಿ,ಘೇರಂಡ ಮುಂತಾದ ಯೋಗ ವಿಜ್ಞಾನಿಗಳು ತಿಳಿಸುವಂತೆ ಯೋಗಾಸನಗಳಲ್ಲಿ ಸ್ಥಿರಸುಖ ಇರಬೇಕು ಎಂದು. ಸ್ಥಿರತೆ ಮತ್ತು ಸುಖತ್ವಗಳು ಯೋಗಾಸನದ ಲಕ್ಷಣಗಳು. ಇಂದು ‘ಪ್ರಯತ್ನ ಶೈಥಿಲ್ಯ’ವಿರಬೇಕು.

ನಿಶ್ಚಲ ಮನಸ್ಸಿನ ಸ್ಥಾಪನೆ.
ಯೋಗದಿಂದ ಮನಸ್ಸಿನ ಆತಂಕವನ್ನು ನಿವಾರಿಸಲು ಪತಂಜಲಿ ಮಾರ್ಗ ಸೂಕ್ತವಾಗಿದೆ.ಅಭ್ಯಾಸ,ಪ್ರಯತ್ನಗಳಿಂದ ನಿಶ್ಚಲವಾದ ಮನಸ್ಸನ್ನು ಸ್ಥಾಪಿಸಿಕೊಳ್ಳುವುದು ಯೋಗದ ಪ್ರಮುಖ ಭೂಮಿಕೆ.’ಯೋಗ’ ಎಂಬುದು ಉದ್ದೇಶ ಮತ್ತು ಹಾದಿಗಳೆರಡನ್ನು ಸೂಚಿಸುವ ಪದ.ಏನನ್ನು ಪಡೆಯಬೇಕೋ ಅದು ಯೋಗ; ಅದನ್ನು ಪಡೆಯಲು ಇರುವ ಸಾಧನವೂ ಯೋಗ. ಅಭ್ಯಾಸ ಮಾಡುವವರು ತಪ್ಪಿನಿಂದಾಗಿ ಯೋಗಶಾಸ್ತ್ರದ ಫಲವಂತಿಕೆಯ ಬಗ್ಗೆ ‘ ಯೋಗ’ ಕುರಿತು ಅನುಮಾನಗಳಿವೆ.

ಮೆದುಳಿನ ಬಲಭಾಗಕ್ಕೆ ಉತ್ತೇಜನ.
ದೇಹ ಮತ್ತು ಮನಸ್ಸನ್ನುಸಮತೋಲನಗೊಳಿಸುವ ಯೋಗದ ಸಾಧನೆಗೆ ಧ್ಯಾನವೂ ಒಂದು ಪರಿಕರ ಎನ್ನಬಹುದು.ಧ್ಯಾನಕ್ಕೆ ವಿಶಿಷ್ಟ ಸ್ಥಾನವಿದೆ.ಶರೀರವು ಗಡಸುತನವನ್ನು ಬಿಟ್ಟು ಕೊಟ್ಟು, ಮನಸ್ಸು ವ್ಯಥಾ ಅಲೆಯುವುದನ್ನು ತಪ್ಪಿಸಿ, ಏಕತಾನತೆಯನ್ನು ಮೈಗೂಡಿಸಿಕೊಳ್ಳುವುದೇ ಧ್ಯಾನ. ಯೋಗದ ಒಂದು ಭಾಗ ಧ್ಯಾನವಾಗಿದೆ. ಮಿದುಳಿನ ಬಲಭಾಗವನ್ನು ಉತ್ತೇಜನಗೊಳಿಸುವುದು ಧ್ಯಾನರ ಆಶಯ.

ರೋಗಗಳನ್ನು ಗುಣಪಡಿಸುವ ಶಕ್ತಿ.
ಸದೃಢ ಆರೋಗ್ಯವಂತ ಶರೀರ ಹೊಂದಲು ಶಾರೀರಿಕ ಪರಿಶ್ರಮ ಅಗತ್ಯ. ನಗರವಾಸಿಗಳು ಅಂತಹ ಅವಕಾಶಗಳಿಂದ ವಂಚಿತರಾಗಿದ್ದಾರೆ. ಮಾನಸಿಕ ಪರಿಶ್ರಮಕ್ಕಿರುವ ಆದ್ಯತೆ ದೇಹಶ್ರಮಕ್ಕಿಲ್ಲ. ಸಮಯದ ಅಭಾವ,ಯಂತ್ರಗಳನ್ನು ಬಳಸುವುದು,ಕಲುಷಿತ ವಿಷಕಾರಕ ವಸ್ತುಗಳ ಸೇವನೆ,ಅಶುದ್ದಗಾಳಿ,ನೀರು ಹೀಗೆ ಹಲವು ಕಾರಣಗಳು. ಇದರಿಂದ ಹಲವು ರೋಗಗಳಿಗೆ ನಾವು ತುತ್ತಾಗುತ್ತಿದ್ದೇವೆ.ಪ್ರತಿದಿವ ಒಂದು ಗಂಟೆ ಯೋಗಾಭ್ಯಾಸ ಕ್ರಮದಲ್ಲಿ ತೊಡಗಿಸಿಕೊಂಡರೆ ಅಂಗಾಂಗಗಳಿಗೂ ಸೂಕ್ತವಾದ ವ್ಯಾಯಾಮ ದೊರೆತು ಆರೋಗ್ಯ ವರ್ಧನೆಗೆ ಪೂರಕ ವಾಗುತ್ತದೆ. ವಿವಿಧ ಖಾಯಿಲೆಗಳನ್ನು ಗುಣಪಡಿಸುವ ಶಕ್ತಿ ಯೋಗಾಭ್ಯಾಸ ಕ್ರಮದಲ್ಲಿ ಅಡಗಿದೆ ಎಂಬುದನ್ನು ಅಂತರ್ ರಾಷ್ಟ್ರೀಯ ಯೋಗದಿನವಾದ ಇಂದು ಇದರ ಮಹತ್ವ ಅರಿತು–ಆಚರಿಸೋಣ,ಉತ್ತಮ ಆರೋಗ್ಯಕ್ಕೆ ಚಿಂತನಶೀಲರಾಗೋಣ.

ಯೋಗ,ಧ್ಯಾನ,ನೈತಿಕ ಶಿಕ್ಷಣ ಅಗತ್ಯ.
ಸದೃಢ ಶರೀರ ಹಾಗೂ ಸ್ವಸ್ಥ ಮನಸ್ಸಿಗೆ ಯೋಗ–ಧ್ಯಾನ ಮಾರ್ಗ ಮಹತ್ವದ್ದು. ಯೋಗ,ಧ್ಯಾನ ಮತ್ತು ನೈತಿಕ ಶಿಕ್ಷಣ ವಿದ್ಯಾರ್ಥಿ ದಿಸೆಯಿಂದಲೇ ಆರಂಭಗೊಳ್ಳಬೇಕು,ಅಂದಾಗ ಸುಸ್ಥಿರ ಸಮಾಜದ ಬುನಾದಿ ಆಗಬಲ್ಲದು.ವೈದ್ಯಕೀಯ ಕ್ಷೇತ್ರದ ಬೆಳವಣಿಗೆಯೊಂದಿಗೆ ಜನರ ಅನಾರೋಗ್ಯ ಪೀಡಿತ ವ್ಯವಸ್ಥೆ ದ್ವಿಗುಣಗೊಳ್ಳುತ್ತಿದೆ. ಇದಕ್ಕೆ ಕಾರಣ ಹಲವು. ನಮ್ಮ ಗ್ರಾಮೀಣರು ಶತಾಯುಷಿಗಳಾಗಿ ಒಂದು ದಿನವೂ ವೈದ್ಯರು ಹತ್ತಿರ ಹೋಗದೇ ಬದುಕಿ ಬಾಳಿದ್ದು ನೆನಪಿಸಿಕೊಳ್ಳೋಣ.ಕಾರಣ ಅವರು ದೈಹಿಕ ಶ್ರಮ.

ನಗರವಾಸಿಗಳಾದ ನಿಮಗೆ ಹಲವು ಬಗೆಯ ಒತ್ತಡಗಳಿವೆ. ದಿನನಿತ್ಯದ ಬದುಕಿನ ಒತ್ತಡ,ಉದ್ವೇಗ, ಅತೃಪ್ತಿ ಗಳಿಗೆ ನಿಯಂತ್ರಣ ಸಾಧಿಸುವಲ್ಲಿ ಯೋಗ,ಮತ್ತು ಧ್ಯಾನ ಪರಿಹಾರ ಒದಗಿಸಬಲ್ಲದು ಎಂಬುದು ನನ್ನ ಆಶಯ.

-ಡಾ.ಗಂಗಾಧರಯ್ಯ ಹಿರೇಮಠ, ಪ್ರಾಧ್ಯಾಪಕರು, ದಾವಣಗೆರೆ.

Leave a Reply

Your email address will not be published. Required fields are marked *

error: Content is protected !!