ರಾಜ್ಯ ಸರ್ಕಾರದ 2023 ರ ಬಜೆಟ್ ಕೇವಲ ಲೆಕ್ಕಪತ್ರದ ಪುಸ್ತಕ ದುಡಿಯುವ ವರ್ಗಕ್ಕೆ ನೆರವು ನೀಡದ ಬಜೆಟ್ – ಎಸ್ ಎಸ್ / ಎಸ್ ಎಸ್ ಎಂ
![](https://garudavoice.com/wp-content/uploads/2023/02/working-class-–-SS-SSM-23.jpg)
ಬಜೆಟ್ - ಎಸ್ ಎಸ್ / ಎಸ್ ಎಸ್ ಎಂ
ದಾವಣಗೆರೆ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ಮಂಡಿಸಿದ ಬಜೆಟ್ ಕೇವಲ ಲೆಕ್ಕ ಪತ್ರದ ಪುಸ್ತಕದಂತಿದ್ದು, ಬಡವರು,ಯುವಕರು, ಮಹಿಳೆಯರು ಮತ್ತು ಕಾರ್ಮಿಕರಿಗೆ ಯಾವುದೇ ನೆರವು ನೀಡದೆ ಬಿಜೆಪಿ ಸುಳ್ಳಿನ ಪಕ್ಷ ಎಂಬುದನ್ನು ಸಾಬೀತು ಮಾಡಿದಂತಿದೆ ಎಂದು ಶಾಸಕರು, ಮಾಜಿ ಸಚಿವರಾದ ಡಾ. ಶಾಮನೂರು ಶಿವಶಂಕರಪ್ಪನವರು, ಮಾಜಿ ಸಚಿವರಾದ ಎಸ್ .ಎಸ್. ಮಲ್ಲಿಕಾರ್ಜುನ ಅವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಚ್ ಬಿ ಮಂಜಪ್ಪನವರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದಿನೇಶ್ ಕೆ ಶೆಟ್ಟಿಯವರು ಅಭಿಪ್ರಾಯ ಪಟ್ಟಿದ್ದಾರೆ.
ಬಜೆಟ್ ಅಂದರೆ ಮುಂದಿನ ವರ್ಷದ ರಾಜ್ಯದ ಅಭಿವೃದ್ಧಿ ಎಂಬಂತಿರಬೇಕು ಆದರೆ ಈ ಬಜೆಟ್ ಕೇವಲ ಖರ್ಚು ವೆಚ್ಚಕ್ಕೆ ಸೀಮಿತಗೊಳಿಸಿದಂತಿದೆ ಎಂದು ತಿಳಿಸಿದ್ದಾರೆ.
ಬಡವರು ಮತ್ತು ಕಾರ್ಮಿಕರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದ ಈ ಬಜೆಟ್ ನಲ್ಲಿ ಯಾವುದೇ ವರ್ಗಕ್ಕೂ ಏನನ್ನು ಸೌಲಭ್ಯ ನೀಡದೆ ರಾಜ್ಯ ಜನತೆಗೆ ದ್ರೋಹ ಬಗೆಯಲಾಗಿದೆ.ದಾವಣಗೆರೆ ಜಿಲ್ಲೆಯಲ್ಲಿ ಮೆಕ್ಕೆಜೋಳ ಸಂಸ್ಕರಣೆ ಘಟಕ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳು ಇದ್ದು ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದರು ಯಾವುದೇ ಉಪಯೋಗ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ಮೂರು ತಿಂಗಳಿಂದ ಬೆಂಗಳೂರಿನಲ್ಲಿ ರಾಜ್ಯದ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು ಅವರ ಯಾವುದೇ ಬೇಡಿಕೆಗಳನ್ನು ಬಜೆಟ್ ನಲ್ಲಿ ಈಡೇರಿಸಿಲ್ಲ. ಅಲ್ಲದೆ ಓ ಪಿ ಎಸ್ ಪಿಂಚಣಿ ಬಗ್ಗೆಯೂ ಬಜೆಟ್ ನಲ್ಲಿ ಪ್ರಸ್ತಾಪಿಸದೆ ಸರ್ಕಾರಿ ನೌಕರರನ್ನು ವಂಚಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಇಂಥ ಜನ ವಿರೋಧಿ ಬಜೆಟ್ ಕೇವಲ ಬಿಜೆಪಿಯಿಂದ ಮಾತ್ರ ನೀಡಲು ಸಾಧ್ಯ ಎಂದು ಅವರು ಲೇವಡಿ ಮಾಡಿದ್ದಾರೆ.