green city: ಹಸಿರು ನಗರವಾಗಿಸಲು ಎಲ್ಲರೂ ಶ್ರಮಿಸಿ: ಸುರೇಶ್ .ಬಿ. ಇಟ್ನಾಳ್

ದಾವಣಗೆರೆ, ಆ. 17: ಮರ, (Tree)  ಗಿಡಗಳನ್ನು ನೆಡುವುದಷ್ಟೇ ಅಲ್ಲದೇ ನಿರ್ವಹಣೆಯು ಕೂಡ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಆಗ ಮಾತ್ರ ಮುಂದಿನ ದಿನಗಳಲ್ಲಿ ದಾವಣಗೆರೆಯನ್ನು ಹಸಿರು ನಗರ (Green City)ವನ್ನಾಗಿಸಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್.ಬಿ.ಇಟ್ನಾಳ್ ತಿಳಿಸಿದರು.

ಗುರುವಾರ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಮೆ.ಕಾರ್ಗಿಲ್ ಇಂಡಿಯಾ ಪ್ರೈ.ಲಿ. ಬೆಳ್ಳೂಡಿ ಇವರ ಸಹಯೋಗದೊಂದಿಗೆ ನಗರದ ತುಂಗಭದ್ರ ಬಡಾವಣೆ ಭಾಗ-೧, ಕೆ.ಹೆಚ್.ಬಿ ಕಾಲೋನಿ ಎದುರುಗಡೆ, ಕುಂದವಾಡ ಗ್ರಾಮದ ಭೂ ಪ್ರದೇಶದಲ್ಲಿ ಜರುಗಿದ ಎರಡನೇ ಹಂತದ ವನಮಹೋತ್ಸವದ (Vanamahotsava) ಅಂಗವಾಗಿ 2000 ಸಸಿ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾನವನ ಅಭಿವೃದ್ಧಿಯ ಹಂಬಲದಿಂದ ಪರಿಸರದ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಬೀರುತ್ತಿವೆ. ಇದನ್ನು ತಡೆಗಟ್ಟಲು ಅರಣ್ಯ ಪ್ರದೇಶ ಹೆಚ್ಚಿಸಲು ಮರ, ಗಿಡ ಬೆಳೆಸಬೇಕಾಗಿದೆ.

ಜಿಲ್ಲೆಯಲ್ಲಿ ಕೇವಲ ಶೇ.12 ಪ್ರತಿಶತ ಅರಣ್ಯ (Forest) ಭೂ ಪ್ರದೇಶವಿದೆ. ಮಾನದಂಡದಂತೆ ಶೇ.33 ಪ್ರತಿಶತ ಅರಣ್ಯವಿರಬೇಕು. ಇದಕ್ಕಾಗಿ ಪ್ರಸಕ್ತ ವರ್ಷ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ 6.4 ಲಕ್ಷ ಸಸಿಗಳನ್ನು ಬೆಳೆಸಿ, 4 ಕಡೆ ಮಿಯಾವಾಕಿ ಅರಣ್ಯ ನಿರ್ಮಿಸಿ, ಅವುಗಳ ನಿರ್ವಹಣೆಗೂ ಕೂಡ ಅನುದಾನ ನೀಡಲಾಗಿದೆ.

ಜಿಲ್ಲಾ ಪಂಚಾಯತ್ ವತಿಯಿಂದ ಗ್ರಾಮೀಣ ಭಾಗದಲ್ಲಿ ಮಾತ್ರ ಗಿಡಗಳನ್ನು ನೆಡಲು ಅನುದಾನ ಬಿಡುಗಡೆಯಾಗುತ್ತಿದ್ದು ನಗರ ಪ್ರದೇಶಗಳಿಗೆ ಅನ್ವಯಿಸುವುದಿಲ್ಲ, ಈಗಾಗಲೇ ಗೋಮಾಳಗಳ ಅಭಿವೃದ್ಧಿ, ರಸ್ತೆ ಬದಿಗಳಲ್ಲಿ ಗಿಡ ನೆಡುವುದು ಹಾಗೂ ಶಾಲಾ ಮೈದಾನಗಳಲ್ಲಿ ಗಾರ್ಡನ್‌ಗಳನ್ನು (Garden) ಕೂಡ ನಿರ್ಮಿಸಲಾಗುತ್ತಿದೆ ಎಂದರು.

ಆಗಸ್ಟ್.31 ರಂದು ನುಲಿಯ ಚಂದಯ್ಯ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಜಯಂತಿ

ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯು ಒಂದು ಕಾಲದಲ್ಲಿ ಮನೆಗಳಿಗಿಂತ ಮರಗಳೇ ಹೆಚ್ಚು ಕಾಣುವಂತಹ ನಗರವಾಗಿತ್ತು. ನಂತರ ಅಭಿವೃದ್ಧಿಯ ಹಿಂದೆ ಬಿದ್ದಂತಹ ಜನರು ಕ್ರಮೇಣ ಇದರಿಂದ ವಿಮುಖರಾಗಿ, ಮನೆ, ಬಡಾವಣೆ, ಕಾಂಕ್ರೀಟ್ ರಸ್ತೆ ನಿರ್ಮಾಣವೆಂದು ಪರಿಸರ ನಾಶವಾಗುತ್ತಿದೆ. ಎಲ್ಲರೂ ಒಟ್ಟಾಗಿ ಕೈ ಜೋಡಿಸಿ, ಮನೆಯ ಸುತ್ತ ಮುತ್ತ ಗಿಡಗಳನ್ನು ನೆಟ್ಟು ಬೆಳೆಸಿದಾಗ ಮಾತ್ರ ಮುಂದಿನ ದಿನಗಳಲ್ಲಿ ದಾವಣಗೆರೆಯನ್ನು ಹಸಿರು ನಗರವನ್ನಾಗಿಸಲು ಸಾಧ್ಯ ಎಂದರು.

ಚಿತ್ರದುರ್ಗದ ಹಿರಿಯ ಪರಿಸರ ಅಧಿಕಾರಿ ರಮೇಶ ಡಿ. ನಾಯಕ್, ಜಿಲ್ಲಾ ಪರಿಸರ ಅಧಿಕಾರಿ ಡಾ. ಹೆಚ್. ಲಕ್ಷ್ಮಿಕಾಂತ, ಮೆ.ಕಾರ್ಗಿಲ್ ಇಂಡಿಯಾ ಪ್ರೈ.ಲಿ ಬೆಳ್ಳೂಡಿ ಯುಟಿಲಿಟಿ ಮ್ಯಾನೇಜರ್ ವೆಂಕಟೇಶ್ ಭಟ್, ಡಿ.ಎಸ್.ಒ ಮಂಜುನಾಥ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!