ದಾವಣಗೆರೆ:(DCM) ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಲಿಂಗಾಯತ ಸಮುದಾಯದ ಬೆಂಬಲ ಪ್ರಮುಖ ಕಾರಣವಾಗಿದ್ದು, ಮುಂಬರುವ ದಿನಗಳಲ್ಲಿ ಸಮುದಾಯದ ನಾಯಕ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಉದ್ಯಮಿ ಎನ್. ಬಕ್ಕೇಶ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಲ್ಪಸಂಖ್ಯಾತರು, ಕುರುಬರು ಹಾಗೂ ಹಿಂದುಳಿದ ವರ್ಗಗಳು ಮೊದಲಿನಿಂದಲೂ ಕಾಂಗ್ರೆಸ್ನ ಸಾಂಪ್ರದಾಯಿಕ ಮತದಾರರಾಗಿದ್ದಾರೆ. ಹಿಂದೆ ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲ್ ಅವರ ಕಾಲದಲ್ಲಿ ಲಿಂಗಾಯತ ಮತದಾರರು ಕಾಂಗ್ರೆಸ್ಗೆ ದೊಡ್ಡ ಮಟ್ಟದ ಶಕ್ತಿ ನೀಡುತ್ತಿದ್ದರು. ಮಧ್ಯಂತರದಲ್ಲಿ ಸಮುದಾಯವು ಬಿಜೆಪಿಯತ್ತ ಒಲವು ತೋರಿತ್ತಾದರೂ, ಅಲ್ಲಿನ ದುರಾಡಳಿತದಿಂದ ಬೇಸತ್ತು 2023ರ ವಿಧಾನಸಭಾ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಪುನಃ ಕಾಂಗ್ರೆಸ್ ಕೈ ಹಿಡಿದಿದ್ದಾರೆ ಎಂದು ಅಭಿಪ್ರಾಯಿಸಿದ್ದಾರೆ.
ಶಾಮನೂರು ಶಿವಶಂಕರಪ್ಪ, ಈಶ್ವರ್ ಖಂಡ್ರೆ ಹಾಗೂ ಎಂ.ಬಿ. ಪಾಟೀಲ್ ಅಂತಹ ನಾಯಕರು ಪಕ್ಷದಲ್ಲಿದ್ದ ಕಾರಣ ಸಮುದಾಯವು ಕಾಂಗ್ರೆಸ್ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ದಾವಣಗೆರೆಯಲ್ಲಿಯೂ ಸಹ ಯಜಮಾನ್ ಮೋತಿ ವೀರಣ್ಣನವರ ಕಾಲದಿಂದಲೂ ಇಂದಿನ ಉಪ ಚುನಾವಣೆಯವರೆಗೂ ಲಿಂಗಾಯತ ಮತದಾರರು ಪಕ್ಷದ ಜೊತೆ ನಿಂತಿದ್ದಾರೆ ಎಂದಿದ್ದಾರೆ.
ದೂರದೃಷ್ಟಿಯುಳ್ಳ ಹಾಗೂ ಅಜಾತಶತ್ರುವಾಗಿರುವ ಎಸ್.ಎಸ್. ಮಲ್ಲಿಕಾರ್ಜುನ ಅವರು ಬಡವರ ಬಗ್ಗೆ ಕಳಕಳಿ ಹೊಂದಿರುವ ಗಟ್ಟಿ ನಾಯಕರಾಗಿದ್ದಾರೆ. ಜಾತ್ಯತೀತವಾಗಿ ಎಲ್ಲ ಸಮಾಜದವರನ್ನು ಗೌರವಿಸುವ ಅವರಿಗೆ ಮುಂಬರುವ ದಿನಗಳಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಸರ್ಕಾರ ಸಮುದಾಯವನ್ನು ಗೌರವಿಸಬೇಕು ಎಂದು ಬಕ್ಕೇಶ್ ಅವರು ಮನವಿ ಮಾಡಿದ್ದಾರೆ.
Leave a comment