ಅಕ್ಷರ ಜಾತ್ರೆಗೆ ಸಿದ್ಧವಾಗುತ್ತಿರುವ ಹೊಸ ಬೆಳವನೂರು 27ರಂದು ತಾ.ಕ.ಸಾ.ಸಮ್ಮೇಳನ
![](https://garudavoice.com/wp-content/uploads/2023/02/IMG-20230224-WA0008-1024x498.jpg)
ಅಕ್ಷರ ಜಾತ್ರೆಗೆ ಸಿದ್ಧವಾಗುತ್ತಿರುವ ಹೊಸ ಬೆಳವನೂರು 27ರಂದು ತಾ.ಕ.ಸಾ.ಸಮ್ಮೇಳನ
ದಾವಣಗೆರೆ : ಇದೇ ಫೆ.27ರ ಸೋಮವಾರ ದಾವಣಗೆರೆ ತಾಲ್ಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹೊಸ ಬೆಳವನೂರು ಗ್ರಾಮದಲ್ಲಿ ನಡೆಸುವುದಾಗಿ ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಸುಮತಿ ಜಯಪ್ಪ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡ ಅವರು, ಹೊಸ ಬೆಳವನೂರು ಗ್ರಾಮದ ಬಸವೇಶ್ವರ ಸಮುದಾಯ ಭವನದಲ್ಲಿ ಸಮ್ಮೇಳನದ ಕಾರ್ಯಕ್ರಮಗಳು ನಡಯಲಿವೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಮರೆಯಾಗುತ್ತಿದೆ. ಹೀಗಾಗಿ ಅಲ್ಲಿ ಕನ್ನಡದ ಜಾಗೃತಿ ಮೂಡಿಸಲು ಹಳ್ಳಿಯಲ್ಲಿ ಸಮ್ಮೇಳನ ನಡೆಸಲಾಗುತ್ತಿದೆ. ಮುಂದಿನ ತಾಲ್ಲೂಕು ಸಮ್ಮೇಳನಗಳೂ ಗ್ರಾಮೀಣ ಭಾಗದಲ್ಲಿಯೇ ನಡೆಯಲಿವೆ ಎಂದು ಹೇಳಿದರು.
ಪತ್ರಕರ್ತ ಬಿ.ಎನ್. ಮಲ್ಲೇಶ್ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ. 27ರ ಬೆಳಿಗ್ಗೆ 8ಕ್ಕೆ ಬೆಳವನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದ ಅಶು ಟಿ.ಎ. ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ಬೆಳಿಗ್ಗೆ 8.30ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ (ಕೃತಿಗಳ ಮೆರವಣಿಗೆ)ಗೆ ತಹಶೀಲ್ದಾರ್ ಎಂ.ಬಿ. ಅಶ್ವತ್ಥ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಸಮ್ಮೇಳನವನ್ನು ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಉದ್ಘಾಟಿಸುವರು. ಶಾಸಕ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸುವರು. ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ್, ಎಸ್.ಎಸ್. ಮಲ್ಲಿಕಾರ್ಜುನ್, ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು, ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ. ವಾಮದೇವಪ್ಪ ಸೇರಿದಂತೆ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಸಂಜೆ 4.30ಕ್ಕೆ ಬಹಿರಂಗ ಅಧಿವೇಶನ, ಸಂಜೆ 5ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು. ಸಂಜೆ 6.30ಕ್ಕೆ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪರಿಷತ್ತಿನ ಜಿ. ಬಸವರಾಜಪ್ಪ, ಜಯಂತ್ ಮಹಾಂತೇಶ್, ಲಿಂಗರಾಜು ಆನಕೊಂಡ, ಬೇತೂರು ಷಡಕ್ಷರಪ್ಪ, ಶಿವಮೂರ್ತಿ ಇದ್ದರು.