ದಾವಣಗೆರೆ: ದಾವಣಗೆರೆ ಸ್ಥಳೀಯ ಪೋಕ್ಸೊ (POCSO) ನ್ಯಾಯಾಲಯದಲ್ಲಿ ಇಂದು ನಿಗದಿಯಾಗಿದ್ದ ವಚನಾನಂದ ಸ್ವಾಮಿ ಅವರ ಜಾಮೀನು ರದ್ದು ಕೋರಿಕೆಯ ಅರ್ಜಿಯ ಮೇಲಿನ ಆದೇಶ ಪ್ರಕಟಣೆಯನ್ನು ಹೈಕೋರ್ಟ್ ನಲ್ಲಿ ವಿಚಾರಣೆಯ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಬಸವರಾಜ್ ಎ ಎಂ. ತಿಳಿಸಿದ್ದಾರೆ
ಹೈಕೋರ್ಟ್ ಆದೇಶಕ್ಕೆ ಕಾಯುತ್ತಿರುವ ದಾವಣಗೆರೆ ನ್ಯಾಯಾಲಯ
ದಾವಣಗೆರೆ ಪೋಕ್ಸೊ ನ್ಯಾಯಾಲಯವು ನೀಡಿದ್ದ ಜಾಮೀನು ಆದೇಶವನ್ನು ಪ್ರಶ್ನಿಸಿ ಸಂತ್ರಸ್ತರು ಮತ್ತು ದೂರುದಾರರು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ (High Court) ಮೊರೆ ಹೋಗಿದ್ದಾರೆ. ಹೈಕೋರ್ಟ್ನಲ್ಲಿ ಈ ತಿಂಗಳ 23ರಂದು ಆರೋಪಿ ನ್ಯಾಯಾಲಯಕ್ಕೆ ಹಾಜರಾಗಲು ದಿನಾಂಕ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ, ಹೈಕೋರ್ಟ್ನ ಮುಂದಿನ ಆದೇಶಕ್ಕಾಗಿ ಕಾಯಲು ತೀರ್ಮಾನಿಸಿರುವ ದಾವಣಗೆರೆ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಜೂನ್ 30ಕ್ಕೆ ಮುಂದೂಡಿದೆ.
ನಾಲ್ವರು ಸಂತ್ರಸ್ತರಿಂದ ಹೇಳಿಕೆ ದಾಖಲು
ತನಿಖಾಧಿಕಾರಿಗಳು ಈ ಪ್ರಕರಣದಲ್ಲಿ ಒಟ್ಟು ನಾಲ್ವರು ಸಂತ್ರಸ್ತರನ್ನು ಗುರುತಿಸಿದ್ದು, ಎಲ್ಲ ನಾಲ್ಕೂ ಜನ ಸಂತ್ರಸ್ತರು ತನಿಖಾಧಿಕಾರಿಗಳ (I.O.) ಮುಂದೆ ಹಾಗೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ತಮಗೆ ಆದ ದೌರ್ಜನ್ಯದ ಕುರಿತು ಸ್ಪಷ್ಟ ಹೇಳಿಕೆ ನೀಡಿದ್ದಾರೆ. ಪ್ರಕರಣದ ಮೊದಲನೇ ಆರೋಪಿ (A1) ಹಾಗೂ ಎರಡನೇ ಆರೋಪಿ (A2) ಇಬ್ಬರ ವಿರುದ್ಧವೂ ಸಂತ್ರಸ್ತರು ಇಲ್-ಟ್ರೀಟ್ಮೆಂಟ್ (ದೌರ್ಜನ್ಯ) ಆರೋಪ ಮಾಡಿದ್ದಾರೆ.
ಭಾಗಶಃ ದೋಷಾರೋಪ ಪಟ್ಟಿ (Partial Charge Sheet) ಸಲ್ಲಿಕೆ
ಸದ್ಯಕ್ಕೆ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವುದು ಪ್ರಾಥಮಿಕ ಅಥವಾ ಭಾಗಶಃ ದೋಷಾರೋಪ ಪಟ್ಟಿ ಮಾತ್ರವಾಗಿದೆ. ತನಿಖಾಧಿಕಾರಿಗಳು ಚಾರ್ಜ್ಶೀಟ್ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದು, ಮುಂದಿನ ದಿನಗಳಲ್ಲಿ ಆರೋಪಿಗಳ ವಿರುದ್ಧ ಯಾವುದೇ ಹೊಸ ಸಾಕ್ಷ್ಯಾಧಾರಗಳು ದೊರೆತರೆ ಅಥವಾ ಇನ್ನಾವುದೇ ಸಂತ್ರಸ್ತರು ಮುಂದೆ ಬಂದು ದೂರು ನೀಡಿದರೆ, ಲಭ್ಯವಿರುವ ಸಾಕ್ಷ್ಯಗಳ ಆಧಾರದ ಮೇಲೆ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು (Additional Charge Sheet) ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಮುಂಗಡ ಜಾಮೀನು ನಿಯಮಗಳ ಉಲ್ಲಂಘನೆ: ಪೆನ್ಡ್ರೈವ್ ಸಾಕ್ಷ್ಯ ಸಲ್ಲಿಕೆ
ದೂರುದಾರರು ಮತ್ತು ಸಂತ್ರಸ್ತರಿಗೆ ಅಪರಿಚಿತ ವ್ಯಕ್ತಿಗಳಿಂದ ನಿರಂತರವಾಗಿ ಫೋನ್ ಕರೆಗಳು ಬರುತ್ತಿದ್ದು, ದೂರನ್ನು ಹಿಂಪಡೆಯುವಂತೆ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಈ ಆಡಿಯೋ ಸಂಭಾಷಣೆಯ ಸಂಪೂರ್ಣ ವಿವರಗಳನ್ನು ಒಳಗೊಂಡ ಪೆನ್ಡ್ರೈವ್ ಅನ್ನು ನ್ಯಾಯಾಲಯಕ್ಕೆ ಸಾಕ್ಷ್ಯವಾಗಿ ಒಪ್ಪಿಸಲಾಗಿದೆ. ಇದು ನ್ಯಾಯಾಲಯ ವಿಧಿಸಿದ್ದ ಮುಂಗಡ ಜಾಮೀನು (Anticipatory Bail) ಶರತ್ತುಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇದೇ ಕಾರಣಕ್ಕಾಗಿ ಆರೋಪಿಯ ಜಾಮೀನನ್ನು ರದ್ದುಗೊಳಿಸಬೇಕೆಂದು ಪ್ರಾಸಿಕ್ಯೂಷನ್ ಪರವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಬಸವರಾಜ್ ಎ ಎಂ. ವಿವರಿಸಿದ್ದಾರೆ.
Leave a comment