ವಿಜಯ ಸಂಕಲ್ಪ ಯಾತ್ರೆಗೆ ಖಾಲಿ ಕುರ್ಚಿಗಳ ಸ್ವಾಗತ ಕೋಲಾರದಲ್ಲಿ ಯಾತ್ರೆ ಮೊಟಕು, ಸಾರ್ವಜನಿಕ ಸಭೆ ರದ್ದು
![](https://garudavoice.com/wp-content/uploads/2023/03/Vijaya-Sankalpa-Yatra-12-1024x469.jpg)
ವಿಜಯ ಸಂಕಲ್ಪ ಯಾತ್ರೆಗೆ ಖಾಲಿ ಕುರ್ಚಿಗಳ ಸ್ವಾಗತ ಕೋಲಾರದಲ್ಲಿ
ಕೋಲಾರ: ನಗರದ ಬೈರೇಗೌಡ ಬಡಾವಣೆ ಬಳಿಯ ಮೈದಾನದಲ್ಲಿ ಸಂಜೆ 5 ಗಂಟೆಗೆ ಸಾರ್ವಜನಿಕ ಸಭೆ ನಿಗದಿಯಾಗಿತ್ತು. ಬೃಹತ್ ವೇದಿಕೆಯನ್ನೂ ಸಿದ್ಧಪಡಿಸಿ ಸಾವಿರಾರು ಕುರ್ಚಿಗಳನ್ನು ಹಾಕಲಾಗಿತ್ತು. ಆದರೆ, ಜನರಿಲ್ಲದೆ ಕುರ್ಚಿಗಳು ಖಾಲಿ ಇದ್ದವು.
ಈ ಹಿನ್ನೆಲೆಯಲ್ಲಿ ಭಾನುವಾರ ನಡೆಯಬೇಕಿದ್ದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯನ್ನು ದಿಢೀರನೇ ಅರ್ಧಕ್ಕೆ ಮೊಟಕುಗೊಳಿಸಿ, ಸಾರ್ವಜನಿಕ ಸಭೆಯನ್ನೂ ರದ್ದು ಮಾಡಲಾಗಿದೆ.
ಕಾರ್ಯಕ್ರಮ ಮುಂದೂಡಲಾಗಿ ಎಂದಷ್ಟೇ ಹೇಳಿರುವ ಜಿಲ್ಲಾ ಬಿಜೆಪಿ ಅಧಿಕೃತ ಕಾರಣ ನೀಡಿಲ್ಲ. ಯಾತ್ರೆಯಲ್ಲಿ ಭಾಗವಹಿಸಿದ್ದ ಪಕ್ಷದ ಮುಖಂಡರು ತುರ್ತು ಕರೆಯ ಮೇರೆಗೆ ವಾಪಸ್ ತೆರಳಿದರು ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಮಾಲೂರು ಪಟ್ಟಣದಲ್ಲಿ ರ್ಯಾಲಿ ನಡೆಸಿ ಬಳಿಕ ಕೋಲಾರ ತಾಲ್ಲೂಕಿನ ವಕ್ಕಲೇರಿ, ಪಾರ್ಶ್ವಗಾನಹಳ್ಳಿ, ಛತ್ರಕೋಡಿಹಳ್ಳಿ ಮಾರ್ಗವಾಗಿ ಯಾತ್ರೆಯು ನಿಗದಿಗಿಂತ ಎರಡು ಗಂಟೆ ತಡವಾಗಿ ನಗರಕ್ಕೆ ಬಂತು. ಆದರೆ, ನಗರದಲ್ಲಿ ಏಕಾಏಕಿ ಯಾತ್ರೆ ಮೊಟಕುಗೊಂಡಿತು.