ತೊದಲ ನುಡಿಯ ಕಂದಮ್ಮಗಳ ಅಕ್ಷರಾಭ್ಯಾಸ

ತೊದಲ ನುಡಿಯ ಕಂದಮ್ಜಗಳ ಅಕ್ಷರಾಭ್ಯಾಸ
ದಾವಣಗೆರೆ : ತೊದಲ ನುಡಿಯಲ್ಲಿ ಕೈ ಹಿಡಿದು ಅಕ್ಕಿಯಲ್ಲಿ ಅಕ್ಷರ ಬರೆಸುವ ತಾಯಿ, ಸ್ಲೇಟ್‌ನಲ್ಲಿ ಅಮ್ಮ ಎಂಬ ಎರಡು ಅಕ್ಷರ ಬರೆದಾಗ ಅದನ್ನು ನೋಡಿ ಸಂತಸ ಪಡುವ ತಂದೆ, ಸರಸ್ವತಿ ದೇವಿ ನೆನೆಸಿಕೊಂಡು ಮೊದಲ ಪದ ಬರೆದ ಮಗುವಿಗೆ ಇಬ್ಬರೂ ಸೇರಿ ನೀಡುವ ಮುತ್ತು, ಮೊದಲ ಅಕ್ಷರದ ನೆನೆಪಿಗಾಗಿ ಮುದ್ದಾದ ಚಿಣ್ಣರ ಜೊತೆಗೆ ಒಂದು ಸೆಲ್ಫಿ.

ತೊದಲ ನುಡಿಯ ಕಂದಮ್ಮಗಳ ಅಕ್ಷರಭ್ಯಾಸ

ಇದು, ದಾವಣಗೆರೆ ನಗರದ ಸೆಂಟ್ ಜಾನ್ಸ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅಕ್ಷರಾಭ್ಯಾಸದ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯ.. ಬೆಳ್ಳಂಬೆಳ್ಳಗ್ಗೆ ತನ್ನ ಮಕ್ಕಳೊಂದಿಗೆ ಸಾಂಪ್ರಾದಾಯಿಕ ಉಡುಪಿನಲ್ಲಿ ಶಾಲೆಗೆ ಬಂದ ಪೋಷಕರು ತಟ್ಟೆಯಲ್ಲಿ ತಂದಿದ್ದ ಅಕ್ಕಿಯಲ್ಲಿ ಅಕ್ಷರಾಭ್ಯಾಸ ಮಾಡಿಸಿದರು. ತೊದಲು ನುಡಿಯುತ್ತಿದ್ದ ಮಕ್ಕಳು ಅಕ್ಷರಗಳ ಉಚ್ಛಾರಣೆ ಮಾಡುವ ವೇಳೆ ಪೋಷಕರ ಸಂತಸಕ್ಕೆ ಪಾರವೇ ಇರಲಿಲ್ಲ. ಇನ್ನು ಅರಿಶಿನದ ಕೊಂಬನ್ನು ಹಿಡಿದು ಅಕ್ಷರಾಭ್ಯಾಸವನ್ನು ಆರಂಭಿಸಿದ ಅಕ್ಕರೆಯ ಮಕ್ಕಳು ಪೋಷಕರಿಗೆ ಸಾಥ್ ನೀಡಿದರು.

ತೊದಲ ನುಡಿಯ ಕಂದಮ್ಮಗಳ ಅಕ್ಷರಾಭ್ಯಾಸ
                                                ಭಕ್ತಿಭಾವದಲ್ಲಿ ಮಿಂದ ಪೋಷಕರು

ಮೊದಲು ಹಿಂದೂ ಸಂಪ್ರದಾಯದಂತೆ ಶಾಸಬದ್ದವಾಗಿ ಪುರೋಹಿತರ ಸಮ್ಮುಖದಲ್ಲಿ ಸರಸ್ವತಿ ಪೂಜೆ ಮಾಡಲಾಯಿತು. ನಂತರ ಪುರೋಹಿತರು ಹೇಳಿದಂತೆ ಪೋಷಕರು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು. ಈ ಅಕ್ಷರಾಭ್ಯಾಸದಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮಕ್ಕಳು ಭಾಗವಹಿಸುವ ಮೂಲಕ ಭಾವೈಕ್ಯತೆ ಸಾರಿದರು.

ಎಲ್‌ಕೆಜಿ, ಯುಕೆಜಿ ಚಿಣ್ಣರಿಗಾಗಿ ಈ ಅಕ್ಷರಾಭ್ಯಾಸ ಹಮ್ಮಿಕೊಳ್ಳಲಾಗಿತ್ತು. ಅದಕ್ಕಾಗಿ ಜ್ಞಾನ ದೇವತೆ ಆಶೀರ್ವಾದದೊಂದಿಗೆ ವಿದ್ಯೆಯ ಕಲಿಕೆಯನ್ನು ಆರಂಭಿಸುವ ಧಾರ್ಮಿಕ ಆಚರಣೆ ಹಮ್ಮಿಕೊಳ್ಳಲಾಗಿತ್ತು. ಸಾಮಾನ್ಯವಾಗಿ ಹಿಂದೂಗಳು ಶೃಂಗೇರಿ ಶಾರದಾಂಬೆಯ ಸನ್ನಿಧಿಯಲ್ಲಿ ತಮ್ಮ ಮಕ್ಕಳ ಅಕ್ಷರಾಭ್ಯಾಸವನ್ನು ಮಾಡಿಸುತ್ತಾರೆ, ಆದರೆ ಈ ಶಾಲೆಯಲ್ಲಿ ಪ್ರತಿಯೊಂದು ಮಗುವಿನ ಅಕ್ಷರಾಭ್ಯಾಸವನ್ನು ಶಾಸ ಬದ್ಧವಾಗಿ ಸಾಮೂಹಿಕವಾಗಿ ಮಾಡಲಾಗಿತ್ತು. ಮಕ್ಕಳ ಜೊತೆ ಕುಳಿತ ಪೋಷಕರು ಸ್ಲೇಟ್ ನಲ್ಲಿ ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು, ಮೊದಲ ಅಕ್ಷರವಾಗಿ ಮಕ್ಕಳು ಕನ್ನಡ ವರ್ಣಮಾಲೆಯ ಅಆಇಈ ಅಕ್ಷರವನ್ನು ಶಾಸೋಕ್ತವಾಗಿ ಸ್ಲೇಟ್ ನಲ್ಲಿ ಬರೆದರು.

ತೊದಲ ನುಡಿಯ ಕಂದಮ್ಮಗಳ ಅಕ್ಷರಾಭ್ಯಾಸ
                                                                ಶಾರದಾ ಪೂಜೆ 

ಪೋಷಕರು ಸ್ಲೇಟ್, ಸೀಮೆಸುಣ್ಣ, ಬಿಳಿ ಹೂವುಗಳು, ಐದು ತರಹದ ಹಣ್ಣುಗಳನ್ನು ತೆಗೆದುಕೊಂಡು ಅಕ್ಷತೆ ರೆಡಿ ಇಟ್ಟುಕೊಂಡಿದ್ದರು, ಮೊದಲು ಗಣಪತಿ ಪೂಜೆ ನಡೆಯಿತು. ನಂತರ ಸರಸ್ವತಿ ಪೂಜೆ ನಡೆಯಿತು. ತಂದೆಯು ಮಗುವಿನ ಕೈ ಹಿಡಿದು ಸ್ಲೇಟ್ ಮೇಲೆ ಓಂ, ಸ್ವಸ್ತಿಕ್, ಅಕ್ಷರಗಳನ್ನು ಬರೆಸಿದರು. ನಂತರ ತಟ್ಟೆಯ ಮೇಲೆ ಅಕ್ಕಿ ಹರಡಿ ಅದರ ಮೇಲೆ ಅಕ್ಷರಗಳನ್ನು ಬರೆದರು.

ತೊದಲ ನುಡಿಯ ಕಂದಮ್ಮಗಳ ಅಕ್ಷರಾಭ್ಯಾಸ
                        ಶಾರದೆಯ ವೇಷಧಾರಿಯಾಗಿ ಬಾಲಕಿ

ಪ್ರಕಾಶ್ ಶಾಸ್ತ್ರೀಗಳು ಮಾತನಾಡಿ, ಶೃಂಗೇರಿ ಶಾರದೆ ನೆನೆಸಿಕೊಂಡು ಶಾಸ್ತ್ರೋಕ್ತವಾಗಿ ಮಕ್ಕಳಿಗೆ ಅಕ್ಷಾರಭ್ಯಾಸ ಮಾಡಲಾಗಿದೆ. ನಿಮ್ಮ ಮಕ್ಕಳಿಗೆ ಒಂಚೂರು ಕಷ್ಟದ ಜತೆ ಒಳ್ಳೆ ಗುರಿ ಮುಟ್ಟಲಿ, ಮಕ್ಕಳು ಮಕ್ಕಳಾಗಿಯೇ ಬೆಳೆಯಲಿ ಎಂದರು. ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ ನಾಳೆ ಪಲ ಕೊಡುತ್ತವೆ. ಅಕ್ಷರ ಎಂದರೆ ನಾಶವಿಲ್ಲದ್ದು ಎಂಬಂತೆ ಸಂಸ್ಥೆಯ ನರ್ಸರಿ ವಿಭಾಗದ ವಿದ್ಯಾರ್ಥಿಗಳಿಗಾಗಿ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವು ಭಾರತೀಯ ಸಂಸ್ಕೃತಿಯನ್ನು ಶ್ರೀಮಂತಗೊಳಿಸುವಂತಿದ್ದು ಎಂದರು.

ತೊದಲ ನುಡಿಯ ಕಂದಮ್ಮಗಳ ಅಕ್ಷರಾಭ್ಯಾಸ
                                                                ಶಿಕ್ಷಕ ವೃಂದ

ಈ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ಅನಿಲ್‌ಕುಮಾರ್, ಶಾಲೆ ಕಾರ್ಯದರ್ಶಿ ಟಿ.ಎಂ.ಉಮಾಪತಯ್ಯ ಮತ್ತು ವಿದ್ಯಾಸಂಸ್ಥೆಯ ಶಾಲಾ ಖಜಾಂಚಿ ಪ್ರವೀಣ್ ಹುಲ್ಲುಮನೆ, ಸಂಸ್ಥೆಯ ಪ್ರಾಂಶುಪಾಲ ಸೆಯ್ಯದ್ ಆರ್.ಆರ್, ಟಿ. ಪ್ರೀತಾ , ಉಪ ಪ್ರಾಂಶುಪಾಲೆ ನೇತ್ರಾವತಿ ಎಸ್.ಎಮ್, ಬೋಧಕ ಹಾಗೂ ಬೋಧಕೇತರ ವರ್ಗ ವಿದ್ಯಾರ್ಥಿಗಳು ಮತ್ತು ಪೋಷಕ ವೃಂದದವರು ಸಹ ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮ ನೆರವೇರಿಸಿದರು. ಅಂತಿಮವಾಗಿ ಪೋಷಕರು ತಮ್ಮ ಮಕ್ಕಳೊಂದಿಗೆ ಶಾಲಾ ಆಡಳಿತ ಮಂಡಳಿ ಜತೆಗೆ ಪೋಟೋ ಶೂಟ್ ಮಾಡಿ ಮನೆಗೆ ಹೊರಟರು.

Leave a Reply

Your email address will not be published. Required fields are marked *

error: Content is protected !!