ನಕಲಿ ಕೀ ಬಳಸಿ ಕಲ್ಯಾಣ ಮಂಟಪದಲ್ಲಿ ಕಳ್ಳತನ: ಆರೋಪಿ ಬಂಧನ

ದಾವಣಗೆರೆ: ನಕಲಿ ಕೀ ಬಳಸಿ ಕಲ್ಯಾಣ ಮಂಟಪದ ಕೊಠಡಿಯಲ್ಲಿದ್ದ ಆಭರಣಗಳನ್ನು ಕಳ್ಳತನ ಮಾಡಿದ್ದ ಮಸಾಲೆ ವ್ಯಾಪಾರಿಯನ್ನು ಬಂಧಿಸಿರುವ ಪೊಲೀಸರು ಆತನಿಂದ 74 ಸಾವಿರ ರೂ. ಬೆಲೆಯ 13.45 ಗ್ರಾಂ. ತೂಕದ ಬಂಗಾರದ ಆಭರಣ ವಶಪಡಿಸಿಕೊಂಡಿದ್ದಾರೆ.

ಸರಸ್ವತಿ ನಗರದ ಚಿದಾನಂದ ಎಂಬುವವರು ತಮ್ಮ ಸೋದರ ಸಂಬಂಧಿ ಮದುವೆಗೆಂದು ಬಾಪೂಜಿ ಬ್ಯಾಂಕ್ ಸಮುದಾಯ ಭವನಕ್ಕೆ ಬಂದಿದ್ದು, ಕೊಠಡಿಯೊಂದರಲ್ಲಿ ಬ್ಯಾಗುಗಳನ್ನು ಇಟ್ಟು ಮದುವೆ ಕಾರ್ಯದಲ್ಲಿ ಭಾಗಿಯಾಗಿದ್ದರು.

ಮದುವೆ ಮುಗಿದ ನಂತರ ಕೊಠಡಿಗೆ ಬಂದು ಪರಿಶೀಲಿಸಿದಾಗ ಬ್ಯಾಗ್‌ನಲ್ಲಿದ್ದ ಆಭಣಗಳು ಕಳುವಾಗಿದ್ದವು. ಸಿಸಿಟಿವಿ ಪರಿಶೀಲಿಸಲಾಗಿ ವ್ಯಕ್ತಿಯೊಬ್ಬ ನಕಲಿ ಕೀ ಬಳಸಿ ಕೊಠಡಿ ತೆರೆದಿದ್ದು ಕಂಡು ಬಂದಿದೆ. ಈ ಕುರಿತು ಅವರು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡು ಪೊಲೀಸರು, ಶಾಂತಿ ನಗರದ ಮಸಾಲೆ ವ್ಯಾಪಾರಿ ಕಿರಣ್ ನಾಯ್ಕ ಆರ್. (26) ಎಂಬುವನನ್ನು ಬಂಧಿಸಿದ್ದಾರೆ. ಬಂಧಿತ ವಿದ್ಯಾನಗರ ಠಾಣೆಯ ಮೂರು ಪ್ರಕರಣ ಸೇರಿದಂತೆ ಬಡಾವಣೆ ಪೊಲೀಸ್ ಠಾಣೆ, ಬಸವನಗರ ಠಾಣೆ ಹಾಗೂ ಇತರೆ ಕಡೆಯೂ ಪ್ರಕರಣಗಲ್ಲೂ ಭಾಗಿಯಾಗಿರುವುದು ತಿಳಿದು ಬಂದಿದೆ.

ಆರೋಪಿಯನ್ನು ಪತ್ತೆ ಮಾಡಿದ ನಗರ ಉಪವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಇನ್ಸ್ಪೆಕ್ಟರ್ ಪ್ರಭಾವತಿ.ಸಿ.ಶೇತಸನದಿ, ಪಿಎಸ್‌ಐ ವಿಜಯ್.ಎಂ., ವಿಶ್ವನಾಥ ಹೆಚ್.ಎಸ್ ಹಾಗೂ ಸಿಬ್ಬಂದಿಗಳಾದ ಆನಂದ ಮುಂದಲಮನಿ, ಮಲ್ಲಿಕಾರ್ಜುನ, ಭೋಜಪ್ಪ ಕಿಚಡಿ, ಮಂಜಪ್ಪ.ಟಿ, ಯೋಗೀಶ್ ನಾಯ್ಕ, ಗೋಪಿನಾಥ ಬಿ.ನಾಯ್ಕ, ಲಕ್ಷ್ಮಣ್ ಆರ್, ಮಂಜುನಾಥ ಬಿ.ವಿ ಅವರನ್ನು ಎಸ್ಪಿ ಉಮಾ ಪ್ರಶಾಂತ್  ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!