ಭಾರತದ ಪೂಣ್ಯ ಭೂಮಿಗೆ ಅವಹೇಳನ ಮಾಡಿದ ರಾಹುಲ್ ಗಾಂಧಿಗೆ ಕ್ಷಮೆಯೆ ಇಲ್ಲ: ಸ್ಮೃತಿ ಇರಾನಿ
ಗದಗ: ಭಾರತ ಭೂಮಿ ಜನ್ಮನೀಡಿದ ತಾಯಿಯಷ್ಟೇ ಪವಿತ್ರಳು ಎಂಬ ಬಲವಾದ ನಂಬಿಕೆ ಪ್ರತಿಯೊಬ್ಬ ಭಾರತೀಯರದ್ದಾಗಿದೆ. ಆದರೆ ವಿದೇಶಿ ನೆಲದಲ್ಲಿ ನಮ್ಮ ಪುಣ್ಯಭೂಮಿಯ ಬಗ್ಗೆ ಅವಹೇಳಕಾರಿ ಮಾತನಾಡಿದ ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಯನ್ನು ಈ ದೇಶದ ಜನ ಎಂದಿಗೂ ಕ್ಷಮಿಸುವುದಿಲ್ಲ. ಸಹಿಸುವುದಿಲ್ಲ ಎಂದು ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಶಿರಹಟ್ಟಿ ಸಮೀಪ ಲಕ್ಷ್ಮೇಶ್ವರದಲ್ಲಿ ವಿಜಯ ಸಂಕಲ್ಪ ಯಾತ್ರೆಯ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸೋನಿಯಾ ಗಾಂಧಿ, ಮಗನಿಗೆ ದೇಶದ ಬಗ್ಗೆ ಗೌರವ, ಅಭಿಮಾನ ಮತ್ತು ಸಂಸ್ಕಾರವನ್ನು ಕಲಿಸದಿರುವುದರಿಂದ ಈ ಭಾರತ ಭೂಮಿಗೆ ಇರುವ ಗೌರವ ತಿಳಿದಿಲ್ಲ. ವಿಶ್ವಮಾನ್ಯ ಭಾರತದ ಸಂವಿಧಾನ ಉಳಿಯಬೇಕಾದರೆ ಭಾರತೀಯ ಬಿಜೆಪಿ ಕಾರಣ. ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರಲ್ಲಿ ಪ್ರೇರಣೆ ನೀಡಿ ಕೋವಿಡ್ ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರಿಗೆ ಆಹಾರ, ಆರೋಗ್ಯ ವ್ಯವಸ್ಥೆ ಕಲ್ಪಿಸಿ ದೇಶದ ಜನರಿಗೆ ಶ್ರೀರಕ್ಷೆಯಾಗಿ ನಿಂತರು. ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿ ಕಿಸಾನ್ ಸಮ್ಮಾನ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರತಿ ರೈತ ಪಲಾನುಭವಿಗೆ ೧೦ ಸಾವಿರ ನೀಡುವ ಮೂಲಕ ರೈತರಿಗೆ ಆಸರೆಯಾಗಿದೆ. ಮುದ್ರಾ ಯೋಜನೆಯಡಿ ಎಲ್ಲ ವರ್ಗದವರ ನಿರೂದ್ಯೋಗ ನಿವಾರಣೆಗಾಗಿ ಸ್ವಯಂ ಉದ್ಯೋಗಕ್ಕಾಗಿ ಬ್ಯಾಂಕುಗಳ ಮೂಲಕ ಕೋಟ್ಯಾಂತರ ರೂ ನೆರವು ನೀಡಿದೆ. ಪ್ರತಿ ಹಳ್ಳಿ, ಮಂಡಲ, ಜಿಲ್ಲೆ, ರಾಜ್ಯ ಸಶಕ್ತವಾದರೆ ದೇಶದ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ. ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಈ ವಿಜಯ ಸಂಕಲ್ಪ ಯಾತ್ರೆಯು ಪಕ್ಷದ ಗೆಲುವಿನ ಅಭಿಯಾನವೇ ಆಗಿದೆ ಎಂದರು.
ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ದ ಹರಿಹಾಯ್ದ ಅವರು ಮಹದಾಯಿ ಹೋರಾಟದ ವೇಳೆ ರೈತರ ಮೇಲೆಯೇ ಲಾಟಿ ಪ್ರಹಾರ ಮಾಡಿಸಿ ಈಗ ತದ್ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಪಕ್ಷ ಗೆಲ್ಲುವುದಿಲ್ಲ ಎಂಬ ಹತಾಸೆಯಿಂದ ರಾಜ್ಯದ ಜನರಿಗೆ ವಾರಂಟಿ ಇಲ್ಲದ ಗ್ಯಾರಂಟಿ ಯೋಜನೆಗಳನ್ನು ಕೊಡುತ್ತೇವೆಂದು ಸುಳ್ಳು ಹೇಳುತ್ತಿದ್ದಾರೆ. ಮುಂಬರುವ ಚುನಾವಣೆಗೆ ಯುದ್ಧಭೂಮಿ ಸಿದ್ಧವಾಗಿದೆ. ಬಿಜೆಪಿ ಕಾರ್ಯಕರ್ತರು ಯುದ್ಧಭೂಮಿಗೆ ವಂದಿಸಿ ಪಕ್ಷದ ಗೆಲುವಿಗೆ ಸಂಕಲ್ಪದ ಹೆಜ್ಜೆ ಇಡಬೇಕು.
ದೇಶ ಮತ್ತು ರಾಜ್ಯದಲ್ಲಿ ಮತ್ತೇ ಡಬಲ್ ಎಂಜಿನ್ ಸರ್ಕಾರ ರಚನೆ ಶತಸಿದ್ಧ. ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೇ ಕಮಲ ಅರಳಿಸುವಲ್ಲಿ ಎಲ್ಲರೂ ಕೈ ಜೋಡಿಸಿ ಮೋದೀಜಿ ಕೈ ಬಲಪಡಿಸಬೇಕು ಎಂದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಡಬಲ್ ಇಂಜಿನ್ ಸರ್ಕಾರ ಜನಯೋಜನೆಗಳು ದೇಶದ ಜನರಲ್ಲಿ ಭರವಸೆ ಮೂಡಿಸಿದೆ. ಕಾಂಗ್ರೇಸ್ ಪಕ್ಷ ಏನೇ ಗ್ಯಾರಂಟಿ ಕೊಡುತ್ತೇವೆಂದರೂ ಮತದಾರರು ನರೇಂದ್ರ ಮೋದಿ ಸರ್ಕಾರವನ್ನು ಬಿಟ್ಟುಕೊಡುವುದಿಲ್ಲ. ಮೋದಿ ಬೈದಷ್ಟು ಬಿಜೆಪಿ ಶಕ್ತಿ ಹೆಚ್ಚಲಿದೆ ಎಂದರು.
ಸ್ಥಳಿಯ ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಪಕ್ಷದ ಕಾರ್ಯಕರ್ತರೇ ನನ್ನ ಶಕ್ತಿ ಮತ್ತು ಇಲ್ಲಿನ ಮತದಾರರ ಆಶೀರ್ವಾದ ಪಕ್ಷದ ಗೆಲುವಿಗೆ ಶ್ರೀರಕ್ಷೆಯಾಗಿದೆ. ಅಮೇಥಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿಯನ್ನು ಸೋಲಿಸಿದ ಗಟ್ಟಿಗಿತ್ತಿ ಸ್ಮೃತಿ ಇರಾನಿ ಕ್ಷೇತ್ರಕ್ಕೆ ಆಗಮಿಸಿದ್ದು ಕಾರ್ಯಕರ್ತರಲ್ಲಿ ಹೊಸ ಹುರುಪು ತಂದಿದೆ ಎಂದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ, ಜಿಲ್ಲಾಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ, ವಿಜಯ ಸಂಕಲ್ಪ ಯಾತ್ರೆಯ ಸಂಚಾಲಕ ಅರುಣ ಶಹಾಪುರ, ರಾಜ್ಯ ಕಾರ್ಯದರ್ಶಿ ಭಾರತಿ ಮುಗುದಮ್, ಯಾತ್ರಾ ಸಹಸಂಚಲಕರಾದ ಮಲ್ಲಿಕಾರ್ಜುನ ಬಾಳಿಕಾಯಿ, ವೀವೆಕಾನಂದ ಡಬ್ಬಿ, ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ವಿಜಯ ಸಂಕಲ್ಪ ಯಾತ್ರೆಯ ಜಿಲ್ಲಾ ಸಂಚಾಲಕ ಶಶಿಧರ ದಿಂಡೂರ ಇದ್ದರು.
ಸಾವಿರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸ್ಮೃತಿ ಇರಾನಿಯವರಿಗೆ ದೇಶಿಯ ಸೀರೆ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.