ಶಿವಮೊಗ್ಗ:(Sand) ಶಿವಮೊಗ್ಗ ಜಿಲ್ಲೆಯಲ್ಲಿ ದೀರ್ಘಕಾಲದಿಂದ ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ದಂಧೆಗೆ ಲೋಕಾಯುಕ್ತ ಪೊಲೀಸರು ಮರಣಶಾಸನ ಬರೆದಿದ್ದಾರೆ. ಶನಿವಾರ ಮುಂಜಾನೆ ಭರ್ಜರಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಜಿಲ್ಲೆಯ ಸುಮಾರು 25ಕ್ಕೂ ಹೆಚ್ಚು ಅಕ್ರಮ ಮರಳು ಕ್ವಾರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಆಘಾತ ನೀಡಿದ್ದಾರೆ.
ಅಧಿಕಾರಿಗಳ ಬೃಹತ್ ತಪಾಸಣಾ ಪಡೆ:
ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ಹಾಗೂ ಶಿವಮೊಗ್ಗ ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ್ ಅವರ ನೇತೃತ್ವದಲ್ಲಿ ಈ ಮೆಗಾ ಕಾರ್ಯಾಚರಣೆ ನಡೆದಿದೆ. ದಾಳಿಗಾಗಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ಹಾವೇರಿ ಜಿಲ್ಲೆಗಳ ಲೋಕಾಯುಕ್ತ ಇನ್ಸ್ಪೆಕ್ಟರ್ ಹಾಗೂ ಪೊಲೀಸ್ ಸಿಬ್ಬಂದಿಗಳ ಒಟ್ಟು 15 ವಿಶೇಷ ತಂಡಗಳನ್ನು ರಚಿಸಲಾಗಿತ್ತು.

ನದಿಯಂಚಿನ ಕ್ವಾರಿಗಳ ಮೇಲೆ ಸನಿಹ ನಿಗಾ:
ಹೊಳೆಹೊನ್ನೂರು ಭಾಗದ ತುಂಗಭದ್ರಾ ನದಿ, ಭದ್ರಾವತಿ ವ್ಯಾಪ್ತಿಯ ಭದ್ರಾ ನದಿ, ಶಿವಮೊಗ್ಗ ಹಾಗೂ ತೀರ್ಥಹಳ್ಳಿ ತಾಲೂಕಿನ ತುಂಗಾ ನದಿ ಪಾತ್ರಗಳು ಮತ್ತು ಸಾಗರ, ಹೊಸನಗರ ತಾಲೂಕುಗಳ ಶರಾವತಿ ಹಿನ್ನೀರು ಪ್ರದೇಶಗಳಲ್ಲಿ ಅಕ್ರಮವಾಗಿ ತಲೆಎತ್ತಿದ್ದ ಮರಳು ಕ್ವಾರಿಗಳನ್ನು ಗುರಿಯಾಗಿಸಿಕೊಂಡು ಈ ದಾಳಿಗಳನ್ನು ನಡೆಸಲಾಗಿದೆ.
ಕೋಟಿ ಮೌಲ್ಯದ ಯಂತ್ರೋಪಕರಣಗಳು ವಶ:
ಲೋಕಾಯುಕ್ತರ ಮಿಂಚಿನ ದಾಳಿಯ ವೇಳೆ ಅಕ್ರಮ ಮರಳು ದಂಧೆಗೆ ಬಳಸಲಾಗುತ್ತಿದ್ದ ಭಾರಿ ಪ್ರಮಾಣದ ವಾಹನಗಳು ಮತ್ತು ಉಪಕರಣಗಳನ್ನು ಜಪ್ತಿ ಮಾಡಲಾಗಿದೆ. ಇದರಲ್ಲಿ 15 ಜೆಸಿಬಿಗಳು, 10 ಮರಳು ಫಿಲ್ಟರ್ ಮಾಡುವ ಯಂತ್ರಗಳು, 15 ಲಾರಿಗಳು ಹಾಗೂ 10 ಟ್ರ್ಯಾಕ್ಟರ್ಗಳು ಸೇರಿ ಒಟ್ಟು 50ಕ್ಕೂ ಹೆಚ್ಚು ವಾಹನಗಳು ಸೇರಿವೆ.

ಗಣಿ ಇಲಾಖೆ ಕಚೇರಿಗೂ ಶಾಕ್:
ಕ್ವಾರಿಗಳ ಮೇಲೆ ದಾಳಿ ನಡೆಸುವುದರ ಜೊತೆಗೆ, ಶಿವಮೊಗ್ಗದಲ್ಲಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಿಲ್ಲಾ ಕಚೇರಿಯ ಮೇಲೂ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಅಕ್ರಮ ಮರಳುಗಾರಿಕೆಗೆ ಇಲಾಖೆಯ ಅಧಿಕಾರಿಗಳ ಶ್ರೀರಕ್ಷೆ ಇದೆಯೇ ಎಂಬ ಸಂಶಯದ ಹಿನ್ನೆಲೆಯಲ್ಲಿ ಕಚೇರಿಯಲ್ಲಿದ್ದ ಪ್ರಮುಖ ದಾಖಲೆ ಪತ್ರಗಳ ತೀವ್ರ ಪರಿಶೀಲನೆ ನಡೆಸಲಾಗುತ್ತಿದೆ.
ಕೆಡಿಪಿ ಸಭೆಯ ಹಿನ್ನೆಲೆ:
ಇತ್ತೀಚೆಗಷ್ಟೇ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮತ್ತು ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಜಿಲ್ಲೆಯ ಅಕ್ರಮ ಮರಳು ಮತ್ತು ಮಣ್ಣು ದಂಧೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಪಿ.ಕೆ. ನಾಯ್ಕ್ ಅವರ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರ ಬೆನ್ನಲ್ಲೇ ಲೋಕಾಯುಕ್ತರು ಈ ಭರ್ಜರಿ ಕ್ರಮ ಕೈಗೊಂಡಿರುವುದು ಜಿಲ್ಲೆಯಾದ್ಯಂತ ಭಾರಿ ಸಂಚಲನ ಮೂಡಿಸಿದೆ.
Leave a comment