ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಇಸ್ಮೈಲ್ ಝಬಿಯುಲ್ಲಾ.! 10 ಕ್ಷೇತ್ರಗಳಿಗೆ ಎಸ್ಡಿಪಿಐ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಬೆಂಗಳೂರು: ವಿಧಾನಸಭೆ ಚುನಾವಣೆಗೆ ಎಸ್ಡಿಪಿಐನಿಂದ (ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ) ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಇಸ್ಮೈಲ್ ಝಬಿಯುಲ್ಲಾ, ಚಿತ್ರದುರ್ಗಕ್ಕೆ ಬಾಳೆಕಾಯಿ ಶ್ರೀನಿವಾಸ್ ಸೇರಿದಂತೆ 10 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ಶನಿವಾರ ಪ್ರಕಟಿಸಿದ್ದಾರೆ.
ಮೈಸೂರಿನ ನರಸಿಂಹರಾಜ ಕ್ಷೇತ್ರಕ್ಕೆ ಕೆ.ಎಚ್.ಅಬ್ದುಲ್ ಮಜೀದ್, ಬೆಂಗಳೂರಿನ ಪುಲಕೇಶಿನಗರಕ್ಕೆ(ಎಸ್ಸಿ) ಬಿ.ಆರ್.ಭಾಸ್ಕರ ಪ್ರಸಾದ್, ಸರ್ವಜ್ಞನಗರಕ್ಕೆ ಅಬ್ದುಲ್ ಹನ್ನಾನ್, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳಕ್ಕೆ ಇಲ್ಯಾಸ್ ಮೊಹಮ್ಮದ್, ಮೂಡಬಿದಿರೆ ಕ್ಷೇತ್ರಕ್ಕೆ ಅಲ್ಫೋನ್ಸ್ ಫ್ರಾಂಕೊ, ಬೆಳ್ತಂಗಡಿ ಕ್ಷೇತ್ರಕ್ಕೆ ಅಕ್ಬರ್ ಮೂಲೂರ್, ರಾಯಚೂರು ಕ್ಷೇತ್ರಕ್ಕೆ ನಜೀರ್ ಖಾನ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ.
‘ರಾಜ್ಯದಲ್ಲಿ ಒಟ್ಟು 100 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಇನ್ನೂ 44 ಕ್ಷೇತ್ರಗಳಿಗೆ ಶೀಘ್ರದಲ್ಲೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು. ಬಾಕಿ 46 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಮುಂದಿನ ಹಂತದಲ್ಲಿ ಬಿಡುಗಡೆ ಮಾಡಲಾಗುವುದು’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಚ್.ಅಬ್ದುಲ್ ಮಜೀದ್ ಹೇಳಿದ್ದಾರೆ.
ಬಿಜೆಪಿ ಹೊರತುಪಡಿಸಿ ಬೇರೆ ಯಾವುದೇ ಪಕ್ಷದ ಜತೆ ಹೊಂದಾಣಿಕೆ ರಾಜಕೀಯಕ್ಕೆ ಎಸ್ಡಿಪಿಐ ಸಿದ್ಧವಿದೆ. ಈ ಸಂಬಂಧ ಚರ್ಚೆಗಳೂ ಆರಂಭವಾಗಿವೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ತಿಳಿಸಿದ್ದಾರೆ.