32ನೇ ವಾರ್ಡ್ನಲ್ಲಿ ಅಕ್ರಮ ನಿವೇಶನ ಸಂಖ್ಯೆ ರದ್ದು ಹೋರಾಟದ ಪ್ರತಿಫಲ – ಉಮಾ ಪ್ರಕಾಶ್
![ಅಕ್ರಮ ನಿವೇಶನ](https://garudavoice.com/wp-content/uploads/2024/02/uma-prakash.jpg)
ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯ 32ನೇ ವಾರ್ಡಿನಲ್ಲಿ ಅವರಗೆರೆ ಸರ್ವೆ ನಂಬರ್ 242 ಮತ್ತು 243 ಮತ್ತು 244ರ ಉಪ ನಂಬರ್ ಗಳಲ್ಲಿ ದಾವಣಗೆರೆ-ಹರಿಹರ ನಗರ ಅಭಿವೃದ್ಧಿ ಪ್ರಾಧಿಕಾರದಿಂದ ಅಂತಿಮ ಮಂಜೂರಾತಿ ಪಡೆದಿದ್ದ ಬಡಾವಣೆ ನಕ್ಷೆಗಳಲ್ಲಿ ಬಿಟ್ಟಿದ್ದ ಸುಮಾರು 30 ನಾಲ್ಕು ಸಾವಿರ ಅಡಿ ಬಯಲು ಜಾಗಕ್ಕೆ ಮಹಾನಗರ ಪಾಲಿಕೆಯ ಕೆಲವು ಅಧಿಕಾರಿಗಳು ಶಾಮೀಲಾಗಿ 2017 ಮತ್ತು 2018 ರಲ್ಲಿ ನೀಡಲಾಗಿದ್ದ ಅಕ್ರಮ ನಿವೇಶನ ಸಂಖ್ಯೆಗಳನ್ನು ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಡಿಸೆಂಬರ್ 7ರಂದು ರದ್ದುಪಡಿಸಿ ಆದೇಶಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಮೇಯರ್ ಹಾಗೂ 32ನೇ ವಾರ್ಡ್ ಸದಸ್ಯರೂ ಆಗಿರುವ ಶ್ರೀಮತಿ ಉಮಾ ಪ್ರಕಾಶ್, 2019ರಲ್ಲಿ ಎರಡನೇ ಬಾರಿ ಪಾಲಿಕೆ ಸದಸ್ಯಳಾಗಿ ಆಯ್ಕೆಯಾದ ನಂತರ ಮೊದಲ ಸಾಮಾನ್ಯ ಸಭೆಯಿಂದ ಪ್ರತಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ರದ್ದುಪಡಿಸಲು ಹೋರಾಟ ಮಾಡಿದ್ದರ ಪ್ರತಿಫಲ ಇದಾಗಿದೆ ಎಂದಿದ್ದಾರೆ.
ಡೋರ್ ನಂಬರ್ ರದ್ದು ಪಡಿಸುವಲ್ಲಿ ಉಪಯುಕ್ತರಾದ ಶ್ರೀಮತಿ ಲಕ್ಷ್ಮಿ, ಸಹಾಯಕ ಕಂದಾಯ ಅಧಿಕಾರಿ ಸುನಿಲ್, ಮತ್ತು ಇತರ ಅಧಿಕಾರಿಗಳು ಪರಿಶೀಲಿಸಿ ಅಕ್ರಮ ಡೋರ್ ನಂಬರ್ ನೀಡಿರುವುದನ್ನು ರದ್ದುಪಡಿಸಲು ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ವರದಿ ನೀಡಿ ನಂತರ ಬೆಂಗಳೂರು ವಿಭಾಗೀಯ ಆಯುಕ್ತರ ಸೂಚನೆಯಂತೆ ಸದರಿ ಅಕ್ರಮ ಡೋರ್ ನಂಬರ್ ಗಳನ್ನು ರದ್ದುಪಡಿಸಲು ಕ್ರಮ ಕೈಗೊಂಡಿರುತ್ತಾರೆ.
ರದ್ದುಪಡಿಸಲು ಕ್ರಮ ಕೈಗೊಂಡ ಅಧಿಕಾರಿ ವರ್ಗಕ್ಕೆ ಆಯುಕ್ತರು ಮತ್ತು ಉಪ ಆಯುಕ್ತರಿಗೆ ಈ ಮೂಲಕ ಅಭಿನಂದನೆ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.
ಡೋರ್ ನಂಬರ್ ರದ್ದುಪಡಿಸಿರುವ ಜಾಗದಲ್ಲಿ ಫೆನ್ಸಿಂಗ್ ಅಳವಡಿಸಿ ಸಾರ್ವಜನಿಕ ಸ್ವತ್ತನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲು ಹಾಗೂ ಸಾರ್ವಜನಿಕರ ಉಪಯೋಗಕ್ಕೆ ಉದ್ಯಾನವನ ಅಥವಾ ಆಟದ ಮೈದಾನಕ್ಕೆ ಅನುಕೂಲ ಮಾಡಿಕೊಡಲು ಮತ್ತು ಅಕ್ರಮ ಡೋರ್ ನಂಬರ್ ನೀಡಿರುವಂತಹ ಪಾಲಿಕೆಯ ನೌಕರ ನೌಕರರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮುಂದಿನ ವಾರ ನಡೆಯಲಿರುವ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಮಾಡುವುದಾಗಿ ಉಮಾ ಪ್ರಕಾಶ್ ಹೇಳಿದ್ದಾರೆ.
ಸದರಿ ಅಕ್ರಮ ನಿವೇಶನಗಳನ್ನು ಬಡಾವಣೆ ನಿರ್ಮಿಸಿದ ಮಾಲೀಕರು ಕೆಲವರಿಗೆ ಮಾರಾಟ ಮಾಡಿ ಮೋಸ ಮಾಡಿರುವುದು ತಿಳಿದು ಬಂದಿದೆ. ಮತ್ತು ಎರಡು ಮೂರು ಮನೆಗಳನ್ನು ನಿರ್ಮಿಸಿ ಮಾರಾಟ ಮಾಡಿರುವುದು ಸಹ ತಿಳಿದುಬಂದಿದೆ. 32ನೇ ವಾರ್ಡಿನ ಅಂಬಿಕಾ ಬಡಾವಣೆಯಲ್ಲಿಯೂ ಸಹ ಬಯಲು ಜಾಗಕ್ಕೆ ಮತ್ತು ಸಾರ್ವಜನಿಕ ಸೌಲಭ್ಯಕ್ಕೆ ಬಿಟ್ಟಿದ್ದ ಸುಮಾರು 40 ಸಾವಿರ ಅಡಿಗಳಷ್ಟು ಜಾಗಗಳಿಗೂ ಸಹ ಅಕ್ರಮ ಡೋರ್ ನಂಬರ್ ನೀಡಿರುವುದನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲು ಒತ್ತಾಯಿಸುವುದಾಗಿ ತಿಳಿಸಿದ್ದಾರೆ.
ಅಲ್ಲದೆ ಶಕ್ತಿನಗರದ ಹತ್ತಿರ ಬನಶಂಕರಿ ದೇವಸ್ಥಾನದ ಎಡಭಾಗದಲ್ಲಿ ಡಿಸಿಎಂ ಟೌನ್ ಶಿಪ್ ನ ದಕ್ಷಿಣ ಭಾಗಕ್ಕೆ ಸುಮಾರು 30 ಅಡಿ ರಸ್ತೆ ಇದ್ದು ಸದರಿ ರಸ್ತೆಯನ್ನು ಒತ್ತುವರಿ ಮಾಡಿ ಮನೆ ನಿರ್ಮಿಸಿ ಮಾರಾಟ ಮಾಡಿರುವುದು ತಿಳಿದು ಬಂದಿರುತ್ತದೆ. ಸದರಿ ಡಿಸಿಎಂ ಟೌನ್ ಶಿಪ್ ನ ದಕ್ಷಿಣ ಭಾಗದಲ್ಲಿ ಬಿಟ್ಟಿರುವ 30ಅಡಿ ರಸ್ತೆಯನ್ನು ವತ್ತುವರಿ ಮಾಡಿರುವುದನ್ನು ತೆರವುಗೊಳಿಸಲು ಒತ್ತಾಯಿಸುವುದಾಗಿ ತಿಳಿಸಿದ್ದಾರೆ.
ಅಕ್ರಮ ಡೋರ್ ನಂಬರ್ ಗಳು ಸೇರಿದಂತೆ ಸಾರ್ವಜನಿಕ ಸ್ವತ್ತು ಒತ್ತುವರಿ, ಉದ್ಯಾನವನ ಒತ್ತುವರಿ, ರಸ್ತೆ ಒತ್ತುವರಿಗೆ ಸಂಬಂಧಿಸಿದಂತೆ ತನ್ನ ಹೋರಾಟ ಮುಂದುವರಿಯುತ್ತದೆ ಎಂದು ಶ್ರೀಮತಿ ಉಮಾ ಪ್ರಕಾಶ್ ಹೇಳಿದ್ದಾರೆ.
ಸಾರ್ವಜನಿಕರು ನಿವೇಶನ ಕೊಳ್ಳುವಾಗ ಆ ನಿವೇಶನಗಳು ನಗರ ಅಭಿವೃದ್ಧಿ ಪ್ರಾಧಿಕಾರದಿಂದ ಅನಿಮೋದನೆಯಾಗಿ ಮಹಾನಗರ ಪಾಲಿಕೆಯಿಂದ ಡೋರ್ ನಂಬರ್ ಪಡೆದಿವೆಯೇ ಎಂಬುದನ್ನು ಪರಿಶೀಲಿಸಿ ನಿವೇಶನ ಕೊಳ್ಳಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ