ಡಿಸಿ ಕಚೇರಿಯಲ್ಲಿ ಮಕ್ಕಳಿಗೆ ಫಿನಾಯಿಲ್ ಕೂಡಿಸಿ ಮಹಿಳೆ ಆತ್ಮಹತ್ಯೆಗೆ ಯತ್ನ
![](https://garudavoice.com/wp-content/uploads/2023/03/IMG-20230308-WA0007.jpg)
ಡಿಸಿ ಕಚೇರಿಯಲ್ಲಿ ಮಕ್ಕಳಿಗೆ ಫಿನಾಯಿಲ್ ಕೂಡಿಸಿ ಮಹಿಳೆ ಆತ್ಮಹತ್ಯೆಗೆ ಯತ್ನ
ಬೆಳಗಾವಿ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ತನ್ನ ಮೂವರು ಮಕ್ಕಳಿಗೆ ಫಿನೈಲ್ ಕುಡಿಸಿ ತಾನೂ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಜಿಲಲಾಧಿಕಾರಿ ಸಿಬ್ಬಂದಿಗಳು ನಾಲ್ವರನ್ನೂ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ನಾಲ್ವರೂ ಅಸ್ವಸ್ಥರಾಗಿದ್ದಾರೆ.
ನಗರದ ಅನಗೋಳದ ನಿವಾಸಿ ಸರಸ್ವತಿ ಅದೃಶ್ಯಪ್ಪ ಹಂಪಣ್ಣವರ (40) ಆತ್ಮಹತ್ಯೆಗೆ ಯತ್ನಿಸಿದವರು. ಮಕ್ಕಳಾದ ಸೃಷ್ಟಿ (14), ಸಾಕ್ಷಿ (8) ಹಾಗೂ ಸಾನ್ವಿ (3) ಅವರಿಗೂ ಪಿನೈಲ್ ಕುಡಿಸಿದ್ದರಿಂದ ನಾಲ್ವರೂ ಅಸ್ವಸ್ಥಗೊಂಡವರು.
ಬೈಲಹೊಂಗಲ ಜನತಾ ಪ್ಲಾಟ್ನಲ್ಲಿ ವಾಸವಾಗಿದ್ದ ಸರಸ್ವತಿ ಹಾಗೂ ಅದೃಶ್ಯಪ್ಪ ಅವರ ಕುಟುಂಬ ಕೆಲವು ವರ್ಷಗಳ ಹಿಂದೆ ಬೆಳಗಾವಿ ನಗರಕ್ಕೆ ಬಂದು ನೆಲೆಸಿದೆ. ಕಟಿಂಗ್ ಸೆಲೂನ್ನಲ್ಲಿ ಕೆಲಸ ಮಾಡುತ್ತಿದ್ದ ಅದೃಶ್ಯಪ್ಪ ಬಾಡಿಗೆ ಮನೆ ಮಾಡಿಕೊಂಡು ಕುಟುಂಬ ಸಲಹುತ್ತಿದ್ದರು.
ಜೀವನ ನಿರ್ವಹಣೆಗಾಗಿ ಅದೃಶ್ಯಪ್ಪ ಸಾಕಷ್ಟು ಜನರ ಕಡೆ ಸಾಲ ಮಾಡಿದ್ದಾರೆ. ಸಾಲಗಾರರ ಕಿರುಕುಳ ಹೆಚ್ಚಾಗಿದ್ದರಿಂದ ಕಳೆದ 15 ದಿನಗಳ ಹಿಂದೆ ಪತ್ನಿ, ಮಕ್ಕಳನ್ನು ಬಿಟ್ಟು ತಲೆಮರೆಸಿಕೊಂಡಿದ್ದಾರೆ. ಇತ್ತ, ಸಾಲಗಾರರು ಪ್ರತಿದಿನವೂ ಸರಸ್ವತಿ ಅವರಿಗೆ ಕಿರುಕುಳ ನೀಡಲು ಆರಂಭಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಒಂದೆಡೆ ಸಾಲಗಾರರ ಕಿರುಕುಳ, ಇನ್ನೊಂದೆಡೆ ಮಕ್ಕಳಿಗೆ ಮನೆಯಲ್ಲಿ ಊಟಕ್ಕೂ ಗತಿ ಇಲ್ಲದ ಸ್ಥಿತಿ. ಇದರಿಂದ ಬೇಸರಗೊಂಡ ಸರಸ್ವತಿ ಅವರು ಜೀವನ ನಿರ್ವಹಣೆಗೆ ಸಹಾಯ ಕೋರಿ ಬುಧವಾರ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದರು.
ಕಚೇರಿಯಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಇರಲಿಲ್ಲ. ಕೆಲಹೊತ್ತು ಕಾಯುವಂತೆ ಕಚೇರಿ ಸಿಬ್ಬಂದಿ ಹೇಳಿದರು. ಮಹಿಳೆ ಕಾದು ಕುಳಿತ ವೇಳೆ ಮಕ್ಕಳು ಅಸ್ವಸ್ಥಗೊಂಡು, ವಾಂತಿ ಮಾಡತೊಡಗಿದರು. ಕಚೇರಿ ಸಿಬ್ಬಂದಿ ಮಕ್ಕಳಿಗೆ ನೀರು ಕೊಟ್ಟು ಉಪಚರಿಸಲು ಮುಂದಾದರು.
ನಮ್ಮ ತಾಯಿ ಜ್ಯೂಸ್ ಎಂದು ಏನನ್ನೋ ಕುಡಿಸಿದ್ದಾಳೆ’ ಎಂದು ಹಿರಿಯ ಪುತ್ರಿ ಸೃಷ್ಟಿ ಸಿಬ್ಬಂದಿಗೆ ತಿಳಿಸಿದಳು. ಅಗ ಎಚ್ಚೆತ್ತುಕೊಂಡ ಸಿಬ್ಬಂದಿ ಪರಿಶೀಲಿಸಿದಾಗ ಎಲ್ಲರೂ ಪಿನೈಲ್ ಕುಡಿದಿದ್ದು ಗಮನಕ್ಕೆ ಬಂತು. ಸ್ಥಳಕ್ಕೆ ಧಾವಿಸಿದ ಪೊಲೀಸರು ತಕ್ಷಣ ಅವರನ್ನು ಹತ್ತಿರದಲ್ಲೇ ಇರುವ ಜಿಲ್ಲಾಸ್ಪತ್ರೆಗೆ ದಾಖಲಿಸಿದರು.