ದಾವಣಗೆರೆ:(PDS RICE) ಚನ್ನಗಿರಿ: ತಾಲ್ಲೂಕಿನ ಮೇಲಿನ ಬಸ್ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ-369ರಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು, ಚಾಲಕನನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಪಡಿತರ ಅಕ್ಕಿ ಹಾಗೂ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಸದರಿ ಲಾರಿ ಹಾಗೂ ಅಕ್ರಮ ಪಡಿತರ ಅಕ್ಕಿ ಹೊನ್ನಾಳಿಯ ಸೋಮಣ್ಣ (ಸೋಮಶೇಖರ) ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ.
ಘಟನೆಯ ವಿವರ:
ದಾವಣಗೆರೆ ಎಎನ್ಟಿಎಫ್ (ANTF) ಘಟಕದ ಪೊಲೀಸ್ ಸಬ್ಇನ್ಸ್ಪೆಕ್ಟರ್ ಶ್ರೀ ಸಾಗರ್ ಅತ್ತರ್ ವಾಲ್ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ, ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಆದೇಶದಂತೆ ಸಿಬ್ಬಂದಿಗಳೊಂದಿಗೆ ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಆಗಸ್ಟ್ 21ರ ರಾತ್ರಿ 11:50ರ ಸುಮಾರಿಗೆ ಚನ್ನಗಿರಿ ನಗರದ ಮೇಲಿನ ಬಸ್ ನಿಲ್ದಾಣದ ಬಳಿ ಬರುತಿದ್ದ ಟಾಟಾ ಈಚರ್ ಲಾರಿಯನ್ನು ತಡೆದು ಪರಿಶೀಲಿಸಿದಾಗ ಅಕ್ರಮ ಪಡಿತರ ಅಕ್ಕಿ ಸಾಗಾಣಿಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಆರೋಪಿ ಮತ್ತು ಜಪ್ತಿಯಾದ ಸ್ವತ್ತುಗಳ ವಿವರ:
ಆರೋಪಿಯ ಹೆಸರು: ಫೈರೋಜ್ ಅಹಮದ್ (25 ವರ್ಷ), ವೃತ್ತಿಯಲ್ಲಿ ಲಾರಿ ಚಾಲಕ, ವಾಸ: ಗೊಲ್ಲರಹಳ್ಳಿ ಗ್ರಾಮ, ಹೊನ್ನಾಳಿ ತಾಲ್ಲೂಕು. ಹಾಗೂ ಸೋಮಣ್ಣ..

ವಶಪಡಿಸಿಕೊಂಡ ಸ್ವತ್ತುಗಳು: 10,00,000 ರೂ. ಮೌಲ್ಯದ ಟಾಟಾ ಈಚರ್ ಲಾರಿ (ಸಂಖ್ಯೆ: KA-17-D-8172) ಹಾಗೂ ಲಾರಿಯಲ್ಲಿದ್ದ 1,50,000 ರೂ. ಮೌಲ್ಯದ ಪಡಿತರ ಅಕ್ಕಿ. ಒಟ್ಟು ಜಪ್ತಿಯಾದ ಮೌಲ್ಯ: ಸುಮಾರು 11,50,000 ರೂಪಾಯಿ.
ಈ ಕುರಿತು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಅತ್ಯಗತ್ಯ ವಸ್ತುಗಳ ಕಾಯ್ದೆ (Essential Commodities Act, 1955) ಸೆಕ್ಷನ್ 3 ಮತ್ತು 7ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ (ಅಪರಾಧ ಸಂಖ್ಯೆ: 497/2026) ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 29 ಕ್ಕೂ ಹೆಚ್ಚು ಜನರು ಅಕ್ರಮ ಪಡಿತರ ಅಕ್ಕಿ, ರಾಗಿ, ಗೋಧಿ, ಸಂಗ್ರಹ, ಸಾಗಾಣಿಕೆ ಮಾಡುತ್ತಿರುವ ಮಾಹಿತಿಯನ್ನು ಆಹಾರ ಇಲಾಖೆಯ ಕಾರ್ಯದರ್ಶಿ ಬಹಿರಂಗ ಪಡಿಸಿದ್ದಾರೆ, ಆದರೂ ಆಹಾರ ಇಲಾಖೆ ಯಾವುದೇ ಕ್ರಮ ಕೈಗೊಳ್ಳಲು ವಿಫಲವಾದ ಬಗ್ಗೆ ಹಲವು ಅನುಮಾನ ವ್ಯಕ್ತಪಡಿಸುತ್ತಾರೆ ಸಾರ್ವಜನಿಕರು..
Leave a comment