ದಾವಣಗೆರೆ:(Matka) ಜಿಲ್ಲೆ ಹಾಗೂ ಹರಿಹರ ತಾಲೂಕಿನಲ್ಲಿ ಹೆಚ್ಚುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳು, ಇತ್ತೀಚೆಗೆ ನಡೆದ ವಿವಾದಾತ್ಮಕ ಜಟಾಪಟಿಗಳು ಹಾಗೂ ಜಿಲ್ಲಾಡಳಿತದ ವೈಫಲ್ಯದ ಕುರಿತು ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರು ಪತ್ರಿಕಾಗೋಷ್ಠಿ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೂಜಾಟ, ಅಕ್ರಮ ದಂಧೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ
ದಾವಣಗೆರೆ ಜಿಲ್ಲೆ ಮತ್ತು ಹರಿಹರ ತಾಲೂಕಿನಾದ್ಯಂತ ಮಟ್ಕಾ, ಜೂಜಾಟ, ಬೆಟ್ಟಿಂಗ್ ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳು ವ್ಯಾಪಕವಾಗಿ ಹೆಚ್ಚುತ್ತಿವೆ ಎಂದು ಸಾರ್ವಜನಿಕರಿಂದ ನಿರಂತರ ದೂರುಗಳು ಬರುತ್ತಿವೆ. ಇಂತಹ ಧಂದೆಗಳು ಯುವ ಪೀಳಿಗೆಯ ಭವಿಷ್ಯವನ್ನು ಹಾಳುಗೆಡವುತ್ತಿದ್ದು, ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ತರುತ್ತಿವೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ತಕ್ಷಣವೇ ಎಚ್ಚೆತ್ತುಕೊಂಡು ವಿಶೇಷ ಕಾರ್ಯಾಚರಣೆ ನಡೆಸಬೇಕು ಮತ್ತು ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸುವ ವ್ಯವಸ್ಥೆ ತರಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ.
ಇತ್ತೀಚೆಗೆ ದಾವಣಗೆರೆ ಜಿಲ್ಲೆಯಲ್ಲಿ ಮಟ್ಕಾ ದಂಧೆ ವ್ಯಾಪಕವಾಗಿದ್ದು, ನಸ್ರುಲ್ಲಾ ಎಂಬ ಗೋವಾದ ಬುಕ್ಕಿ ಹೆಸರು ಕೇಳಿಬರುತ್ತಿದೆ, ಪೋಲೀಸರಿಗೆ ಮಾಹಿತಿ ತಿಳಿಸಿದರೆ ಅನ್ ಲೈನ ಆಡುತ್ತಾರೆ ಸರ್ ಅದನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ ಎಂದು ಜಾರಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರೊ. ಕೆ.ಎಸ್. ಭಗವಾನ್ ಆಕ್ಷೇಪಾರ್ಹ ಹೇಳಿಕೆಗೆ ತೀವ್ರ ಖಂಡನೆ
ಜೂನ್ 9ರಂದು ಹರಿಹರದ ಮೋತಿ ಕೃಷ್ಣಪ್ಪ ಭವನದ ಮೈದಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರೊ. ಕೆ.ಎಸ್. ಭಗವಾನ್ ಅವರು ಶ್ರೀರಾಮಚಂದ್ರನ ಕುರಿತು ಅತ್ಯಂತ ಆಕ್ಷೇಪಾರ್ಹ ಹಾಗೂ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಶಾಸಕರು ಕಿಡಿಕಾರಿದ್ದಾರೆ. ಸಮಾಜದಲ್ಲಿ ಅನಗತ್ಯ ಗೊಂದಲ ಹಾಗೂ ಭಾವನಾತ್ಮಕ ಉದ್ವಿಗ್ನತೆ ಸೃಷ್ಟಿಸುವ ಇಂತಹ ಹೇಳಿಕೆಗಳನ್ನು ಒಪ್ಪಲು ಸಾಧ್ಯವಿಲ್ಲ. ಸಾರ್ವಜನಿಕ ಬದುಕಿನಲ್ಲಿರುವವರು ಸಂಯಮದಿಂದ ವರ್ತಿಸಬೇಕು. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಹಕ್ಕಿದ್ದರೂ, ಅದು ಸಮಾಜದ ಸೌಹಾರ್ದತೆಗೆ ಧಕ್ಕೆ ತರಬಾರದು ಎಂದು ಅವರು ಎಚ್ಚರಿಸಿದ್ದಾರೆ. ಇದೇ ವೇಳೆ, ಭಗವಾನ್ ಅವರ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ವಕ್ತಾರ ವಿ.ಎಸ್. ಉಗ್ರಪ್ಪ ಅವರ ನಿಲುವನ್ನು ಶಾಸಕರು ಸ್ವಾಗತಿಸಿದ್ದಾರೆ.
ಅಧಿಕಾರಿಗಳು ಪ್ರಭಾವಿ ರಾಜಕಾರಣಿಗಳ ಕೈಗೊಂಬೆ: ಜಿಲ್ಲಾಡಳಿತದ ವಿರುದ್ಧ ಆಕ್ರೋಶ
ಮುಖ್ಯಮಂತ್ರಿ (ಉಪಮುಖ್ಯಮಂತ್ರಿ) ಡಿ.ಕೆ. ಶಿವಕುಮಾರ್ ಅವರು “ಅಕ್ರಮ ನಡೆದರೆ ತಮಗೆ ಫೋನ್ ಮಾಡಿ” ಎಂದು ಹೇಳಿರುವ ಬೆನ್ನಲ್ಲೇ, ಶಾಸಕ ಬಿ.ಪಿ. ಹರೀಶ್ ಅವರು ಜಿಲ್ಲಾಡಳಿತದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹರಿಹರ ಹಾಗೂ ಹರಪನಹಳ್ಳಿ ತಾಲೂಕಿನ ಎಸ್ಸಿ-ಎಸ್ಟಿ ಬಡ ರೈತರ ಜಮೀನುಗಳನ್ನು ಪ್ರಭಾವಿ ರಾಜಕಾರಣಿಗಳು ಒತ್ತುವರಿ ಮಾಡಿಕೊಂಡು ಹಳ್ಳದ ದಿಕ್ಕನ್ನೇ ಬದಲಾಯಿಸಿದ್ದಾರೆ. ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದರೂ ದಾವಣಗೆರೆ ಜಿಲ್ಲಾಧಿಕಾರಿಗಳು ಒಮ್ಮೆಯೂ ಸ್ಥಳ ಪರಿಶೀಲನೆ ನಡೆಸಿಲ್ಲ. ಅಧಿಕಾರಿಗಳು ಪ್ರಭಾವಿಗಳ ಕೈಗೊಂಬೆಯಾಗಿದ್ದಾರೆ ಎಂದು ಶಾಸಕರು ದೂರಿದ್ದಾರೆ.
ಕಾಡಜ್ಜಿಯ ಅಕ್ರಮ ಮಣ್ಣು ಸಾಗಾಟ: ದೂರು ನೀಡಿದರೂ ಕ್ರಮವಿಲ್ಲ
ಜನವರಿ 2026ರಲ್ಲಿ ದಾವಣಗೆರೆ ಜಿಲ್ಲೆಯ ಕಾದಜ್ಜಿ ಗ್ರಾಮದ ಕೃಷಿ ಬೀಜ ಉತ್ಪನ್ನ ಕೇಂದ್ರದ ಜಮೀನಿನಿಂದ ಸಾವಿರಾರು ಲೋಡ್ ಮಣ್ಣನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಫೋನ್ ಮೂಲಕ ತಿಳಿಸಿದರೂ ಅವರು ಸ್ಥಳಕ್ಕೆ ಬರಲಿಲ್ಲ. ಸ್ವತಃ ತಾವೇ (ಶಾಸಕರು) ಸ್ಥಳಕ್ಕೆ ಹೋಗಿ ಅಕ್ರಮವನ್ನು ತಡೆದಿದ್ದರೂ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈವರೆಗೂ ಯಾವುದೇ ಅಧಿಕೃತ ದೂರನ್ನು ದಾಖಲಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಶಾಸಕ ಬಿ.ಪಿ. ಹರೀಶ್ ಪ್ರಕಟಣೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ- ಬಿಪಿ ಹರೀಶ್
ದಾವಣಗೆರೆ ಜಿಲ್ಲೆಯ ಅಕ್ರಮ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ವಿಫಲವಾದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಹಿರಿಯರ ಜೊತೆ ಸಭೆ ನಡೆಸಿ ಒಂದು ವಾರದಲ್ಲಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಧರಣೊ ನಡೆಸುತ್ತೆನೆ ಎಂದು ಶಾಸಕ ಬಿಪಿ ಹರೀಶ್ ತಿಳಿಸಿದರು.
Leave a comment