ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿ ನಾಯಿ ದಾಳಿ- ಗಂಭೀರವಾಗಿ ಗಾಯಗೊಂಡ ಇಬ್ಬರು ಮಕ್ಕಳು
ಶಿವಮೊಗ್ಗ: ಇತ್ತಿಚೀನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಮಕ್ಕಳು ಮತ್ತು ಸಾರ್ವಜನಿಕರ ಮೇಲೆ ಬೀದಿ ನಾಯಿಗಳು ದಾಳಿ ನಡೆಸುತ್ತಿರುವ ಪ್ರಕರಣಗಳು ವರದಿಯಾಗುತ್ತಲ್ಲೇ ಇವೆ. ಈ ಬೀದಿ ನಾಯಿಗಳು ನೀಡುತ್ತಿರುವ ಉಪಟಳಕ್ಕೆ ಮಕ್ಕಳು ಮತ್ತು ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ. ಸ್ಥಳೀಯ ಆಡಳಿತಗಳು ಬೀದಿ ನಾಯಿಗಳ ಹಾವಳಿ ನಿಯಂತ್ರಣ ಕ್ಕೆ ಯಾವುದೇ ಕ್ರಮ ಕೈಗೊಳ್ಳುವ ಕೆಲಸ ಸಹ ಮಾಡುತ್ತಿಲ್ಲ.
ಬೀದಿ ನಾಯಿಗಳ ದಾಳಿಯಿಂದ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಸಾಗರ ನಗರಸಭೆ ವ್ಯಾಪ್ತಿಯ ಗಾಂಧಿನಗರದ ಬಿಲ್ಲಮಕ್ಕಿ ಏರಿಯಾದಲ್ಲಿ ಮನೆಯ ಮುಂದೆ ಕುಳಿತಿದ್ದ ಪುಟಾಣಿ ಮಕ್ಕಳ ಮೇಲೆ ಬೀದಿ ನಾಯಿ ದಾಳಿ ಮಾಡಿ ಗಾಯಗೊಳಿಸಿವೆ.
ಧನುಷ್ ಮತ್ತು ರಿಶೇಲ್ ಎಂಬ ಮಕ್ಕಳು ನಾಯಿಯ ದಾಳಿಯಿಂದ ಗಾಯಗೊಂಡಿದ್ದ ಸಾಗರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಯೆಸೆಗೆ ದಾಖಲಿಸಲಾಗಿದೆ.
ಬೀದಿನಾಯಿಗಳ ಹಾವಳಿ ಎಷ್ಟರ ಮಟ್ಟಿಗಿದೆ ಎನ್ನುವುದಕ್ಕೆ ನಾಯಿ ಕಡಿತದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ನೋವು ನಿಜ ಸಾಕ್ಷಿಯಾಗಿದೆ.
ನಾಯಿಗಳ ಹಾವಳಿಗೆ ಸ್ಥಳೀಯ ಸಂಸ್ಥೆಗಳು ಕಡಿವಾಣ ಹಾಕದಿದ್ದಲ್ಲಿ ಇಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಭಯ ಪಡುವಂತ ಸ್ಥಿತಿ ಬಂದರೆ ಅಚ್ಚರಿ ಪಡುವಂತಿಲ್ಲ.
ಸಾಗರ ನಗರಸಭೆ ವ್ಯಾಪ್ತಿಯ ಮೀನು ಮಾರುಕಟ್ಟೆ, ಗಾಂಧಿನಗರ, ರಾಮನಗರ, ಎಸ್ಎನ್ ನಗರ ಹಾಗೂ ಅನೇಕ ಏರಿಯಾಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಸ್ಥಳೀಯ ನಗರ ಆಡಳಿತ ಬೀದಿ ನಾಯಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳಬೇಕು, ಅದರೆ ಆ ಕೆಲಸ ಆಗುತ್ತಿಲ್ಲ.
ಈ ಪರಿಣಾಮ ಬೀದಿ ನಾಯಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇವೆ.
ನಗರಸಭೆ ವ್ಯಾಪ್ತಿಯ ಗಾಂಧಿನಗರದ ಬಿಲ್ಲಮಕ್ಕಿ ಪುಟಾಣಿ ಬಾಲಕ ಮತ್ತು ಬಾಲಕಿಗೆ ಬೀದಿ ನಾಯಿ ಕಚ್ಚಿರುವ ಪರಿ ನಿಜಕ್ಕೂ ಸಾಗರ ಪಟ್ಟಣವನ್ನು ಬೆಚ್ಚಿ ಬೀಳಿಸಿದೆ. ಪುಟಾಣಿಗಳ ಕೆನ್ನೆ, ಕೈ ಮತ್ತು ಕಾಲಿನ ಮೇಲೆ ನಾಯಿ ಕಚ್ಚಿದ್ದು, ಗಂಬೀರ ಸ್ವರೂಪದ ಗಾಯಗಳಾಗಿವೆ.
ತಮ್ಮ ಪಾಡಿಗೆ ಆಟವಾಡುತ್ತಿದ್ದ
ಆ ಪುಟಾಣಿ ಮಕ್ಕಳು ಅನುಭವಿಸುತ್ತಿರುವ ಯಾತನೆ, ಮಕ್ಕಳ ಕುಟುಂಬಕ್ಕೆ ಆಗಿರುವ ನೋವುಗಳಿಗೆ ಯಾರು ಹೊಣೆ.
ಬೀದಿ ನಾಯಿಗಳನ್ನು ನಿಯಂತ್ರಿಸಬೇಕು ಎನ್ನುವ ಕೂಗು ಎಲ್ಲೆಡೆ ಕೇಳಿ ಬಂದಿದೆ. ಈ ವಿಚಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸೂಕ್ತವಾದ ಕ್ರಮ ಕೈಗೊಳ್ಳಬೇಕಿದೆ.
ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಿದೆ.