ಯುಪಿ ಲಖಿಂಪುರದಲ್ಲಿ ರೈತರ ಹತ್ಯೆ ಖಂಡಿಸಿ ಮೇಣದ ಬತ್ತಿ ಹಚ್ಚಿ ಪ್ರತಿಭಟನೆ
ದಾವಣಗೆರೆ: ಉತ್ತರ ಪ್ರದೇಶದ ಲಖೀಂಪುರದಲ್ಲಿ ನಡೆದ ರೈತರ ಮಾರಣಹೋಣ ಖಂಡಿಸಿ ದಾವಣಗೆರೆಯಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ದಾವಣಗೆರೆ ಜಿಲ್ಲಾ ಘಟಕದಿಂದ ಮೇಣದ ಬತ್ತಿ ಹಚ್ಚಿ ಕ್ಯಾಂಡಲಿAಗ್ ಪ್ರತಿಭಟನೆ ಮಾಡುವ ಜತೆ ಹುತಾತ್ಮ ರೈತರಿಗೆ ಶ್ರದ್ದಾಂಜಲಿ ಸಲ್ಲಿಸಿದರು.
ನಗರದ ಜಯದೇವ ವೃತ್ತದಲ್ಲಿ ಬುಧವಾರ ಸಂಜೆ ಜಮಾಯಿಸಿದ ಪ್ರತಿಭಟನಾಕಾರರು, ಜಿಟಿಜಿಟಿ ಮಳೆಯಲ್ಲೂ ಮೃತ ರೈತರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸಿ ಶ್ರದ್ದಾಂಜಲಿ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಆವರಗೆರೆ ಹೆಚ್.ಜಿ.ಉಮೆಶ್, ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಉದ್ದೇಶಪೂರ್ವಕವಾಗಿ ಕಾರು ಹಾಯಿಸಿ ಹತ್ಯೆಗೈದ ಅಪರಾಧಿಗಳನ್ನು ಬಂಧಿಸಿ, ಕೊಲೆ ಪ್ರಕರಣದಲ್ಲಿ ಬರುವ ಐಪಿಸಿ ಅಡಿಯಲ್ಲಿ ಉಗ್ರ ಶಿಕ್ಷೆ ಕೊಡಿಸುವ ಜೊತೆಗೆ ಘಟನೆಯಲ್ಲಿ ಮೃತರಾದ ರೈತರ ತಲಾ ಕುಟುಂಬಕ್ಕೆ 1 ಕೋಟಿ ಪರಿಹಾರ ನಿನೀಡಬೇಕೆಂದು ಆಗ್ರಹಿಸಿದರು.
ಸರ್ಕಾರಿ ನೌಕರಿಯನ್ನು ಮೃತರ ಅವಲಂಬಿತ ಕುಟುಂಬಗಳಿಗೆ ನೀಡಬೇಕು. ಅಲ್ಲದೇ ಕೇಂದ್ರ ಸರ್ಕಾರದ ರಾಜ್ಯ ಗೃಹ ಖಾತೆ ಸಚಿವ ಅಜಯ್ ಮಿಶ್ರಾ ಈ ಕೂಡಲೇ ರಾಜೀನಾಮೆ ನೀಡಬೇಕು. ರೈತರನ್ನು ವಿನಾಕಾರಣ ಕೊಲೆ ಮಾಡುತ್ತಿರುವ ಬಿಜೆಪಿ ಸರ್ಕಾರ ತೊಲಗಬೇಕು. ಅಲ್ಲದೇ ತನ್ನ ಖುಷಿಗಾಗಿ ಗಾಳಿಯಲ್ಲಿ ಗುಂಡು ಹಾರಿಸುವ ಕೇಂದ್ರ ಸಚಿವ ದಾವಣಗೆರೆಗೆ ಆಗಮಿಸಿದ್ದು, ಬಿಜೆಪಿ, ಸಂಘ ಪರಿವಾರ ಅವರಿಗೆ ಬುದ್ದಿ ಹೇಳುವ ಜೊತೆಗೆ ತಾನೂ ಇಂತಹ ಅನಾಗರೀಕ ಸಂಸ್ಕೃತಿಯಿAದ ಹೊರಬರಬೇಕೆಂದು ಒತ್ತಾಯಿಸಿದರು.
ಈ ವೇಳೆ ಮಧು ತೊಗಲೇರಿ, ಶ್ರೀನಿವಾಸ್, ದೇವರಾಜ್, ರಂಗಪ್ಪ, ಭಾರತಿ, ಐರಣಿ ಚಂದ್ರು, ಮಹಮ್ಮದ್ ಜಿಕ್ರಿಯಾ, ಆದಿಲ್ಖಾನ್ ಸೇರಿದಂತೆ ಇತರರು ಇದ್ದರು.