ದಾವಣಗೆರೆ : ಅನ್ಯಕೋಮಿನ ಯುವಕರ ಜೊತೆ ಚಿತ್ರಮಂದಿರಕ್ಕೆ ಬಂದಿದ್ದ ದಲಿತ ಯುವತಿ ಮೇಲೆ ನೈತಿಕ ಪೊಲೀಸ್ ಗಿರಿ ಮಾಡಿದ್ದ ಇಬ್ಬರು ಯುವಕರನ್ನು ಕೆಟಿಜೆ ನಗರ ಪೊಲೀಸರು ಬಂಧಿಸಿದ್ದಾರೆ ಎಂದು ದಾವಣಗೆರೆ ಎಸ್ಪಿ ಡಾ.ಅರುಣ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ದಾವಣಗೆರೆಯ ಗೀತಾಂಜಲಿ ಚಿತ್ರಮಂದಿರಕ್ಕೆ ಯುವತಿಯೊಬ್ಬರು ಅನ್ಯ ಸಮುದಾಯ ದವರೊಂದಿಗೆ ಚಲನಚಿತ್ರ ನೋಡಲು ಬಂದಿದ್ದರು. ಇದನ್ನು ಕಂಡ ದುನಿಯಾ ವಿಜಿ ಅಭಿಮಾನಿ ಸಂಘದ ಮಾಜಿ ಅಧ್ಯಕ್ಷ ದೊಡ್ಡೇಶ್ ಹಾಗೂ ಆತನ ಸ್ನೇಹಿತರು ಯುವಕರಿಗೆ ಥಳಿಸಿದ್ದಾರೆ.
ನಂತರ ಇಬ್ಬರ ಯುವಕರ ಮೇಲೆ ಹಲ್ಲೆ ಮಾಡಿ ಪೊಲೀಸರಿಗೆ ದೊಡ್ಡೇಶ್ ಒಪ್ಪಿಸಿದ್ದಾನೆ. ಬಳಿಕ ಯುವತಿ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ನೈತಿಕ ಪೊಲೀಸ್ ಗಿರಿ ಹಾಗೂ ಜಾತಿನಿಂದನೆ, ಹಲ್ಲೆಯ ದೂರು ದಾಖಲು ಮಾಡಿದ್ದಾರೆ. ದೊಡ್ಡೇಶಿ ಸೇರಿದಂತೆ ಇಬ್ಬರ ವಿರುದ್ದ ದೂರು ದಾಖಲಾಗಿದೆ. ಅಲ್ಲದೇ ಜಾತಿ ನಿಂದನೆ ಹಾಗೂ ನೈತಿಕ ಪೊಲೀಸ್ ಗಿರಿ ಕೇಸ್ಗಳು ಕೂಡ ದಾಖಲಾಗಿದೆ ಎಂದು ಎಸ್ಪಿ ಹೇಳಿದರು.
ರಾಜ್ಯದ ನಾನಾ ಕಡೆ ನೈತಿಕ ಪೊಲೀಸ್ಗಿರಿ ಅದರೆ ಅಂತಹವರನ್ನು ನಾವು ಸಹಿಸೋದಿಲ್ಲ, ಅವರನ್ನು ಶಿಕ್ಷಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ನಡೆದ ಪೊಲೀಸ್ ಇಲಾಖಾಧಿಕಾರಿಗಳ ಸಭೆಯಲ್ಲಿ ತಿಳಿಸಿದ್ದರು. ಅಲ್ಲದೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಿಎಂ ಸೂಚಿಸಿದ ಬೆನ್ನೇಲೆ ದಾವಣಗೆರೆ ಎಸ್ಪಿ ಡಾ.ಕೆ.ಅರುಣ್ ಇಬ್ಬರು ಯುವಕರನ್ನು ಬಂಧಿಸಿದ್ದಾರೆ.
ಏನಿದು ಘಟನೆ : ಇಬ್ಬರು ಯುವಕ, ಓರ್ವ ಯುವತಿ ಒಟ್ಟಿಗೆ ಸಿನಿಮಾಕ್ಕೆ ಹೋಗಿದ್ದಾರೆ, ಈ ವೇಳೆ, ಇಬ್ಬರು ಯುವಕರು ಫೇಸ್ ಬುಕ್ ಲೈವ್ ಮಾಡುವ ಮೂಲಕ ನೈತಿಕ ಪೊಲೀಸ್ ಗಿರಿ ಮಾಡಿದ್ದರು. ಅಲ್ಲದೇ ಸಿನಿಮಾಕ್ಕೆ ಬಂದಿದ್ದ ಯುವಕರನ್ನು ಥಳಿಸಿದ್ದರು. ಬಳಿಕ ನೈತಿಕ ಪೊಲೀಸ್ ಗಿರಿ ನಡೆಸಿದ್ದರ ಬಗ್ಗೆ ಯುವತಿ ದೂರು ನೀಡಿದ್ದಾರೆ. ಈ ದೂರಿನ ಆಧಾರದಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆಯ ಪೊಲೀಸರು ಇಬ್ಬರನ್ನು ಇಂದು ಬಂಧಿಸಿದ್ದಾರೆ. ಬಂಧಿತರನ್ನು ದಾವಣಗೆರೆಯ ನಿವಾಸಿಗಳಾದ ದೊಡ್ಡೇಶ್ ಹಾಗೂ ನಿಂಗರಾಜ್ ಎಂದು ಎಸ್ಪಿ ಅರುಣ್ ತಿಳಿಸಿದ್ದಾರೆ. ನೈತಿಕ ಪೊಲೀಸ್ ಗಿರಿ ಮಾಡಿದವರಿಗೆ ಸಂಬಂಧಿಸಿದಂತೆ ಹಳೇ ಪ್ರಕರಣಗಳಿವೆ ಎಂದು ತನಿಖೆ ಮಾಡಲಾಗುತ್ತಿದ್ದು, ಈ ರೀತಿ ಮಾಡಲು ಹೊರಗಿನಿಂದ ಬೇರೆ ಯಾರಾದರೂ ಕುಮ್ಮಕ್ಕು ನೀಡಿದ್ದಾರಾ ಎಂಬುದರ ಬಗ್ಗೆಯೂ ತನಿಖೆ ಮಾಡಲಾಗುವುದು, ಇವರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ತನಿಖೆ ಮಾಡುತ್ತಿದ್ದೇವೆ, ಇಬ್ಬರ ವಿರುದ್ಧ ಎಫ್ಐಆರ್ ಹಾಕಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಚಿತ್ರಮಂದಿರದಲ್ಲಿ ಒಟ್ಟಿಗೆ ಬಂದ ಯುವಕರು ಉಪಟಳ ನೀಡುತ್ತಿದ್ದರು ಎಂಬ ಕಾರಣಕ್ಕೆ ನೈತಿಕ ಪೊಲೀಸ್ ಗಿರಿ ಮಾಡಿದ್ದಾಗಿ ಬಂಧಿತರು ಹೇಳುತ್ತಿದ್ದಾರೆ. ಆದರೆ ಯಾವುದೇ ಸಾರ್ವಜನಿಕನೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಅಂತಹ ಅಪರಾಧಗಳು ಕಂಡು ಬಂದಲ್ಲಿ 112 ಕ್ಕೆ ಕರೆ ಮಾಡಿದಲ್ಲಿ ಪೊಲೀಸ್ ಇಲಾಖೆ ನೇರವಾಗಿ ಸಹಾಯಕ್ಕೆ ಬರುತ್ತದೆ. ವಿಚಾರಣೆ ಮಾಡದೇ ಜನರೇ ಹಲ್ಲೆ ಮಾಡುವುದು ಸರಿ ಅಲ್ಲ ಎಂದು ಇದೇ ವೇಳೆ ಕಿವಿ ಮಾತನ್ನು ಎಸ್ಪಿ ಹೇಳಿದ್ದಾರೆ. ಇಬ್ಬರು ಫೇಸ್ ಬುಕ್ನಲ್ಲಿ ಲೈವ್ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟೇ ತನಿಖೆ ನಡೆಸಬೇಕಿದೆ. ದೂರಿನಲ್ಲಿ ಯುವತಿ ಈ ಬಗ್ಗೆ ಉಲ್ಲೇಖಿಸಿಲ್ಲ, ಪೊಲೀಸರೇ ಈ ಬಗ್ಗೆ ತನಿಖೆ ನಡೆಸಲಿದ್ದಾರೆ.
ಯಾವುದೇ ಸಾರ್ವಜನಿಕನ ಬದುಕನ್ನು ಅವರ ಒಪ್ಪಿಗೆ ಇಲ್ಲದೇ ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಹಾಕುವುದು ಅಪರಾಧವಾಗುತ್ತದೆ. ಪ್ರತಿಯೊಬ್ಬರಿಗೂ ಸಂವಿಧಾನಾತ್ಮಕವಾಗಿ ಬದುಕುವ ಹಕ್ಕಿದೆ. ಇದಕ್ಕೆ ಚ್ಯುತಿ ಬರುವಂತೆ ನಡೆದುಕೊಂಡಲ್ಲಿ ಪೊಲೀಸರು ಕ್ರಮಕೈಗೊಳ್ಳುತ್ತಾರೆ. ವಿಡಿಯೋ ಮಾಡಿದ್ದು ನಿಜವಾದಲ್ಲಿ ಐಟಿ ಆ್ಯಕ್ಟ್ ಅನ್ವಯ ಅವರ ಮೇಲೆ ಶಿಕ್ಷೆ ವಿಧಿಸಲಾಗುತ್ತದೆ. ಇನ್ನು ಈ ರೀತಿಯ ಪ್ರಕರಣ ಜಿಲ್ಲೆಯಲ್ಲಿ ಮರುಕಳಿಸದಂತೆ ನೋಡಿಕೊಳ್ಳಲಾಗುತ್ತದೆ ಎಂದು ಎಸ್ಪಿ ಸ್ಪಷ್ಟನೆ ನೀಡಿದ್ದಾರೆ.
