ದಾವಣಗೆರೆ: (UPSC) ದಾವಣಗೆರೆ ನಗರದ ವಿಶ್ವವಿದ್ಯಾನಿಲಯ ದೃಶ್ಯಕಲಾ ಮಂದಿರ ಆವರಣದಲ್ಲಿ ಎಸ್ ಎಸ್ ಕೇರ್ ಟ್ರಸ್ಟ್ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ನಡೆಯುತ್ತಿರುವ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ “ಸಂಕಲ್ಪ”ಕ್ಕೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಮೇ 24ರಂದು ನಡೆಯಲಿರುವ UPSC ಪ್ರೀಲಿಮ್ಸ್ ಪರೀಕ್ಷೆಯನ್ನು ಎದುರಿಸಲು ಅಭ್ಯರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದ ಅವರು, “UPSC ಪರೀಕ್ಷೆ ಕಠಿಣ ಹಾಗೂ ಅತ್ಯಂತ ಸ್ಪರ್ಧಾತ್ಮಕವಾದರೂ, ಸೇವೆಯ ಮನೋಭಾವವೇ ಯಶಸ್ಸಿನ ದಾರಿಗೆ ದೀಪವಾಗುತ್ತದೆ. ಅಂಕಗಳಿಗಿಂತ ಸಮಾಜಕ್ಕೆ ಕೊಡುಗೆ ನೀಡುವ ದೃಷ್ಟಿಕೋನವೇ ಶಾಶ್ವತ ಪ್ರೇರಣೆ” ಎಂದು ಹೇಳಿದರು.
ಪರೀಕ್ಷಾ ಸಮಯದಲ್ಲಿ ಆತ್ಮವಿಶ್ವಾಸ, ಶಾಂತಿ ಮತ್ತು ಸಮರ್ಪಕ ಸಿದ್ಧತೆಯ ಮೇಲೆ ನಂಬಿಕೆ ಇಡುವುದು ಅತ್ಯಗತ್ಯವೆಂದು ತಿಳಿಸಿದ ಅವರು, “ಹೆಚ್ಚಾಗಿ ಆಲೋಚಿಸದೆ, ನಿಮ್ಮ ಮೊದಲ ನಿರ್ಧಾರವನ್ನು ನಂಬಿ ವಿಶ್ವಾಸದೊಂದಿಗೆ ಪರೀಕ್ಷೆ ಬರೆಯಿರಿ” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿ ಪ್ರೋತ್ಸಾಹಿಸಿದರು. ಈ ವೇಳೆ ಸಂಕಲ್ಪ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.
Leave a comment