ಶರತ್ ಕೊಲ್ಲೂರಿಗೆ ಸ್ನೇಹಿತ ಗುರುರಾಜ್ ಜೊತೆ ಕಾರಿನಲ್ಲಿ ಬಂದಿದ್ದ ಅರಶಿನಗುಂಡಿ ಜಲಪಾತಕ್ಕೆ ತೆರಳಿದ್ದರು. ಬಂಡೆಕಲ್ಲಿನ ಮೇಲೆ ನಿಂತು ಜಲಪಾತದಿಂದ ನೀರು ಧುಮ್ಮಿಕ್ಕುವ ದೃಶ್ಯ ನೋಡುತ್ತಿದ್ದ ವೇಳೆ ಅವಘಡ ಸಂಭವಿಸಿದೆ.
ತಕ್ಷಣ ಶರತ್ ಸ್ನೇಹಿತ ಗುರುರಾಜ್ ಸಮೀಪದ ಅರಣ್ಯ ಇಲಾಖೆ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಪೊಲೀಸ್ ಸ್ಥಳೀಯರ ಸಹಕಾರದಿಂದ ಪತ್ತೆ ಕಾರ್ಯ ನಡೆಸಿದ್ದು,ಶರತ್ ಪತ್ತೆಯಾಗಲಿಲ್ಲ. ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಸಿಬ್ಬಂದಿಗಳು, ಕೊಲ್ಲೂರು ಪೊಲೀಸರು ಸೋಮವಾರ ಬೆಳಗ್ಗೆನಿಂದಲೂ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಈಜುಪಟು ಈಶ್ವರ್ ಮಲ್ಪೆ ಮತ್ತವರ ತಂಡವೂ ಆಗಮಿಸಿದೆ.
ಶರತ್ ಸ್ವ ಉದ್ಯೋಗಿಯಾಗಿದ್ದು, ಸ್ನೇಹಿತ ಗುರುರಾಜ್ ಐಟಿ ಕಂಪೆನಿಯೊಂದರಲ್ಲಿ ಉದ್ಯೋಗಿ ಎನ್ನಲಾಗಿದೆ. ಕಳೆದ ಕೆಲ ದಿನಗಳಿಂದ ಮಳೆ ಜೋರಾಗಿ ಸುರಿಯುತ್ತಿದ್ದರಿಂದ ಅರಶಿನಗುಂಡಿ ಜಲಪಾತದಲ್ಲಿ ಪ್ರವಾಸಿಗರಿಗೆ ನಿಷೇಧ ಹೇರಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿಗಳು ಪ್ರವೇಶ ದ್ವಾರದಲ್ಲಿರುವುದನ್ನು ಗಮನಿಸಿದ ಶರತ್ ಹಾಗೂ ಸ್ನೇಹಿತ ಬೇರೊಂದು ದಾರಿಯಲ್ಲಿ ಜಲಪಾತಕ್ಕೆ ತೆರಳಿದ್ದರು ಎನ್ನಲಾಗಿದೆ.
ಶರತ್ ಸ್ನೇಹಿತ ಗುರುರಾಜ್ ಜಲಪಾತದ ದೃಶ್ಯಗಳನ್ನು ತನ್ನ ಮೊಬೈಲ್ನಲ್ಲಿಸೆರೆ ಹಿಡಿಯುತ್ತಿರುವ ವೇಳೆಯಲ್ಲೇ ಶರತ್ ಕಾಲು ಜಾರಿ ಬಿದ್ದಿದ್ದು, ಆ ದೃಶ್ಯವೂ ಮೊಬೈಲ್ ನಲ್ಲಿ ಸೆರೆಯಾಗಿದೆ.ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
