ದಾವಣಗೆರೆ ನಗರದ ಶಕ್ತಿದೇವತೆ ದುರ್ಗಾಂಬಿಕಾ ಜಾತ್ರೆ ಸಮಾಜಶಾಸ್ತ್ರಿಯ ದೃಷ್ಠಿಕೋನ

ದಾವಣಗೆರೆ: ನಗರದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ‘ಎರಡು’ ದಿನ ಮಾತ್ರ.  ಮೊದಲನೆಯ ದಿನ ಸಿಹಿ ಊಟ, ಎರಡನೆಯ ದಿನ ಬಾಡೂಟ.  ಇದರ ಆಚರಣೆ – ಸಂಭ್ರಮ ತಿಂಗಳುಗಟ್ಟಲೆ. ಇದನ್ನು ವಿವಿಧ ಆಯಾಮಗಳಿಂದ ತಿಳಿಸಿದ್ದಾರೆ – ಡಾ. ಗಂಗಾಧರಯ್ಯ ಹಿರೇಮಠ.
ಭಾರತ ಗ್ರಾಮಗಳಿಂದ ಕೂಡಿದ ದೇಶ. ಇತ್ತೀಚಿನ ನೂರು ವರ್ಷಗಳಲ್ಲಿ ನಗರಗಳ ಸಂಖ್ಯೆ ಹೆಚ್ಚುತ್ತಲಿದೆ. ಭಾರತದಲ್ಲಿ 6,40,867 ಗ್ರಾಮಗಳಿವೆ. ನಗರಗಳ ಸಂಖ್ಯೆ ಜನಸಂಖ್ಯಾ ಆಧಾರದ ಮೇಲೆ ಹಂಚಿಹೋಗಿವೆ. ಜನಸಂಖ್ಯೆಯಲ್ಲಿ ಶೇಕಡಾ 72.2 ಗ್ರಾಮವಾಸಿಗಳು, 27.8 ನಗರವಾಸಿಗಳಿದ್ದಾರೆ. ಸುಮಾರು 400 ಪ್ರಮುಖ ನಗರಗಳೊಂದಿಗೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶ ನಮ್ಮದು. ನಮ್ಮ ದೇಶದ ಪ್ರತಿ ಗ್ರಾಮದಲ್ಲಿಯೂ ‘ಗ್ರಾಮದೇವತೆ’ ಇರುವಂತೆ ನಗರಗಳಲ್ಲಿಯೂ ‘ನಗರದೇವತೆ’ ಇರುವುದನ್ನು ಗಮನಿಸಬಹುದು. ಪ್ರಾಚೀನ ಕಾಲದಿಂದಲೂ ಈ ‘ದೇವತೆ’ಗಳಲ್ಲಿ ಸಮಾನತೆಯ ಕಲ್ಪನೆಯನ್ನು ಕಾಣಬಹುದು.
ಭಾರತೀಯರ ‘ಪುರಾತನ’ ಅಥವಾ ‘ಸನಾತನ’ ಧರ್ಮವೆಂದರೆ ‘ಶೈವಧರ್ಮ’ ಈ ಧರ್ಮದ ಜನರ ಆರಾಧ್ಯದೈವ ‘ಶಿವ’.  ಈ ಶಿವನಿಗೆ ‘ಅರ್ಧನಾರೀಶ್ವರ’ ಎನ್ನುತ್ತಾರೆ. ಅರ್ಧಶಿವ, ಅರ್ಧಪಾರ್ವತಿ. ಶಿಲ್ಪಕಲಾ ಪರಿಕಲ್ಪನೆಗಳೊಂದಿಗೆ ಪುರಾಣಗಳು ಮತ್ತು ದೇವಾಲಯಗಳು ಒಟ್ಟಿಗೆ ಕಾಣಿಸಿಕೊಂಡವು. ಪ್ರಮುಖ ‘ದೇವತೆ’ಗಳು ತಮ್ಮದೇ ಆದ ಸಂಪ್ರದಾಯವನ್ನು ಪ್ರೇರೇಪಿಸಿವೆ. ಸಾಂಖ್ಯ ತತ್ವಶಾಸ್ತ್ರದಲ್ಲಿ ದೇವತೆಗಳನ್ನು ‘ಶಕ್ತಿಯ’ ನೈಸರ್ಗಿಕ ಮೂಲಗಳು ಎಂದು ಕರೆದರು. ಅವುಗಳು ಸತ್ವವನ್ನು ಪ್ರಬಲವಾದ ಗುಣವನ್ನು ಹೊಂದಿವೆ. ದೇವತೆಗಳನ್ನು ಚಿತ್ರಕಲೆಗಳಲ್ಲಿ ಮತ್ತು ಶಿಲ್ಪಗಳಲ್ಲಿ ಮೂರ್ತಿಗಳು ಮತ್ತು ಪ್ರತಿಮೆಗಳು ಎಂದು ಕರೆಯಲಾಗುತ್ತಿದೆ. ಪ್ರಾಚೀನ ಚಾರ್ವಾಕರಂತಹ ಸಂಪ್ರದಾಯಗಳು ಎಲ್ಲಾ ದೇವತೆಗಳನ್ನು ಮತ್ತು ದೇವರ ಪರಿಕಲ್ಪನೆಯನ್ನು ತಿರಸ್ಕರಿಸಿದವು. 19ನೇ ಶತಮಾನದ ಬ್ರಿಟಿಷ್ ವಸಾಹತುಶಾಹಿ ಸಂದರ್ಭದಲ್ಲಿ ‘ಆರ್ಯಸಮಾಜ’ ಮತ್ತು ‘ಬ್ರಹ್ಮಸಮಾಜ’ ದಂತಹ ಚಳುವಳಿಗಳು ‘ದೇವತೆ’ಗಳನ್ನು ತಿರಸ್ಕರಿಸಿದವು.
ಮನುಷ್ಯರೇ ದೇವತೆಗಳು ಆದ ಸಂದರ್ಭಗಳು:
ಭಾರತದ ಇತಿಹಾಸದಲ್ಲಿ ಆರ್ಯರು ಮತ್ತು ದ್ರಾವಿಡರ ನಡುವೆ ಸಂಘರ್ಷ ನಡೆಯುತ್ತಲೇ ಇತ್ತು. ದ್ರಾವಿಡರು ಭಾರತದ ಮೂಲ ನಿವಾಸಿಗಳು, ಆರ್ಯರು ಹೊರಗಿನಿಂದ ಬಂದವರು. ಇವರಿಬ್ಬರ ಜನಾಂಗೀಯ ಕಲಹ, ಸಂಗರ್ಷದಲ್ಲಿ ಸಾಮಾನ್ಯ ವ್ಯಕ್ತಿಗಳು ನಾಯಕತ್ವ ವಹಿಸಿ ಆರ್ಯರನ್ನು ಸೆದೆಪಡೆಯಲು ಪ್ರಯತ್ನಿಸುತ್ತಾರೆ. ಭದ್ರ, ಕಾಳಿ, ಯಲ್ಲವ್ವ, ದುರ್ಗವ್ವ, ದ್ಯಾಮವ್ವ ಮುಂತಾದ ಹೆಸರುಗಳುಳ್ಳ ವ್ಯಕ್ತಿಗಳು ಆರ್ಯರೊಂದಿಗೆ ಹೋರಾಡಿ ದ್ರಾವಿಡ ಜನಾಂಗವನ್ನು ರಕ್ಷಿಸುವ ಕಾರ್ಯದಲ್ಲಿ ನಿಂತರು. ಜನಸಾಮಾನ್ಯರ ಪಾಲಿಗೆ ಇವರು ದೇವರಂತೆ, ದೇವತೆಗಳಂತೆ ಕಂಡುಬಂದರು. ಭದ್ರ ವೀರತನವನ್ನು ಪ್ರದರ್ಶಿಸಿದ.  ಈತನೇ ವೀರಭದ್ರನಾಗಿ ಭಾರತದಾದ್ಯಂತ ಪೊಜೆಗೊಳ್ಳುತ್ತಿದ್ದಾರೆ. ಹಾಗೆಯೇ ಭದ್ರನ ಪತ್ನಿ ಕಾಳವ್ವ ಕಾಳಿಕಾಂಬಿಕೆಯಾದಳು, ಯಲ್ಲವ್ವ-ಯಲ್ಲಮ್ಮನಾಗಿ, ದುರ್ಗವ್ವ – ದುರ್ಗಂಬಿಕೆಯಾಗಿ, ಹಾಗೆಯೇ ದ್ಯಾವಮ್ಮ ದೇವಿಯಾಗಿ ಭಾರತದ ಪ್ರತಿಗ್ರಾಮಗಳಲ್ಲಿ ಪೂಜನೀಯಗೊಳ್ಳುತ್ತಿರುವುದು ಇತಿಹಾಸವಾದರೆ. ಇಂತಹ ಮಾಹಿತಿಗಳನ್ನು ಸಂಶೋಧನೆಗಳ ಮೂಲಕ ಸತ್ಯಾ-ಸತ್ಯತೆಯಿಂದ ಅರಿಯಬೇಕಾಗಿದೆ. ಈ ದೇವತೆಗಳ ಹೆಸರಿನಲ್ಲಿ ಜಾತಿಯ ಶ್ರೇಣಿಕರಣವೂ ನೆಲೆಯೂರಿದೆ.
ಕರ್ನಾಟಕದ ಪ್ರಮುಖ ಶಕ್ತಿ ದೇವತೆಗಳು:
ಅಪಾರ ಭಕ್ತರನ್ನು ಹೊಂದಿರುವ ಈ ಶಕ್ತಿ ‘ದೇವತೆ’ಗಳ ದೇವಾಲಯಗಳು ದೇಶಾದ್ಯಂತ ಕಂಡುಬರುತ್ತಿವೆ. ಮದುರೈ – ಮೀನಾಕ್ಷಿ, ಕಂಚಿ – ಕಾಮಾಕ್ಷಿ, ವೇಲೂರು – ಮಹಾಲಕ್ಷ್ಮಿ ಕೋಲ್ಲಾಪುರದ – ಮಹಾಲಕ್ಷ್ಮಿ ಕರ್ನಾಟಕದಲ್ಲಿ ಪ್ರಮುಖ ಶಕ್ತಿ ದೇವತೆಗಳೆಂದರೆ, ಚಾಮುಂಡೇಶ್ವರಿ – ಮೈಸೂರು, ಅನ್ನಪೂರ್ಣೇಶ್ವರಿ – ಹೋರನಾಡು, ಮುಕಾಂಬಿಕಾ – ಕೊಲ್ಲೂರು, ಪೊಳಲಿರಾಜರಾಜೇಶ್ವರಿ – ದಕ್ಷಿಣಕನ್ನಡ, ಸಿಗಂದೂರು ಚೌಡೆಶ್ವರಿ – ಶಿವಮೊಗ್ಗ, ಮಾರಿಕಾಂಬಾದೇವಿ – ಸಿರಸಿ, ಬನಶಂಕರಿ – ಬದಾಮಿ, ಹಾಸನಾಂಬೆ – ಹಾಸನ, ನಿಮಿಷಾಂಬ – ಶ್ರೀರಂಗಪಟ್ಟಣ, ಹುಲಿಗೆಮ್ಮ – ಕೊಪ್ಪಳ, ಯಲ್ಲಮ್ಮ – ಸೌವದತ್ತಿ, ಮಹಾಲಕ್ಷ್ಮಿ – ಗೊರವನಹಳ್ಳಿ, ಅಣ್ಣಮ್ಮದೇವಿ – ಬೆಂಗಳೂರು, ಶಾರದಾಂಬೆ – ಶೃಂಗೇರಿ, ದುರ್ಗಮ್ಮ – ಬಳ್ಳಾರಿ, ಹಾಗೆಯೇ ದುಗಾಂಬಿಕೆ – ದಾವಣಗೆರೆ ಹೀಗೆ ರಾಜ್ಯಾದಂತ ಪ್ರಮುಖ ದೇವತೆಗಳನ್ನು ಕಾಣಬಹುದು.
ದಾವಣಗೆರೆಯ ದುರ್ಗಾಂಬಿಕೆ:
ದಾವಣಗೆರೆ ಹೆಸರಿನ ಮೂಲ ನಿಷ್ಪತ್ತಿ ದಾವಣೆಗೇರಿ – ದವನಗೇರಿ– ದಾವಣಗೆರೆಯಾಗಿರುವುದು ಭಾಷಾ ತಜ್ಞರ ಅಭಿಪ್ರಾಯ, ಪ್ರಾಚೀನಕಾಲದಲ್ಲಿ ‘ದವನಕೃಷಿ’ ಇಲ್ಲಿ ಪ್ರಧಾನವಾಗಿತ್ತೆಂಬ ಅಭಿಪ್ರಾಯ ಇದೆ. ಇನ್ನೊಂದೆಡೆ ದಾವಣಗೆರೆ ಎಂಬ ಹೆಸರು ‘ದಾನನಕೆರೆ’ಯಿಂದ ಬಂದಿದೆ. ಇದರರ್ಥ ಕೆರೆಗಳ ಪ್ರದೇಶ ಎಂಬುದಾಗಿದೆ. ಇಲ್ಲಿಯ ಪ್ರಧಾನ ದೇವತೆ ‘ದುರ್ಗಾಂಬಿಕಾ ದೇವಿ’, ದುಗ್ಗಾವತಿಯಿಂದ ದಾವಣಗೆರೆಗೆ ಬರುತ್ತಿದ್ದ ಎತ್ತಿನ ಬಂಡಿಯು ಸ್ವಲ್ಪ ಮುಂಬಡಿ ಆಗುತ್ತದೆ. ಆಗ ಬಂಡಿ ನಡೆಸುವವನು ಸ್ಥಳದಲ್ಲಿದ್ದ ದುಂಡು ಕಲ್ಲೊಂದನ್ನು ಎತ್ತಿ ಬಂಡಿಯ ಹಿಂಭಾಗದಲ್ಲಿ ಇಟ್ಟುಕೊಂಡು ಬಂಡಿ ಸಾಗಿಸುತ್ತಾನೆ. ದೇವನಗರಿಗೆ ಬರುತ್ತಿದ್ದಂತೆ ಕಲ್ಲಿನ ಹಿಂಭಾಗ ತಾಳದೇ ಬಂಡಿಯು ಮುರಿದು ಬೀಳುತ್ತದೆ.  ಆಗ ದುಂಡುಕಲ್ಲು ದಾರಿಯ ಬದಿಗೆ ಉರುಳುತ್ತದೆ, ಸ್ಥಳೀಯರು ಬಂಡಿಯವನಿಗೆ ಸಹಾಯ ಮಾಡಲು ಬಂದಾಗ ಚಿಕ್ಕ ಬಾಲಕನ ಮೈಮೇಲೆ ದೇವಿಯು ಆವರಿಸಿ, ನಾನು ದುಗ್ಗಾವತಿಯ ದುಗ್ಗಮ್ಮ, ಬಂಡಿಯಲ್ಲಿ ಇಲ್ಲಿತನಕ ಬಂದಿದ್ದೇನೆ. ನಾನು ಈ ಪ್ರಶಾಂತವಾದ ಸ್ಥಳದಲ್ಲಿಯೇ ನೆಲೆ ನಿಲ್ಲಲು ಇಚ್ಛಿಸಿದ್ದೇನೆ. ಇಲ್ಲಿಯೇ ನನ್ನ ಗರ್ಭಗುಡಿ ನಿರ್ಮಿಸಿ, ನನ್ನನ್ನು ಭಕ್ತಿಯಿಂದ ಆರಾಧಿಸಿ, ಕಷ್ಟ-ಕಾರ್ಪಣ್ಯಗಳಿಂದ ನಿಮ್ಮನ್ನು ರಕ್ಷಿಸುತ್ತೇನೆಂಬ ಬಾಲಕನ ಮಾತಿನಂತೆ ಹಳೆ ದಾವಣಗೆರೆ ಭಾಗದಲ್ಲಿ ಭಕ್ತರು ಗರ್ಭಗುಡಿ ನಿರ್ಮಿಸಿ, ಅದರೊಳಗೆ ದುಂಡುಕಲ್ಲು ಇಟ್ಟು ‘ದುಗ್ಗಮ್ಮದೇವಿ’ ಎಂಬ ನಾಮಕರಣ ಮಾಡಿ ಪೂಜಿಸಲು ಆರಂಭಿಸಿದರು ಎಂಬುದು ಜಾನಪದ ಕಥೆಯಾಗಿದೆ. ಸುಮಾರು 200 ವರ್ಷಗಳ ಹಿಂದೆ ದುಗತ್ತಿ ಗ್ರಾಮದಿಂದ ಕಲ್ಲನ್ನು ತಂದು, ಇಲ್ಲಿ ದೇವಾಲಯ ಪ್ರತಿಷ್ಠಾಪಿಸಿ ‘ದುರ್ಗಾದೇವಿಯಾಗಿ’ ಪೂಜಿಸಲಾಯಿತು ಎಂಬುದು ಹಿರಿಯರ ಅಭಿಮತವಾಗಿದೆ.
ದುರ್ಗಾಂಬಿಕೆ ನೂತನ ದೇವಾಲಯ:
ಗರ್ಭಗುಡಿ ಸ್ವರೂಪದಲ್ಲಿದ್ದ ದೇವಾಲಯವನ್ನು 1934ರಲ್ಲಿ ವಿಶಾಲ ದೇವಾಲವನ್ನಾಗಿ ನಿರ್ಮಿಸಿ, ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ದೇವಿಯ ಜಾತ್ರೆಯು ಆರಂಭಗೊಂಡಿತು. ನಗರದ ಸಮಸ್ತ ದೈವದವರು ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ನ ಟ್ರಸ್ಟಿಗಳು, ವ್ಯಾಪಾರಸ್ಥರು, ಗೌಡರು, ಶಾನುಬೋಗರು, ಬಡಿಗೇರರು, ಮಡಿವಾಳರು, ರೈತರು, ಕುಂಬಾರರು, ತಳವಾರರು, ಹೀಗೆ ಎಲ್ಲಾ ಜನರು, ಸುತ್ತಮುತ್ತಲಿನ ಗ್ರಾಮಸ್ಥರು ಸೇರಿಕೊಂಡು ಜಾತ್ರೆ ಮಾಡುವ ಸಂಪ್ರದಾಯ ಬೆಳೆಸಿದರು. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯು ‘ದೇವನಗರಿ’ ಸಡಗರ, ಸಂಭ್ರಮದಿಂದ ಜನರ ಸಂತಸ ಇಮ್ಮುಡಿಗೊಳ್ಳುತ್ತದೆ.
ದುರ್ಗಾಂಬಿಕ ಜಾತ್ರೆ ಸಂಬಂಧಗಳ ಬೆಸುಗೆ:
ದಾವಣಗೆರೆ ನಗರದ ದೇವತೆ ‘ದುರ್ಗಮ್ಮ’ನ ಜಾತ್ರೆಯ ವಿಶೇಷವಾದುದು. ದಾವಣಗೆರೆಯಲ್ಲಿರುವ ಪ್ರತಿಮನೆಗೂ ನೆಂಟರು ಬರುತ್ತಾರೆ. ಇದೊಂದು ರೀತಿಯಲ್ಲಿ ಸಂಬಂಧಗಳ ಬೆಸುಗೆ ಎನ್ನಬಹುದು. ಇಲ್ಲಿಂದ ಮದುವೆಯಾಗಿ ಬೇರೆ ಕಡೆ ಹೋದ ಮಹಿಳೆಯರು ‘ದುಗ್ಗಮ್ಮ’ ಜಾತ್ರೆಗೆ ತವರು ಮನೆಗೆ ಬಂದೇ ಬರುತ್ತಾರೆ. ಇಲ್ಲಿಂದ ಹೊರಗಡೆ ವ್ಯಾಪಾರಕ್ಕೆಂದು, ನೌಕರಿಗೆಂದು, ಕಂಪನಿ ಕೆಲಸಗಳಿಗೆಂದು ಬೇರೆ ಜಿಲ್ಲೆ, ಬೇರೆ ರಾಜ್ಯ, ದೇಶಗಳಿಗೆ ಹೋದವರು ಸಹ ಜಾತ್ರೆಗೆ ಕಡ್ಡಾಯವಾಗಿ ಬಂದು ಹೋಗುವ ಸಂಪ್ರದಾಯ ಇಲ್ಲಿದೆ. ಅಲ್ಲದೆ ಸಂಬಂಧಿಗಳು, ನೆಂಟರು, ಆತ್ಮೀಯರನ್ನು ದಾವಣಗೆರೆಗೆ ಕರೆಸಿಕೊಂಡು ಸಿಹಿಊಟ ಜೊತೆಗೆ ಭರ್ಜರಿ ಬಾಡೂಟವನ್ನು ಹಾಕಿ ಸಂತಸಪಡಿಸಿ ಕಳಿಯಿಸುವ ವಾಡಿಕೆ ಇಲ್ಲಿಯ ಜನರದ್ದಾಗಿದೆ.
ಜಾತ್ರೆಯಿಂದ ಜನಸಾಮಾನ್ಯಿರಿಗೆ ಸಿಗುವ ಲಾಭಗಳು:
ಜಾತ್ರೆ ಎಂದ ಮೇಲೆ ಸಡಗರ, ಸಂಭ್ರಮ, ಅತಿಥಿಗಳ ಆಹ್ವಾನ, ಬಟ್ಟೆ ಖರೀದಿ, ಕೀರಾಣಿ ಖರೀದಿ, ಕುರಿಗಳ ಖರೀದಿ, ಶ್ಯಾಮಿಯಾನ ಹಾಕಿಸುವುದು, ಮನೆಗೆ ಸುಣ್ಣ-ಬಣ್ಣ, ತಳಿರು ತೋರಣಗಳು ಒಂದೆಡೆಯಾದರೆ, ಸಾಮಾನ್ಯ ಕೂಲಿಕಾರರಿಗೆ, ಬಡವರಿಗೆ, ನಿರ್ಗತಿಕರಿಗೆ ಇದರ ಪ್ರಯೋಜನವೇನು ಎಂದು ನೋಡಿದಾಗ ತಿಂಗಳುಗಟ್ಟಲೆ ಜನಸಾಮಾನ್ಯರಿಗೆ ಕೆಲಸ, ಕೂಲಿ ಮತ್ತು ಲಾಭಸಿಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಕೂಲಿ ಮಾಡಿ ಬದುಕುವ ಮಹಿಳೆಯರಿಗೂ ಈ ಜಾತ್ರೆ ಆರ್ಥಿಕ ಪ್ರೇರಣೆ ನೀಡುತ್ತದೆ. ಗದ್ದೆಯ ಪಕ್ಕದಲ್ಲಿದ್ದ, ಕರೆಯದಂಡೆಯ ಮೇಲೆ, ಕೊಳವೆಬಾವಿಗಳ ಸುತ್ತಲು ನೈಸರ್ಗಿಕವಾಗಿ ಬೆಳೆದ ಹುಲ್ಲನ್ನು ಕೊಯ್ದು, ದಾವಣಗೆರೆ ನಗರಕ್ಕೆ ತಂದು ಆಯಕಟ್ಟಿನ ಸ್ಥಳದಲ್ಲಿಟ್ಟು ಮಾರಾಟ ಆರಂಭಿಸುತ್ತಾರೆ. ನಗರದಲ್ಲಿ ಸಂಭ್ರಮದಿಂದ ಜಾತ್ರೆ ಮಾಡುವ ಭಕ್ತರು ತಿಂಗಳು ಮುಂಚೆಯೇ ತಮ್ಮ ಭರ್ಜರಿ ‘ಬಾಡೂಟ’ಕ್ಕೆ ಕುರಿಯನ್ನು ಖರೀದಿಸುತ್ತಾರೆ ನಿಜ.  ಆ ಕುರಿಗೆ ಒಂದು ತಿಂಗಳ ಆಹಾರ ಬೇಕಲ್ಲ, ಕುರಿ ತಿಂಗಳುಗಟ್ಟಲೆ ಹಸಿಹುಲ್ಲನ್ನು ತಿಂದರೆ ಅದು ಚೆನ್ನಾಗಿ ಮಾಂಸಕಟ್ಟುತ್ತದೆ ಎಂಬ ಆಶೆಯಿಂದ ಹಸಿ ಹುಲ್ಲನ್ನು ಹುಡುಕಲು ಆರಂಭಿಸುತ್ತಾರೆ. ಈ ಸಂದರ್ಭದಲ್ಲಿ ಹಸಿ ಹುಲ್ಲಿಗೆ ಬೇಡಿಕೆ ಜಾಸ್ತಿ, 20 ರೂಪಾಯಿ, 30 ರೂಪಾಯಿಗೆ ಒಂದು ಸಣ್ಣ ಕಟ್ಟು ಹುಲ್ಲು ಖರೀದಿಯಾಗುತ್ತದೆ. ಇದರಿಂದ ಬಡ ಕಾರ್ಮಿಕ ಮಹಿಳೆಯರಿಗೆ ಹೆಚ್ಚಿನ ಆರ್ಥಿಕ ಅನೂಕೂಲವಾಗುತ್ತದೆ.
ಕುರಿಗಾಹಿಗಳಿಗೆ ಹೆಚ್ಚಿನ ಧನಲಾಭ:
ಎರಡು ವರ್ಷಕ್ಕೊಮ್ಮೆ ಸಂಭ್ರಮದ ಜಾತ್ರೆ ಮಾಡುವ ಭಕ್ತರಿಗೆ, ಸಂಬಂಧಿಗಳಿಗೆ, ನೆಂಟರಿಗೆ ಭರ್ಜರಿ ‘ಬಾಡೂಟ’ ಹಾಕುವ ಖುಷಿಯಲ್ಲಿ ಅವರ ಆರ್ಥಿಕ ಹೊರೆ ಹೇಳತೀರದು. ಪ್ರತಿಯೊಬ್ಬ ಭಕ್ತರಿಗೆ ಈ ಜಾತ್ರೆ ಆರ್ಥಿಕ ದುಬಾರಿ ಎನಿಸುವುದು. ಪ್ರತಿಯೊಬ್ಬ ಭಕ್ತರು ತಿಂಗಳು ಮುಂಚೆಯೇ ಕುರಿ ಖರೀದಿಗೆ ಮುಂದಾಗುತ್ತಾರೆ. ಗ್ರಾಮೀಣ ನಿವಾಸಿಗಳ ಕುರಿಗಾಹಿತನ ವರ್ಷಗಟ್ಟಲೆ ಕಷ್ಟಪಟ್ಟು ಕುರಿಗಳನ್ನು ಸಾಕಿಸಲುಹುವ ಒಂದು ಉದ್ಯೋಗವಾದರೂ ರೈತರಿಗೂ ಇದರ ಲಾಭವುಂಟು.  ಇವುಗಳ ಗೊಬ್ಬರ ಸತ್ವಯುತ ಉತ್ತಮ ಬೆಳೆಗೆ ಪೂರಕ, ತಮ್ಮ ಕಷ್ಟಗಳಿಗಾಗಿ ಕುರಿ ಮಾರಾಟ ಮಾಡಬೇಕೆಂದರೆ ಸೂಕ್ತ ಮಾರುಕಟ್ಟೆಯ ವ್ಯವಸ್ಥೆ ಇಲ್ಲದೆ ಕುರಿಗಾಹಿಗಳು ಸಂಕಷ್ಟದಲ್ಲಿರುತ್ತಾರೆ. ಇಂತಹ ಬೃಹತ್ ಜಾತ್ರೆಗಳಿಂದ ಕುರಿಗಾಹಿಗಳಿಗೆ ಅತ್ಯಂತ ಲಾಭವುಂಟುಮಾಡುತ್ತದೆ. 15-20 ಸಾವಿರದಿಂದ 50-60 ಸಾವಿರದವರೆಗೂ ಒಂದು ಕುರಿ ಮಾರಾಟವಾಗುತ್ತದೆ. ಈ ಜಾತ್ರೆಗಾಗಿ ಎಷ್ಟು ಕುರಿಗಳು ಖರೀದಿಯಾಗುತ್ತವೆ ಎಂದು ಹೇಳುವುದು ಕಷ್ಟದ ಸಂಗತಿ. ಮನೆಗೆ ಒಂದು ಅಥವಾ ಎರಡು ಕುರಿ – ಖರೀದಿಸುವುದು ನೋಡಿದರೆ ಸಾವಿರ-ಸಾವಿರಗಟ್ಟಲೆ ಖರೀದಿಯಾಗುವುದಂತೂ ಸತ್ಯ. ಕುರಿಗಾಹಿಗಳಿಗೆ ಜಾತ್ರೆಯಿಂದ ಅತ್ಯುತ್ತಮ ಆರ್ಥಿಕ ಲಾಭವಾಗುತ್ತದೆ.
ವ್ಯಾಪಾರಿಗಳಿಗೆ ಆರ್ಥಿಕ ಪ್ರಯೋಜನ:
ನಗರದ ಜಾತ್ರೆಯ ಸಂದರ್ಭದಲ್ಲಿ ಜಾತ್ರೆ ‘ಎರಡು’ ದಿನವಾದರೆ ಆಚರಣೆ ಒಂದು ತಿಂಗಳವರೆಗೆ ಸಣ್ಣ ವ್ಯಾಪಾರಿಗಳ – ಖರೀದಿದಾರರ ಮನೋಲ್ಲಾಸ ಕುಂದದು. ಯಾವುದೇ ಅಂಗಡಿ-ಮುಂಗಟ್ಟನ್ನು ಹಾಕದೆ ದೇವಸ್ಥಾನಕ್ಕೆ ಹೋಗುವ ಹಾದಿ-ಬೀದಿಗಳಲ್ಲೂ ವ್ಯಾಪಾರ ಮಾಡುವ ಜನರಿಗೆ ಸಿಗುವ ಆರ್ಥಿಕ ಲಾಭ ಹೇಳತೀರದು,  ಸಾಮಾನ್ಯ ಒಬ್ಬ ಜೋಗತಿ ತನ್ನ ಪಡಿಗೆಯಲ್ಲಿ ಹರಿಶಿಣ-ಕುಂಕುಮ ಇಟ್ಟುಕೊಂಡು ದೇವಲಾಯಕ್ಕೆ ಬಂದ ಭಕ್ತರಿಗೆ ‘ಉದೋ ಉದೋ’ ಎನ್ನುತ್ತಾ ಭಕ್ತರಿಗೆ ಕುಂಕುಮ ಹಚ್ಚಿ ಕಾಣಿಕೆ ನೀರಿಕ್ಷಿಸುತ್ತಾಳೆ ಹೀಗೆ ಜಾತ್ರೆ ಮುಗಿಯುವದೊರೊಳಗೆ ಆಕೆಯ ದುಡಿಮೆ ವರ್ಷ ಬದಕುವಷ್ಟು ಈ ಜಾತ್ರೆ ನೀಡುತ್ತದೆ. ಮಕ್ಕಳ ಆಟಿಕೆ ಸಾಮಾನುಗಳು, ಕಬ್ಬಿನಹಾಲಿನ ಅಂಗಡಿಗಳು, ಐಸ್‌ಕ್ರೀಮ್ ಮಾರಾಟ, ಬಲೂನು, ಪೀಪಿ, ಕುಂಕುಮ, ಹಣ್ಣು-ಹೂವು, ಎಲಿ, ನಿಂಬೆಹಣ್ಣು ಮರಾಟವಾದರೆ, ತೆಂಗಿನಕಾಯಿ, ಸಿಹಿ ಪದಾರ್ಥ ಅಂಗಡಿಗಳು, ಮಹಿಳೆಯರಿಗಾಗಿಯೇ ಕೆಲವು ವಸ್ತುಗಳು,  ಸ್ಟೇಷನರಿ ಅಂಗಡಿ, ಮಂಡಕ್ಕಿ – ಮೆಣಸಿನಕಾಯಿ, ಬಟ್ಟೆ ಅಂಗಡಿಗಳು, ಕಿರಾಣಿ ಅಂಗಡಿಗಳು, ಕಾಯಿಪಲ್ಲೆ ಅಂಗಡಿಗಳು ಈ ಸಂಭ್ರಮ ಜಾತ್ರೆಯ ಸಂದರ್ಭದಲ್ಲಿ ಲಾಭ ಪಡೆಯಲು ತಮ್ಮ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅತ್ಯತ್ತಮ ಲಾಭದ ಪ್ರಯೋಜನ ಪಡೆಯುತ್ತಾರೆ.  ಇಂತಹ ಜಾತ್ರೆಗಳು ವ್ಯವಹಾರಿಕ ದೃಷ್ಠಿಯಿಂದ ಆರ್ಥಿಕ ಚೈತನ್ಯವನ್ನು ವ್ಯಾಪರಸ್ಥರಿಗೆ ನೀಡುತ್ತವೆ ಎಂದರೆ ತಪ್ಪಾಗದು.
ಜಾತ್ರೆಗಳು ಐಕ್ಯತೆ, ಸೌಹಾರ್ದತೆಯ ಸಂಕೇತ:
ಇಂದಿನ ಕಲುಷಿತ ವ್ಯವಸ್ಥೆಯ ವಾತಾವರಣವು ಜನರಲ್ಲಿ ಜಾತಿ, ಮತ ಮತ್ತು ಧರ್ಮದ ಹೆಸರಿನಲ್ಲಿ ವಿಷಬೀಜ ಬಿತ್ತಿ ಜನರ ಶಾಂತಿ ನೆಮ್ಮದಿ ಹಾಗೂ ಸೌಹಾರ್ದತೆಯನ್ನು ಹಾಳುಗೆಡುವುತ್ತಿರುವ ಈ ಸಂಕೀರ್ಣ ಸಂದರ್ಭದಲ್ಲಿ ಇಂತಹ ಜಾತ್ರೆಗಳು ಜನಮಾನಸದಲ್ಲಿ ಶಾಂತಿ, ನೆಮ್ಮದಿ ಮತ್ತು ಸೌಹಾರ್ದತೆಯನ್ನು ತಂದುಕೊಡುತ್ತವೆ. ಜನರು ತಮ್ಮ ಜಾತಿ, ಮತ, ಧರ್ಮದ ಸಂಕುಚಿತ ಮನೋಭಾವ ತೊರೆದು ಎಲ್ಲರೂ ಒಟ್ಟಿಗೆ ಸೇರಿ, ಒಗ್ಗಟ್ಟಾಗಿ ಜಾತ್ರೆಯ ಉತ್ಸವಗಳನ್ನು ನಡೆಸಲು ಉತ್ಸುಕರಾಗುತ್ತಾರೆ. ನಮ್ಮ ಸಂಪ್ರದಾಯ, ಆಚರಣೆಗಳಲ್ಲಿ ಏನೇ ಅವೈಜ್ಞಾನಿಕತೆ ಕಂಡರೂ, ಜನರು ಸಂತೋಷ, ಸೌಹಾರ್ದತೆಯಿಂದ ಬದುಕು ನಡೆಸಲು ಇಂತಹ ಜಾತ್ರೆಗಳು ಪ್ರೇರಣೆ ನೀಡುತ್ತವೆ. ನಮ್ಮನ್ನು ಒಂದಾಗುವಂತೆ ಪ್ರೇರಪಿಸುತ್ತವೆ. ಜಾತ್ರೆಗೆ ಹೋದಾಗ ಎಲ್ಲರೂ ಪರಸ್ಪರ ಸೌಖ್ಯಗಳನ್ನು, ದುಃಖಗಳನ್ನು ವಿಚಾರಿಸಕೊಳ್ಳುವ ಒಂದು ಉತ್ತಮ ಪರಿಸರವಾಗಿದೆ ಎನ್ನಬಹುದು.
ಜಾತ್ರೆಗಳು ಮನರಂಜನೆಯ ತಾಣಗಳು:
ಜಾತಿ, ಮತ, ಮತ್ತು ವರ್ಗಗಳ ಭೇದವಿಲ್ಲದೆ ಭಾಗವಹಿಸುವ, ಸಮಾನತೆಯನ್ನು ಸಾರುವ ಸಂಗತಿಗಳು ಒಂದಡೆಯಾದರೆ, ಜಾತ್ರೆಗಳಲ್ಲಿ ನಡೆಯುವ ಮನರಂಜನಾ ಕಾರ್ಯಕ್ರಮಗಳು ಬೇಸತ್ತ ಬದುಕಿನಲ್ಲಿ ನೆಮ್ಮದಿ, ಆನಂದ ಮತ್ತು ಸಂತಸವನ್ನು ನೀಡುತ್ತದೆ. ಕೋಳಿ ಪಂದ್ಯ, ಟಗರು ಕಾಳಗ, ಕುಸ್ತಿ ಪಂದ್ಯ, ಕೋಲಾಟ, ಲಾವಣೆ ಪದಗಳು, ಡಪ್ಪಿನ ಆಟ, ಸರ್ಕಸ್, ಸಾಮಾಜಿಕ ನಾಟಕ, ಆರ್ಕೆಸ್ಟ್ರಾ ಸಿನಿಮಾ ತಾರೆಯರ ಮನರಂಜನೆಯ ಕಾರ್ಯಕ್ರಮಗಳು, ಪ್ರಸಿದ್ದ ಗಾಯಕ-ಗಾಯಕಿಯರ ಗಾಯನಗಳು, ಸಂಗೀತ ಸೌರಭವಾಗುತ್ತವೆ. ಹಾಗೂ ಮನರಂಜನೆಯ ಕೇಂದ್ರಗಳಾಗಿ ಎಲ್ಲರನ್ನು ಆಕರ್ಷಿಸುತ್ತವೆ. ಒಟ್ಟಾರೆ ಇಂತಹ ಜಾತ್ರೆಗಳು ವಾರಗಟ್ಟಲೆ, ತಿಂಗಳುಗಟ್ಟಲೇ ಜನರಿಗೆ ಮನರಂಜನೆ ನೀಡುವ ಕೇಂದ್ರಗಳಾಗುತ್ತವೆ.ಅಧಿಕಾರಿ ವರ್ಗದವರಿಗೆ ಬಿಡುವಿಲ್ಲದ ಕೆಲಸ.
ನಗರದಲ್ಲಿ ಒಂದು ತಿಂಗಳು ಜಾತ್ರೆ ನಡೆಯುವಾಗ ಅಲ್ಲಿಗೆ ಲಕ್ಷಾಂತರ ಭಕ್ತರು ಭೆಟ್ಟಿ ನೀಡಿ, ಜಾತ್ರೆಯ ಸಂಭ್ರಮದಲ್ಲಿ ಭಾಗಿಯಾದರೆ ಇನ್ನೊಂದೆಡೆ ಕಾನೂನಿನ ಸುವ್ಯವಸ್ಥೆ, ಕುಡಿಯ ನೀರಿನ ಸೌಲಭ್ಯ, ವಿದ್ಯುತ್ ಪೂರೈಕೆ, ಸಾರಿಗೆ ವ್ಯವಸ್ಥೆ, ಶಾಂತಿ – ಸುವ್ಯವಸ್ಥೆ, ಮಹಿಳಿಯರಿಗೆ – ಮಕ್ಕಳಿಗೆ ರಕ್ಷಣೆ ಮುಂತಾದ ಕಾರ್ಯದಲ್ಲಿ ನಗರದ ಜಿಲ್ಲಾಧಿಕಾರಿಗಳು, ಪೋಲೀಸ್ ಅಧಿಕಾರಿಗಳು, ರೆವೆನ್ಯೂ ಅಧಿಕಾರಿಗಳು, ವಿದ್ಯುತ್ ಇಲಾಖೆಯವರ ಕಷ್ಟ ಹೇಳತೀರದು. ಈ ಜನಜಂಗಳಿಯ ಲಾಭ ಪಡೆಯಲು ಕಳ್ಳಕಾಕರರಿಂದ ರಕ್ಷಣೆ, ಅಪರಾಧವಾಗದಂತೆ ಯಾರ ಜೀವಕ್ಕೆ ತೊಂದರೆ, ಅನಾಹುತ ಆಗದಂತೆ ಕಟ್ಟೆಚ್ಚರವಹಿಸುವುದು ಸಂಬAಧಪಟ್ಟ ಇಲಾಖೆಯವರ ದೊಡ್ಡ ಜವಾಬ್ದಾರಿಯಾಗಿರುತ್ತದೆ.
ಒಟ್ಟಾರೆ ಒಂದು ಜಾತ್ರೆಯು ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಆರ್ಥಿಕ ಆಯಾಮಗಳಿಂದ ಕೂಡಿರುತ್ತದೆ. ಜಾತ್ರೆಯಿಂದ ಕೆಲವರಿಗೆ ಆರ್ಥಿಕ ಲಾಭವಾದರೆ, ಕೆಲವರಿಗೆ ಆರ್ಥಿಕ ನಷ್ಟ ಉಂಟುಮಾಡಬಹುದು.  ನಮ್ಮ ಭಾರತೀಯ ಪರಂಪರೆಯ ಸೊಬಗನ್ನು ಸೂಚಿಸುವುದೇ ಈ ಜಾತ್ರೆಗಳ ವೈಶಿಷ್ಟತೆಯಾಗಿದೆ.
ಡಾ. ಗಂಗಾಧರಯ್ಯ ಹಿರೇಮಠ
ನಿವೃತ್ತ ಪ್ರಾಧ್ಯಾಪಕರು, ದಾವಣಗೆರೆ.
ಮೊ: 9880093613

Leave a Reply

Your email address will not be published. Required fields are marked *

error: Content is protected !!