38ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಪ್ರಯುಕ್ತ ಜಯದೇವ ವೃತ್ತದಿಂದ ಮೆರವಣಿಗೆಗೆ ಚಾಲನೆ ನೀಡಿದ ಮೇಯರ್ ವಿನಾಯಕ್ ಪೈಲ್ವಾನ್

ದಾವಣಗೆರೆ ನಗರದಲ್ಲಿ ಎರಡು ದಿನ 38ನೇ ರಾಜ್ಯ ಪತ್ರಕರ್ತ ಸಮ್ಮೇಳನವನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ದಾವಣಗೆರೆ ನಗರದ ಜಯದೇವ ವೃತ್ತದಿಂದ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆಗೆ ಮಹಾನಗರ ಪಾಲಿಕೆ ಮಹಾಪೌರರಾದ ವಿನಾಯಕ್ ಅವರು ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಹುಬ್ಬಳ್ಳಿಯ ಸಿದ್ಧರೂಢ ಸಂಘದ 10 ಜನ ಕಲಾವಿದರು ಜಗ್ಗಲಿಗೆ, ನ್ಯಾಮತಿಯ ರಾಜ ವೀರಮದಕರಿ ದೊಳ್ಳಿನ ಸಂಘದ 12 ಜನರು ಪುರುಷರ ಡೊಳ್ಳು ಕುಣಿತ, ಹರಿಹರ ತಾಲ್ಲೂಕಿನ ಗುತ್ತೂರಿನ ಕಲಾಶ್ರೀ ಸಂಘದ ವೀರೇಶ್ ಕುಮಾರ್ ನೇತೃತ್ವದಲ್ಲಿ 13 ಜನರ ಹಗಲುವೇಷ ತಂಡದಿಂದ ರಾಮಾಯಣ, ಸಾಗರದ ಹೆಗ್ಗೋಡಿನ ಸಿಗಂದೂರು ಚೌಡೇಶ್ವರಿ ಮಹಿಳಾ ದೊಳ್ಳು ಕಲಾ ತಂಡದ ಅಧ್ಯಕ್ಷರಾದ ಶಾಂತ, ಶಶಿಕಲಾ, ಪದ್ಮಶ್ರೀ, ದಿವ್ಯ, ಪವಿತ್ರ, ಪೂಜಾ, ವೈಶಾಲಿ, ಲಕ್ಷ್ಮೀ ಅವರ ಮಹಿಳಾ ತಂಡದಿಂದ ಮಹಿಳಾ ದೊಳ್ಳುಕುಣಿತ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ದೊಡ್ಡಚಲ್ಲೂರು ಗ್ರಾಮದ ಬಯಲು ಆಂಜನೇಯ ಸ್ವಾಮಿ ಸಾಂಸ್ಕೃತಿಕ ಕಲಾತಂಡದ 10 ಜನ ಯುವಕರು ಗರಡಿ ಬೊಂಬೆ ಕುಣಿತ ಮಾಡುವ ಮೂಲಕ ಮೆರವಣಿಗೆಗೆ ಮೆರಗು ತಂದರು.
ಮೆರವಣಿಗೆಯಲ್ಲಿ ಮಾಧ್ಯಮ ವೃಕ್ಷವನ್ನು ನಿರ್ಮಿಸಿದ್ದು ವಿಶೇಷವಾಗಿತ್ತು. ದೃಶ್ಯಕಲಾ ಮಹಾ ವಿದ್ಯಾಲಯದ ಬೋಧನ ಸಹಾಯಕರಾದ ಪ್ರಮೋದ್ ಕೆವಿ, ನವೀನ್ ಕುಮಾರ್ ಎ, ವಿದ್ಯಾರ್ಥಿಗಳಾದ ದರ್ಶನ್, ವಿನೋದ್, ಮದನ್ ಅವರು ಸುದ್ದಿ ಪತ್ರಿಕೆಗಳ ಮತ್ತು ದೃಶ್ಯ ಮಾಧ್ಯಮಗಳ ನಾಮ ಫಲಕಗಳನ್ನು ಹಾಕಿರುವ ವೃತ್ತವನ್ನು ಎತ್ತಿನ ಬಂಡಿ ಯಲ್ಲಿ ನಿರ್ಮಾಣ ಮಾಡಿದ್ದು ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತೌಡೂರು, ಪಾಲಿಕೆ ಆಯುಕ್ತರಾದ ರೇಣುಕಾ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಇಎಂ, ಜಿಲ್ಲಾ ವರದಿಗಾರರ ಕೂಡ ಅಧ್ಯಕ್ಷ ಏಕಾಂತಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ರವಿಚಂದ್ರ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ವಾಮದೇಪ್ಪ, ಕಸಾಪ ತಾಲ್ಲೂಕು ಅಧ್ಯಕ್ಷರು ಸೇರಿದಂತೆ ಇತರರು ಭಾಗವಹಿಸಿದ್ದರು.