ಲಂಬಾಣಿ ಸಮಾಜದ ಧರ್ಮಸಭೆಯಲ್ಲಿ ಬಾಡದ ಆನಂದರಾಜಗೆ ಸನ್ಮಾನ! ಶೋಷಿತ ಪರ ನಿಲ್ಲುವುದು ಮುಳ್ಳಿನ ಹಾಸಿಗೆಯಿದ್ದಂತೆ! ಶ್ರೀ ಸೇವಾಲಾಲ್ ಸ್ವಾಮೀಜಿ
![](https://garudavoice.com/wp-content/uploads/2022/06/aanand-1024x768.jpg)
ದಾವಣಗೆರೆ : ಸಮಾಜದಲ್ಲಿ ಶೋಷಣಿಗೆ ಒಳಗಾಗಿರುವ ಸಮೂದಾಯಗಳನ್ನು ಸಂಘಟಿಸುವ ಕೆಲಸ ಮುಳ್ಳಿನ ಹಾಸಿಗೆಯಿದ್ದಂತೆ ಅಂತಹ ಕಷ್ಟದ ಕೆಲಸವನ್ನು ಎರಡು ದಶಕಗಳಿಂದ ಶೋಷಿತರ ಪರವಾಗಿ ನಿಂತಿರುವ ಹೋರಾಟಗಾರ ಬಾಡದ ಆನಂದರಾಜ್ ರವರ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಚಿತ್ರದುರ್ಗದ ಬಂಜಾರ ಪೀಠಾಧ್ಯಕ್ಷರಾದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿಯವರು ಬಾಡದ ಆನಂದರಾಜ್ ರವರನ್ನ ಸನ್ಮಾನಿಸಿ ಮಾತನಾಡಿದರು.
ಇಂದು ನಗರದ ಸರಸ್ವತಿ ಬಡಾವಣೆಯ ಶ್ರೀ ಸೇವಾಲಾಲ್ ಭವನದಲ್ಲಿ ನಡೆದ ಬಂಜಾರ ಸಮೂದಾಯದ ಗುರುಗಳ ಧರ್ಮಸಭೆಯಲ್ಲಿ ಚಿತ್ರದುರ್ಗದ ಬಂಜಾರ ಪೀಠಾಧ್ಯಕ್ಷರಾದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿಯವರು ಬಾಡದ ಆನಂದರಾಜ್ ರವರನ್ನ ಸನ್ಮಾನಿಸಿದರು. ನಮ್ಮಂತಹ ಸಮೂದಾಯಗಳು ಶಿಕ್ಷಣ, ಸಂಘಟನೆ ಮತ್ತು ಹೋರಾಟಗಳಿಂದ ಮಾತ್ರ ಅಭಿವೃದ್ಧಿ ಸಾದ್ಯ. ಸಂವಿದಾನ ಶಿಲ್ಪಿ ಅಂಬೇಡ್ಕರ್ ರವರ ಆಶಯದಂತೆ ನಾವುಗಳು ಬಾಳಬೇಕಾಗಿದೆ ಎಂದು ಆಶೀರ್ವಚನ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾಡದ ಆನಂದರಾಜರವರು ಯಾದವ ಸಮಾಜ ಮತ್ತು ಲಂಬಾಣಿ ಸಮಾಜಗಳು ಇತಿಹಾಸದಲ್ಲಿ ರಾಜರ ಆಡಳಿತ ಹೊಂದಿದ್ದ ಸಮೂದಾಯಗಳು ಅದೇರೀತಿ ನಮ್ಮ ಯಾದವ ಕುಲತಿಲಕ ಶ್ರೀ ಕೃಷ್ಣನಿಗೆ ವಧು ನೀಡಿದ ಲಂಬಾಣಿ ಸಮಾಜ ನಮ್ಮ ನಿಮ್ಮ ನಡುವಳಿಕೆಗಳು ಕೂಡ ಅವಿನಾಭಾವ ಸಂಭಂದಗಳಿವೆ ಎಂದು ಹೇಳುತ್ತಾ ದೇಶದ ಶಕ್ತಿ ಕೇಂದ್ರವಾಗಿರುವ ರಾಜಕೀಯ ಕ್ಷೇತ್ರದಲ್ಲಿ ಶೋಷಿತ ವರ್ಗಗಳು ಮುಖ್ಯವಾಹಿನಿಗೆ ಸತತ ಪ್ರಯತ್ನಪಡಬೇಕಾಗಿದೆ ಎಂದು ಕರೆ ನೀಡಿದರು.
ಈ ಸಭೆಯಲ್ಲಿ ಶ್ರೀ ಹಾತೀರಾಮ್ ಬಾವಾಜಿ ರಾಜ್ಯ ಬಂಜಾರ ಸಂಘದಾಧ್ಯಕ್ಷರಾದ ಧರ್ಮನಾಯ್ಕ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಯ್ಕ್, ಗುತ್ತಿಗೆದಾರ ವೆಂಕಟೇಶ್ ನಾಯ್ಕ್, ಲಂಬಾಣಿ ಸಮಾಜದ ಹಿರಿಯ ಮುಖಂಡ ಹಾಲೇಕಲ್ಲು ಚಂದ್ರನಾಯ್ಕ್, ಕುಬೇರನಾಯ್ಕ್, ಎಸ್.ಎಸ್.ನಾಯಕ್ ಇನ್ನೂ ಮುಂತಾದವರಿದ್ದರು.