ರಾತ್ರಿ ನಿಂತ ಬಸ್‌ಗೆ ಬೆಂಕಿ ಹತ್ತಿ ನಿರ್ವಾಹಕ ಸಾವು

ರಾತ್ರಿ ನಿಂತ ಬಸ್‌ಗೆ ಬೆಂಕಿ ಹತ್ತಿ ನಿರ್ವಾಹಕ ಸಾವು

ಬೆಂಗಳೂರು: ನಿಲ್ಲಿಸಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಬಸ್‌ನಲ್ಲಿ‌ ಮಲಗಿದ್ದ ನಿರ್ವಾಹಕ ಮುತ್ತಯ್ಯ ಸ್ವಾಮಿ (45) ಸಜೀವವಾಗಿ ದಹನಗೊಂಡಿದ್ದ ಘಟನೆ ಲಿಂಗಧೀರನಹಳ್ಳಿ ಡಿ ಗ್ರೂಪ್‌ ಬಡಾವಣೆ ನಿಲ್ದಾಣದಲ್ಲಿ‌ ಗುರುವಾರ ರಾತ್ರಿನಡೆದಿದೆ.
ಸೋಮನಹಳ್ಳಿ‌ ಡಿಪೊ-31ಕ್ಕೆ ಸೇರಿದ್ದ ಬಸ್‌ನಲ್ಲಿ (ಕೆಎ 57 ಎಫ್ 2069) ಬಳ್ಳಾರಿಯ ಮುತ್ತಯ್ಯ ಹಾಗೂ‌ ಚಾಲಕ ಪ್ರಕಾಶ್ (39) ಕರ್ತವ್ಯದಲ್ಲಿದ್ದರು.
ಗುರುವಾರ ರಾತ್ರಿ 10.30ಕ್ಕೆ ಕರ್ತವ್ಯ‌ ಮುಗಿಸಿದ್ದ ಅವರಿಬ್ಬರು, ಡಿ ಗ್ರೂಪ್ ಬಡಾವಣೆ ನಿಲ್ದಾಣದಲ್ಲಿ ಬಸ್ ನಿಲ್ಲಿಸಿದ್ದರು. ಅಲ್ಲಿಯೇ ರಾತ್ರಿ ತಂಗಿದ್ದರು.  ಚಾಲಕ, ನಿಲ್ದಾಣದಲ್ಲಿರುವ ಕೊಠಡಿಯಲ್ಲಿ ಮಲಗಿದ್ದರು. ನಿರ್ವಾಹಕ ಮುತ್ತಯ್ಯ, ಬಸ್ಸಿನಲ್ಲಿ‌ ಮಲಗಿದ್ದರು.
ತಡರಾತ್ರಿ ಬಸ್‌ಗೆ ಬೆಂಕಿ ಹೊತ್ತಿಕೊಂಡು ಧಗ ಧಗ ಉರಿಯಲಾರಂಭಿಸಿತ್ತು. ಗಸ್ತಿ‌ನಲ್ಲಿದ್ದ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಬೆಂಕಿ ನಂದಿಸಿದ್ದರು. ಬಸ್‌ನಲ್ಲಿ ಮುತ್ತಯ್ಯ ಮೃತಪಟ್ಟಿದ್ದರು. ಅವರ ದೇಹ ಸಂಪೂರ್ಣ ‌ಸುಟ್ಟು ಹೋಗಿತ್ತು.
ಬೆಂಕಿ ಹೊತ್ತಿಕೊಳ್ಳಲು ಕಾರಣ ಸದ್ಯಕ್ಕೆ‌ ಗೊತ್ತಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!