ಅಧಿಕಾರಿಗಳ ನಿರ್ಲಕ್ಷ್ಯ.! ವಿದ್ಯುತ್ ತಗುಲಿ ಯುವಕ ಸಾವು: ಪರಿಹಾರಕ್ಕೆ ಆಗ್ರಹಿಸಿದ ಯುವ ಗ್ರೀನ್ ಬ್ರಿಗೇಡ್
ದಾವಣಗೆರೆ: ನಗರದ ಸ್ಮಾರ್ಟ್ಸಿಟಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಿದ್ಯುತ್ ತಗುಲಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ. ಸಂಬಂಧ ಪಟ್ಟ ಸ್ಮಾರ್ಟ್ಸಿಟಿ ಅಧಿಕಾರಿಗಳ, ಕೆಇಬಿ ಅಧಿಕಾರಿಗಳ ಹಾಗು ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಿಸಬೇಕು ಜತೆಗೆ ಮೃತನ ಕುಟುಂಬಕ್ಕೆ ೫೦ ಲಕ್ಷ ರೂ., ಪರಿಹಾರ ನೀಡಬೇಕೆಂದು ಜಿಲ್ಲಾಡಳಿತಕ್ಕೆ ಯುವ ಭಾರತ್ ಗ್ರೀನ್ ಬ್ರಿಗೇಡ್ ಅಧ್ಯಕ್ಷ ನಾಗರಾಜ್ ಸುರ್ವೆ ಮನವಿ ಮಾಡಿದ್ದಾರೆ.
ನಗರದ ಕೆ.ಆರ್ ರಸ್ತೆಯ, ಮೈಸೂರು ಬ್ಯಾಂಕ್ ಹಿಂಭಾಗದ ನಿವಾಸಿಯಾಗಿರುವ ಮನೋಜ್ (೨೩) ಕೂಲಿ ಕಾರ್ಮಿಕ ಯುವಕ ವಿದ್ಯುತ್ ಸ್ಪರ್ಶದಿಂದ ಮೃತ ಪಟ್ಟಿದ್ದಾನೆ.
ನಗರದ ರಿಂಗ್ ರಸ್ತೆಯ ಭೂತಪ್ಪನ ದೇವಸ್ಥಾನದ ಹತ್ತಿರ ಕಾಮಗಾರಿಯಲ್ಲಿ ಗುತ್ತಿಗೆದಾರನ ಬೇಜವಾಬ್ದಾರಿಯಿಂದಾಗಿ ಹಾಗು ಸ್ಮಾರ್ಟ್ಸಿಟಿ ಇಂಜಿನಿಯರ್ಗಳ ನಿರ್ಲಕ್ಷ್ಯದಿಂದಾಗಿ ಯುವಕ ವಿದ್ಯುತ್ ಸ್ಪರ್ಶಕ್ಕೆ ಬಲಿಯಾಗಿದ್ದಾನೆ.
ಕಾಮಗಾರಿ ನಡೆಯುವ ಸ್ಥಳದಲ್ಲಿ ರಸ್ತೆ ಬದಿಯಲ್ಲಿ ಕರ್ಬ್ ಹಾಗು ಪೇವರ್ಸ್ ಹಾಕಲು ಗುಂಡಿ ಅಗಿಯಲಾಗಿದ್ದು, ಅಲ್ಲಿನ ಯೂಜಿ ಕೇಬಲ್ ಗೆ ಡ್ಯಾಮೇಜ್ ಆಗಿದೆ, ಇದನ್ನೂ ಗಮನಿಸದ ಗುತ್ತಿಗೆದಾರ ಹಾಗು ಸ್ಮಾರ್ಟ್ ಸಿಟಿಯ ಅಧಿಕಾರಿಗಳು ಅದನ್ನು ಹಾಗೆ ಬಿಟ್ಟಿದ್ದಾರೆ. ಸುರಕ್ಷತೆ ಕ್ರಮಕ್ಕೆ ಯಾವುದೇ ಜಾಗೃತಿಗಾಗಿ ಸೂಚನಾ ಫಲಕಗಳನ್ನು ಸಹ ಅಳವಡಿಸಿಲ್ಲ. ಯುವಕ ತನಗೆ ತಿಳಿಯದೇ ಆ ಸ್ಥಳಕ್ಕೆ ಹೋಗಿದ್ದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶವಾಗಿ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ರಸ್ತೆಯ ಬದಿಯಲ್ಲಿ ಜೆಸಿಬಿಯಿಂದಾ ಅಥವ ಹಸ್ತಚಾಲಿತವಾಗಿ ಅಗೆಯಲು ಕೆ.ಇ.ಬಿ ಯಿಂದ ಅನುಮತಿ ಪಡೆದಿರಬೇಕು, ಇಂತಹ ಸ್ಥಳದಲ್ಲಿ ಕೆಇಬಿ ಅಧಿಕಾರಿಯ ಉಪಸ್ಥಿತಿಯಲ್ಲಿ ಗುಂಡಿಗಳನ್ನ ಅಗೆಯಬೇಕು. ಕಾಮಗಾರಿ ನಂತರ ಯಥಾಸ್ಥಿತಿಯಾಗಿ ಸುರಕ್ಷತೆಯನ್ನು ಪರಿಶೀಲಿಸಿ ಮುಚ್ಚಬೇಕು. ಆದರೆ, ಇದ್ಯಾವುದನ್ನೂ ಮಾಡದೆ ಒಬ್ಬ ಅಮಾಯಕನನ್ನು ಬಲಿ ಪಡೆದಿದ್ದಾರೆ. ಇದೊಂದು ಗಂಭೀರ ಪ್ರಕರಣವಾಗಿದ್ದು, ಸಂಬಂಧ ಪಟ್ಟ ಸ್ಮಾರ್ಟ್ಸಿಟಿ ಅಧಿಕಾರಿಗಳ, ಕೆಇಬಿ ಅಧಿಕಾರಿಗಳ ಹಾಗು ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಿಸಬೇಕು ಜತೆಗೆ ಮೃತನ ಕುಟುಂಬಕ್ಕೆ ೫೦ ಲಕ್ಷ ರೂ., ಪರಿಹಾರ ನೀಡಬೇಕೆಂದು ಜಿಲ್ಲಾಡಳಿತಕ್ಕೆ ಯುವ ಭಾರತ್ ಗ್ರೀನ್ ಬ್ರಿಗೇಡ್ ಅಧ್ಯಕ್ಷ ನಾಗರಾಜ್ ಸುರ್ವೆ ಮನವಿ ಮಾಡಿದ್ದಾರೆ.