ದಾವಣಗೆರೆ: (Sand) ನಗರದಲ್ಲಿ ಅಕ್ರಮ ಮರಳು ದಂಧೆ ಮತ್ತೆ ಹೆಡೆ ಎತ್ತುತ್ತಿದೆಯೇ ಎಂಬ ಅನುಮಾನ ಮೂಡಿಸುವಂತೆ, ವಿದ್ಯಾನಗರ ಪೊಲೀಸರು ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿ ಭಾರೀ ಪ್ರಮಾಣದ ಮರಳನ್ನು ತುಂಬಿದ್ದ ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.
*ಘಟನೆಯ ವಿವರ:*
ಕಳೆದ ಏಪ್ರಿಲ್ 27ರ ಸೋಮವಾರ ಮಧ್ಯರಾತ್ರಿ ಸುಮಾರು 12:10ರ ಸಮಯದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಸಿಬ್ಬಂದಿ ರಿಂಗ್ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಡಿಸಿ ಕಚೇರಿ ಕಡೆಯಿಂದ ಅತಿ ವೇಗವಾಗಿ ಬಂದ ಟಿಪ್ಪರ್ ಲಾರಿಯನ್ನು (ನಂಬರ್: HR 69-C-1500) ಅನುಮಾನದ ಮೇಲೆ ಬೆನ್ನಟ್ಟಿದ ಪೊಲೀಸರು ನವೋದಯ ಶಾಲೆಯ ಶುದ್ಧ ನೀರಿನ ಘಟಕದ ಬಳಿ ತಡೆದು ತಪಾಸಣೆ ನಡೆಸಿದ್ದಾರೆ.
*ಪರವಾನಗಿ ಇಲ್ಲದ ಸಾಗಾಟ:*
ಲಾರಿಯನ್ನು ಪರಿಶೀಲಿಸಿದಾಗ ಅದರಲ್ಲಿ ಅಂದಾಜು 10 ಟನ್ ಮರಳು ಪತ್ತೆಯಾಗಿದೆ. ವಾಹನ ಚಾಲಕ ಸೈಯದ್ ದಾದಾಪೀರ್ @ ಚಾಂದ್ ಎಂಬಾತನನ್ನು ವಿಚಾರಿಸಿದಾಗ, ಈ ಮರಳನ್ನು ಹೊನ್ನಾಳಿ ತಾಲೂಕಿನ ಚಿಕ್ಕ ಬಾಸೂರು ಗ್ರಾಮದ ಹಳ್ಳದಿಂದ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಕಳ್ಳತನದಿಂದ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ನಗರಕ್ಕೆ ಮರಳನ್ನು ತರಲಾಗುತ್ತಿತ್ತು ಎಂದು ಆರೋಪಿತನು ಒಪ್ಪಿಕೊಂಡಿದ್ದಾನೆ.
*ಪೊಲೀಸ್ ಕ್ರಮ:*
ಅಂದಾಜು 10 ಲಕ್ಷ ರೂಪಾಯಿ ಮೌಲ್ಯದ ಟಿಪ್ಪರ್ ಲಾರಿ ಹಾಗೂ 20 ಸಾವಿರ ರೂಪಾಯಿ ಮೌಲ್ಯದ ಮರಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಸೈಯದ್ ದಾದಾಪೀರ್ ವಿರುದ್ಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ *BNS ಕಲಂ 303(2)* ರಡಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ನಗರದ ಹೊರವಲಯದ ರಿಂಗ್ ರಸ್ತೆಗಳು ಅಕ್ರಮ ಚಟುವಟಿಕೆಗಳ ಹಾದಿಯಾಗುತ್ತಿವೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ.
ಮೂಲಗಳಿಂದ ಬಂದ ಮಾಹಿತಿ ಪ್ರಕಾರ ಆರೋಪಿ ಚಾಂದ್ ಎಂಬುವವರನ್ನು ಬಂಧಿಸಲಾಗಿದ್ದು, ನಂತರ ನ್ಯಾಯಾಲಯದ ಆದೇಶದ ಮೇರೆಗೆ ಜಾಮೀನು ಪಡೆದಿದ್ದಾರೆ ಎನ್ನಲಾಗಿದೆ, ಅಲ್ಲದೇ ಈ ವ್ಯಕ್ತಿ ಅಕ್ರಮ ಮರಳು ಸಾಗಾಟದ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
Leave a comment