ಸರ್ಕಾರಿ ಬಸ್ ಫುಲ್ ರಶ್.! ಆಟೋ, ಖಾಸಗಿ ಬಸ್ಗಳ ಚಾಲಕರ ಮುಖದಲ್ಲಿ ಆತಂಕ
![ಸರ್ಕಾರಿ ಬಸ್ ಫುಲ್ ರಶ್.! ಆಟೋ, ಖಾಸಗಿ ಬಸ್ಗಳ ಚಾಲಕರ ಮುಖದಲ್ಲಿ ಆತಂಕ](https://garudavoice.com/wp-content/uploads/2023/06/ksrtc-7-1.jpg)
ದಾವಣಗೆರೆ: ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಗೆ ಜಾರಿ ತಂದಿದ್ದೇ ತಡ, ಮರು ದಿನವೇ ಎಲ್ಲಾ ಕೆಎಸ್ಸಾರ್ಟಿಸಿ ಬಸ್ಗಳು ತುಂಬಿ ತುಳುಕಲಾರಂಭಿಸಿವೆ.
ಸೋಮವಾರ ದಾವಣಗೆರೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳಾ ಮಣಿಗಳ ಜಾತ್ರೆಯೇ ನೆಡೆದಿತ್ತು. ವಿದ್ಯಾರ್ಥಿನಿಯರು, ವೃದ್ಧೆಯರು ಸರ್ಕಾರಿ ಬಸ್ ಹತ್ತಲು ಮುಗಿ ಬಿದ್ದಿದ್ದರು.
ಹಲವಾರು ಬಸ್ಸುಗಳು ತುಂಬಿಕೊಂಡು ಹೋದವು. ಪುರುಷರಿಗೆ ಶೇ.50ರಷ್ಟು ಆಸನಗಳನ್ನು ಕಾಯ್ದಿರಿಸಬೇಕೆಂಬ ನಿಯಮ ಇದೆಯಾದರೂ, ಬಸ್ ಹತ್ತಲೂ ಸಹ ಪುರುಷರಿಗೆ ಜಾಗ ಇರಲಿಲ್ಲ. ಮಹಿಳೆಯರ ಸಂಚಾರ ಶಕ್ತಿಗೆ ಸ್ವತಃ ಬಸ್ ಚಾಲಕರು, ನಿರ್ವಾಹಕರು ಕಕ್ಕಾಬಿಕ್ಕಿಯಾಗಿದ್ದರು.
ಇತ್ತ ಸರ್ಕಾರಿ ಬಸ್ಗಳು ಭರ್ತಿಯಾಗಿದ್ದರೆ, ಪಕ್ಕದಲ್ಲಿಯೇ ಇದ್ದ ಖಾಸಗಿ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಖಾಸಗಿ ಬಸ್ಗಳು ಖಾಲಿ ಹೊಡೆಯುತ್ತಿದ್ದವು. ಬಸ್ಸಿನ ಚಾಲಕ ನಿರ್ವಾಹಕರ ಮುಖದಲ್ಲಿ ಆತಂಕದ ಕಾರ್ಮೋಡ ಕವಿದಿತ್ತು.
ನಗರದಲ್ಲಿ ಸಂಚರಿಸುತ್ತಿದ್ದ ಆಟೋ ಓಡಾಟದಲ್ಲೂ ಮಹಿಳೆಯರ ಸಂಖ್ಯೆ ಕಡಿಮೆಯಾಗಿತ್ತು. ಬಹುತೇಕರು ಉಚಿತ ಎಂಬ ಕಾರಣಕ್ಕೆ ಬಸ್ಗಳನ್ನೇ ಅವಲಂಬಿಸಿದ್ದರು. ಆಟೋ ಚಾಲಕರೂ ಸಹ ಚಿಂತಾಕ್ರಾಂತರಾಗಿದ್ದರು