2022-23 ನೇ ಸಾಲಿನ ರಾಜ್ಯ ಆಯವ್ಯಯದ ಬಗ್ಗೆ ಸಿಎಂ ರಿಂದ ಮಾಧ್ಯಮ ಹೇಳಿಕೆ.!

WhatsApp Image 2022-03-04 at 7.19.46 PM

ಬೆಂಗಳೂರು: ಬಸವರಾಜ್ ಬೊಮ್ಮಾಯಿ ಯವರು ಮಂಡಿಸಿರುವ 2022-23 ನೇ ಸಾಲಿನ ಆಯವ್ಯಯವು ಅಭಿವೃದ್ಧಿಪರ, ಸರ್ವರನ್ನೂ ಒಳಗೊಂಡು ಸರ್ವಸ್ಪರ್ಶಿಯಾಗಿ ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣದ ಉದ್ದೇಶವನ್ನು ಒಳಗೊಂಡಿದೆ.

* ನೆಚ್ಚಿನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿಯವರ ಸಂಕಲ್ಪದಂತೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ದೃಷ್ಟಿಯಲ್ಲಿ ಕೃಷಿಗೆ ಪೂರಕವಾಗಿದ್ದು, ರೈತರಿಗೆ ಹೆಚ್ಚಿನ ನೆರವನ್ನು ಒದಗಿಸುವ ಉದ್ದೇಶ ಹೊಂದಿದೆ.

* ರೈತರಿಗೆ ಪ್ರತಿ ಎಕರೆಗೆ ರೂ. 250 ರಂತೆ ಡೀಸೆಲ್‌ ಸಹಾಯಧನವನ್ನು ನೀಡುವ ರೈತಶಕ್ತಿ ಮತ್ತು ಕೊಯ್ಲೋತ್ತರ ನಿರ್ವಹಣೆ ಹಾಗೂ ರಫ್ತು ಮಾಡಲು ಅನುದಾನ ಒದಗಿಸಿರುವುದು ಹಾಗೂ ಹೈನುಗಾರಿಕೆಗೆ ಪ್ರೋತ್ಸಾಹ ನೀಡಲು ರಾಜ್ಯದಲ್ಲಿ “ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್‌” ಸ್ಥಾಪನೆ ಮಾಡಲು ಯೋಜನೆ ರೂಪಿಸಿದೆ.

* ರೈತರ ಆರೋಗ್ಯ ರಕ್ಷಣೆಗೆ ಯಶಸ್ವಿನಿ ಯೋಜನೆಯನ್ನು ಪರಿಷ್ಕರಿಸಿ ಮಜು ಜಾರಿಗೊಳಿಸಲು ಉದ್ದೇಶಿಸಲಾಗಿದೆ.

* ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿ ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಗಳಾದ ಎತ್ತಿನಹೊಳೆ, ಮೇಕೆ ದಾಟು ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ, ಹಾಗೂ ತುಂಗಭದ್ರಾ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಅನುದಾನವನ್ನು ಒದಗಿಸಿರುವುದು ದೀರ್ಘ ಕಾಲೀನವಾಗಿ ರಾಜ್ಯದ ನೀರಾವರಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.

* ದುರ್ಬಲ ವರ್ಗಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ, ಕನಕದಾಸ ವಿದ್ಯಾರ್ಥಿ ನಿಲಯ, ಡಾ. ಬಿ.ಆರ್.‌ ಅಂಬೇಡ್ಕರ್‌ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.
* ಹೋಬಳಿ ಮಟ್ಟದಲ್ಲಿನ ಶಾಲೆಗಳನ್ನು ಸುಸಜ್ಜಿತವಾದ “ಮಾದರಿ ಶಾಲೆ” ಗಳನ್ನಾಗಿ ಉನ್ನತೀಕರಿಸುವುದು,
* ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ರೂ.500 ಕೋಟಿ ಅನುದಾನ ಒದಗಿಸಿರುವುದು,
* ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಡ ಮಕ್ಕಳಿಗೆ “ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿನಿ” ಎಂಬ ಉಚಿತ ಆನ್‌ಲೈನ್‌ ಕೋಚಿಂಗ್‌ ವ್ಯವಸ್ಥೆಯನ್ನು ಪ್ರಾರಂಭಿಸಲು ಯೋಜನೆ ರೂಪಿಸುವ ಮೂಲಕ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ.

* ಪರಿಶಿಷ್ಟ ಜಾತಿ/ಪ.ಪಂಗಡ ಮತ್ತು ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಮತ್ತು ಇತರೆ  ಮಕ್ಕಳ ಉನ್ನತ  ವಿದ್ಯಾಭ್ಯಾಸ  ಪ್ರೋತ್ಸಾಹಿಸಲು ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು ಮತ್ತು ಮೈಸೂರಿನಲ್ಲಿ ಬೃಹತ್ತಾದ 1,000 ವಿದ್ಯಾರ್ಥಿ ಸಾಮರ್ಥ್ಯದ “ದೀನ್‌ ದಯಾಳ್‌ ಉಪಾಧ್ಯಾಯ ಸೌಹಾರ್ಧ ವಿದ್ಯಾರ್ಥಿ ನಿಲಯ” ಸ್ಥಾಪಿಸಲು ಉದ್ದೇಶಿಸಿರುವುದು ವಿದ್ಯಾರ್ಥಿಗಳಲ್ಲಿ ಭಾವೈಕ್ಯತೆ ಹಾಗೂ ಸೌಹಾರ್ದತೆಯ ಬೆಳವಣಿಗೆಗೆ ಪೂರಕವಾಗಲಿದೆ.

* ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಉನ್ನತೀಕರಿಸುವುದು,
* ಉತ್ತರ ಕರ್ನಾಟಕದ ಭಾಗಕ್ಕೆ ಅನುಕೂಲವಾಗುವಂತೆ ಹುಬ್ಬಳ್ಳಿಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಪ್ರಾದೇಶಿಕ ಹೃದ್ರೋಗ ಸಂಸ್ಥೆಯನ್ನು ಸ್ಥಾಪಿಸುವುದು ಹಾಗೂ ಬೆಳಗಾವಿಯಲ್ಲಿ ಕಿದ್ವಾಯಿ ಕ್ಯಾನ್ಸರ್‌  ಕೇಂದ್ರವನ್ನು ಸ್ಥಾಪಿಸುವ ಮೂಲಕ ಜನರ ಆರೋಗ್ಯ ರಕ್ಷಣೆಗೆ ಸರ್ಕಾರ ಒತ್ತು ನೀಡಿದೆ.

* ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರ ಮಾಸಿಕ ಗೌರವ ಧನವನ್ನು ಹೆಚ್ಚಳ ಮಾಡಲಾಗಿದೆ.

* ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ “ಜಲ ಜೀವನ್‌ ಮಿಷನ್”‌ ಯೋಜನೆಗೆ ಪೂರಕವಾಗಿ ಪ್ರತಿ ಗ್ರಾಮೀಣ ಮನೆಗಳಿಗೆ 2024 ರೊಳಗಾಗಿ ಕುಡಿಯುವ ನೀರನ್ನು ತಲುಪಿಸುವ ಯೋಜನೆಗೆ ಹೆಚ್ಚು ಒತ್ತು ನೀಡಲಾಗಿದ್ದು, ಇದಕ್ಕಾಗಿ ರೂ.7,000 ಕೋಟಿಗಳ ವೆಚ್ಚದ ಗುರಿ ಹೊಂದಲಾಗಿದೆ.

* ಅಪಾಯಕರ ಸನ್ನಿವೇಶದಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಮಾಸಿಕ ರೂ.2,000 ಗಳ ಸಂಕಷ್ಟ  ಭತ್ಯೆ ನೀಡುತ್ತಿರುವುದು ಸ್ವಾಗತಾರ್ಹ ಕ್ರಮವಾಗಿದೆ.

* “ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ” ಎಂಬ ಪರಿಕಲ್ಪನೆಯಡಿಯಲ್ಲಿ ಪರಿಸರ ಸ್ನೇಹಿ ನವನಗರಗಳನ್ನು ನಿರ್ಮಿಸಲು ಉದ್ದೇಶಿಸಿರುವುದು “ಸಾಗರಮಾಲಾ” ಯೋಜನೆಯಡಿ ಪ್ರಮುಖ ಬಂದರುಗಳ  ಅಭಿವೃದ್ಧಿ, ಹೊಸ ರೈಲು ಮಾರ್ಗಗಳ ಅಭಿವೃದ್ಧಿಯ ಮೂಲಕ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತುನೀಡಿ ಆ ಮೂಲಕ ಬಂಡವಾಳ ಹೂಡಿಕೆಗೆ ಹೆಚ್ಚಿನ ಸಹಾಯ ಮಾಡಲು ಉದ್ದೇಶಿಸಲಾಗಿದೆ.   ಇದರಿಂದಾಗಿ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚು ಸಹಾಯಕವಾಗಲಿದೆ.

* ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದು, ಮೆಟ್ರೋ ಹಂತ-3, ಫೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಾಣದ ಉದ್ದೇಶ, ರಾಜಕಾಲುವೆಗಳ ಅಭಿವೃದ್ಧಿಗೆ ರೂ.1,500 ಕೋಟಿ ಅನುದಾನ ಒದಗಿಸಿರುವುದು, ಅಮೃತ್ ನಗರೋತ್ಥಾನದ ಮೂಲಕ ರೂ. 6,000 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಿರುವುದು ಬೆಂಗಳೂರು ನಗರವನ್ನು ವಿಶ್ವದರ್ಜೆಯ ನಗರವನ್ನಾಗಿ ರೂಪಿಸುವಲ್ಲಿ ಸಹಕಾರಿಯಾಗಲಿದೆ.

* ಒಟ್ಟಾರೆಯಾಗಿ ಈ ಆಯವ್ಯಯವು ಸರ್ವರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಾಗೂ ರಾಜ್ಯದ ಎಲ್ಲಾ ಭಾಗಗಳ ಸಮಗ್ರ ಅಭಿವೃದ್ಧಿ ಒಳಗೊಳ್ಳುವ ಜೊತೆಗೆ ಕೋವಿಡ್ ನಿಂದಾದ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಸಹ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ದೀರ್ಘಕಾಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡುವ ಅತ್ಯುತ್ತಮವಾದ ಆಯವ್ಯಯವಾಗಿದೆ ಎಂಬುದು ನನ್ನ ಅಭಿಪ್ರಾಯ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!