ಬೆಂಗಳೂರು: (ED) ಕರ್ನಾಟಕದ ಲೋಕೋಪಯೋಗಿ (PWD) ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರಿಗೆ ಸೇರಿದ 21ಕ್ಕೂ ಹೆಚ್ಚು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಬೆಂಗಳೂರು ವಲಯ ಕಚೇರಿಯ ಅಧಿಕಾರಿಗಳು ವ್ಯಾಪಕ ಶೋಧ ಕಾರ್ಯಚರಣೆ ನಡೆಸಿದ್ದಾರೆ.
ಸೆಪ್ಟೆಂಬರ್ 9 ಮತ್ತು 10 ರಂದು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ಈ ದಾಳಿಗಳನ್ನು ನಡೆಸಲಾಗಿದೆ. ಬೆಂಗಳೂರು, ಬೆಳಗಾವಿ, ಗೋಕಾಕ್ ಹಾಗೂ ಕೋಲ್ಕತ್ತಾದಲ್ಲಿ ಏಕಕಾಲಕ್ಕೆ ಪರಿಶೀಲನೆ ನಡೆಸಲಾಗಿದ್ದು, ಜಾರಕಿಹೊಳಿ ಕುಟುಂಬದವರ ಅಘೋಷಿತ ವಿದೇಶಿ ಹೂಡಿಕೆಗಳು, ಗಡಿಯಾಚೆಗಿನ ಉದ್ಯಮ ಸಂಪರ್ಕಗಳು ಮತ್ತು ಶಂಕಿತ ಹಣಕಾಸು ಅಕ್ರಮಗಳ ಕುರಿತು ತನಿಖೆ ಚಲಾಯಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ ಹಾಗೂ ಭಾವಮೈದುನ ವೈ.ಡಿ. ಮಂಜುನಾಥ್ ಅವರ ಆಸ್ತಿಪಾಸ್ತಿಗಳ ಮೇಲೆಯೂ ನಡೆದಿದೆ. ಇದಲ್ಲದೆ, ಸಚಿವರ ಆಪ್ತ ಸಹಾಯಕರಾದ (OSD) ಮಲಗೌಡ ಪಾಟೀಲ್, ರಾಜು ದರಗಶೆಟ್ಟಿ, ವಿಠ್ಠಲ ಪಾರಸನ್ನವರ್ ಮತ್ತು ಡಾ. ಗಿರೀಶ್ ಸೋನವಾಲ್ಕರ್ ಅವರ ಮನೆ ಮತ್ತು ಕಚೇರಿಗಳ ಮೇಲೆಯೂ ಇ.ಡಿ ದಾಳಿ ನಡೆಸಿದೆ.
ಲೋಕೋಪಯೋಗಿ ಇಲಾಖೆಯ ಟೆಂಡರ್ಗಳನ್ನು ಪಡೆಯಲು ಭಾರಿ ಲಂಚ ನೀಡಿ, ಆ ಹಣವನ್ನು ವಿದೇಶಿ ಆಸ್ತಿಗಳನ್ನು ಖರೀದಿಸಲು ಬಳಸಿದ್ದಾರೆನ್ನಲಾದ ‘ಮೆಸರ್ಸ್ ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೇಟ್ ಲಿಮಿಟೆಡ್’ (BVEPL) ಸಂಸ್ಥೆಯ ಅಧಿಕಾರಿಗಳ ಮೇಲೆಯೂ ದಾಳಿ ನಡೆಸಲಾಗಿದೆ.
ಇ.ಡಿ ನೀಡಿರುವ ಮಾಹಿತಿಯ ಪ್ರಕಾರ, ವಶಪಡಿಸಿಕೊಂಡ ದಾಖಲೆಗಳಿಂದ ಜಾರಕಿಹೊಳಿ ಸಂಬಂಧಿಕರು ಕಾಂಗೋದ ‘ಎಲ್ಡೊರಾಡೊ ಮೈನಿಂಗ್ ರಿಸೋರ್ಸಸ್’ ಮತ್ತು ಝಾಂಬಿಯಾದ ‘ನವ ಔರಂ ಮೈನಿಂಗ್ ಲಿಮಿಟೆಡ್’ ಸೇರಿದಂತೆ ಹಲವು ವಿದೇಶಿ ಸಂಸ್ಥೆಗಳಲ್ಲಿ ಪಾಲು ಹೊಂದಿರುವುದು ಬೆಳಕಿಗೆ ಬಂದಿದೆ.
ಕಾಂಗೋದ ಚಿನ್ನದ ಗಣಿಗಾರಿಕೆ ಕಂಪನಿಯಾದ ‘ಮ್ಯಾಗ್ನಿಟ್ಯೂಡ್ ಸ್ಟಾರ್ SARL’ ನಲ್ಲಿ ಸ್ವತಃ ಸತೀಶ್ ಜಾರಕಿಹೊಳಿ ಅವರು ಶೇ. 40 ರಷ್ಟು ಪಾಲು ಹೊಂದಿದ್ದಾರೆ ಎಂದು ಇ.ಡಿ ಅಧಿಕಾರಿಗಳು ಹೇಳಿದ್ದಾರೆ. ಆಫ್ರಿಕಾದ ಇತರ ಗಣಿಗಾರಿಕೆ ಉದ್ಯಮಗಳ ದಾಖಲೆಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಗೋಕಾಕ್, ಬೆಂಗಳೂರಿನ ಡಾಲರ್ಸ್ ಕಾಲೋನಿ ಮತ್ತು ಕ್ರೆಸೆಂಟ್ ರಸ್ತೆಯಲ್ಲಿರುವ ಜಾರಕಿಹೊಳಿ ಅವರ ನಿವಾಸಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ನಡೆಸಿದ ಶೋಧದ ವೇಳೆ 3.3 ಕೋಟಿ ರೂಪಾಯಿ ನಗದು ಹಾಗೂ 15 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿಯನ್ನು (ಅಮೆರಿಕನ್ ಡಾಲರ್ ಮತ್ತು ಯುರೋ ಸೇರಿದಂತೆ) ಇ.ಡಿ ಜಪ್ತಿ ಮಾಡಿದೆ. ಅನಧಿಕೃತ ಮಾರ್ಗಗಳ ಮೂಲಕ ಕಾಂಗೋದಲ್ಲಿ ಹೆಚ್ಚಿನ ಪ್ರಮಾಣದ ನಗದು ಹೂಡಿಕೆ ಮಾಡಿರುವ ಕುರಿತು ಸಾಕ್ಷ್ಯಾಧಾರಗಳು ಲಭ್ಯವಾಗಿವೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
BVEPL ನಂತಹ ಗುತ್ತಿಗೆದಾರರಿಂದ ಲಂಚ ಸಂಗ್ರಹಿಸಿರುವ ಕುರಿತು ಹಲವು ಮಹತ್ವದ ದಾಖಲೆಗಳು ಮತ್ತು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಹಣಕಾಸಿನ ವಹಿವಾಟುಗಳನ್ನು ಸತೀಶ್ ಜಾರಕಿಹೊಳಿ ಅವರ ಭಾವಮೈದುನ ವೈ.ಡಿ. ಮಂಜುನಾಥ್ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಇ.ಡಿ ತನಿಖೆ ಮುಂದುವರಿದಿದೆ.
Leave a comment