Raksha Bandhan; ಬೆಣ್ಣೆ ನಗರಿಯಲ್ಲಿ ರಂಗೇರಿದ ರಕ್ಷಾ ಬಂಧನ!

ದಾವಣಗೆರೆ, ಆ.30: ರಕ್ಷಾ ಬಂಧನ (Raksha Bandhan) ಅಂದ್ರೆ ಸಾಕು ಹೆಣ್ಣುಮಕ್ಕಳಿಗೆ ಖುಷಿಯ ಹಬ್ಬ, ಈ ಹಬ್ಬದ ನೆಪದಲ್ಲಾದರೂ ತನ್ನ ಸಹೋದರನನ್ನು ನೆನೆಯುವುದು ವಾಡಿಕೆ. ಅದಕ್ಕಾಗಿ ಒಂದು ವಾರದಿಂದ ಯಾವ ತರಹದ ರಾಖಿ ತರಬೇಕೆಂದು ಹೆಣ್ಣು ಮಕ್ಕಳು ಅಂಗಡಿ ಸುತ್ತುತ್ತಾರೆ..ಅಂತೆಯೇ ಬೆಣ್ಣೆ ನಗರಿಯಲ್ಲಿಯೂ ಸಹ ರಕ್ಷಾ ಬಂಧನಕ್ಕೆ ಸಕಲ ತಯಾರಿ ನಡೆಯುತ್ತಿದ್ದು, ತರಹೇವಾರಿ ರಾಖಿ ಹುಡುಕಲು ಸಹೋದರಿಯರು ಅಂಗಡಿಗೆ ದೌಡಾಯಿಸುತ್ತಿದ್ದಾರೆ.

ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ರಕ್ಷಾಬಂಧನವನ್ನು ಅದ್ದೂರಿಯಾಗಿ ಆಚರಿಸಲು ಕೆಲವೇ ಕ್ಷಣಗಳು ಬಾಕಿ ಇದ್ದು, ಕಲರ್ ಪುಲ್ ರಾಖಿಗಳು ಅಂಗಡಿಗೆ ದಾಂಗುಡಿ ಇಟ್ಟಿವೆ. ಅದರಲ್ಲೂ ಹಳೆ ದಾವಣಗೆರೆ ಮಾರ್ವಾಡಿ ಅಂಗಡಿಗಳಲ್ಲಿ ರಾಖಿ ಖರೀದಿಸಲು ಮಹಿಳೆಯರು ದೌಡಾಯಿಸುತ್ತಿದ್ದಾರೆ.

ಅಣ್ಣ ತಂಗಿಯ ಜೀವನದ ಒಂದು ಉತ್ತಮ ಪ್ರೀತಿಯ ಸಂಕೇತ ರಾಖಿ ಹಬ್ಬವಾಗಿದ್ದು, ಒಬ್ಬರನ್ನು ಪರಸ್ಪರ ರಕ್ಷಣೆ ಮಾಡುವ ಮನಸ್ಸನ್ನು ಹೊಂದಿರುತ್ತಾರೆ. ರಕ್ಷಾ ಬಂಧನ ಪ್ರಾಚೀನ ಕಾಲದಿಂದ ಪ್ರಾಮುಖ್ಯತೆ ಹೊಂದಿದ್ದು, ಶ್ರಾವಣ ಮಾಸದಲ್ಲಿ ಆಚರಿಸುವ ಒಂದು ಹಬ್ಬವಾಗಿದೆ. ಆ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುವುದು ವಾಡಿಕೆ.

ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯವನ್ನು ಬಲಪಡಿಸುವ ಹಬ್ಬ ರಕ್ಷಾ ಬಂಧನವಾಗಿದೆ. ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಪ್ರತಿ ಸಹೋದರಿಯು ಪ್ರತಿವರ್ಷ ತನ್ನ ಸಹೋದರರ ಮಣಿಕಟ್ಟಿನ ಮೇಲೆ ‘ರಾಖಿ’ಎಂದು ಕರೆಯಲ್ಪಡುವ ಪವಿತ್ರ ದಾರವನ್ನು ಕಟ್ಟಲು ಕಾಯುತ್ತಾಳೆ.

Ganesh Chaturthi; ಪ್ಲಾಸ್ಟರ್ ಗಣೇಶ ವಿಗ್ರಹಗಳನ್ನು ನೀರಿನ ಮೂಲಗಳಲ್ಲಿ ವಿಸರ್ಜಿಸುವಂತಿಲ್ಲ

ದಂತಕತೆಯಲ್ಲಿ ಹೇಳುವುದೇನು?

ದಂತಕತೆಗಳ ಪ್ರಕಾರ ಅಲೆಕ್ಸಾಂಡರನು ಭಾರತದ ಮೇಲೆ ದಂಡೆತ್ತಿ ಬಂದಾಗ ಅವನನ್ನು ಧೈರ್ಯದಿಂದ ಎದುರಿಸಿದವನು ಪೋರಸ್. ಆಗ ಅವರಿಬ್ಬರ ನಡುವೆ ಯುದ್ಧ ಆರಂಭಗೊಂಡಿತು. ಇದೇ ಸಮಯದಲ್ಲಿ ಅಲೆಕ್ಸಾಂಡರನ ಪತ್ನಿ ರೊಕ್ಸಾನಳು ಪೋರಸ್ ಗೆ ಒಂದು ಪವಿತ್ರ ದಾರವನ್ನು (ರಾಖಿ) ಕಳುಹಿಸಿದಳು. ಅದರ ಜೊತೆಗೆ ಒಂದು ಮನವಿ ಸಹ ಇತ್ತು. ತನ್ನ ಪತಿಯನ್ನು ಕೊಲ್ಲದಿರುವಂತೆ ಕೇಳಿಕೊಂಡ ಮನವಿ ಅದಾಗಿತ್ತು. ಮುಂದೆ ನಡೆದ ಯುದ್ಧದಲ್ಲಿ ಪೋರಸ್ ಅಲೆಕ್ಸಾಂಡರನನ್ನು ಕೊಲ್ಲದೆ ಉಳಿಸಿದನು. ಇದಕ್ಕೆ ಕಾರಣ ಆತನ ಕೈಯಲ್ಲಿ ಆತ ಕಟ್ಟಿಕೊಂಡಿದ್ದ ರಾಖಿ ಅವನನ್ನು ತಡೆದು ನಿಲ್ಲಿಸಿತ್ತು.

ಮತ್ತೊಂದು ಘಟನೆಯಲ್ಲಿ ಚಿತ್ತೂರಿನ ರಾಣಿ ಕರ್ಣಾವತಿಯು ಗಂಡನನ್ನು ಕಳೆದುಕೊಂಡು ವೈಧವ್ಯದ ಜೀವನ ನಡೆಸುತ್ತಿದ್ದಳು. ಆಗ ಆಕೆಯು ಚಕ್ರವರ್ತಿ ಹುಮಾಯುನನಿಗೆ ರಾಖಿಯನ್ನು ಕಳುಹಿಸಿದಳು. ಇದಕ್ಕೆ ಕಾರಣ ಚಕ್ರವರ್ತಿ ಬಹದ್ದೂರ್ ಷಾನು ಈಕೆಯ ರಾಜ್ಯದ ಮೇಲೆ ದಂಡೆತ್ತಿ ಬರುವ ನಿರ್ಧಾರಕ್ಕೆ ಬಂದಿದ್ದನು. ಆಗ ಆಕೆಯು ಹುಮಾಯೂನನ ಸಹಾಯವನ್ನು ಬಯಸಿ ರಾಖಿಯನ್ನು ಕಳುಹಿಸಿದ್ದಳು. ಇದನ್ನು ಮುಟ್ಟುವ ಮೂಲಕ ಸ್ವೀಕರಿಸಿದ ಹುಮಾಯೂನನು ತನ್ನ ಸೇನೆಯನ್ನು ರಾಣಿ ಕರ್ಣಾವತಿಯ ಸಹಾಯಕ್ಕೆ ಧಾವಿಸುವಂತೆ ಸೂಚಿಸಿದನು. ಆದರೆ ಸೈನ್ಯವು ಅಲ್ಲಿಗೆ ತಲುಪಲು ತಡವಾಯಿತು. ಇದೇ ವೇಳೆಗೆ ರಾಣಿ ಕರ್ಣಾವತಿಯು ಇತರೆ ಹೆಂಗಸರೊಂದಿಗೆ ಕೂಡಿ, ತನ್ನ ಮಾನ ರಕ್ಷಣೆಗಾಗಿ ಜೌಹರ್ ಮಾಡಿಕೊಳ್ಳುವ ಮೂಲಕ ಪ್ರಾಣ ತ್ಯಾಗ ಮಾಡಿದ್ದಳು. ಮುಂದೆ ಬಹದ್ದೂರ್ ಷಾನನ್ನು ಹುಮಾಯೂನ್ ಹೊರಗೆ ಹಾಕಿ, ಕರ್ಣಾವತಿಯ ಮಗ ವಿಕ್ರಮಜೀತನನ್ನು ಸಿಂಹಾಸನದಲ್ಲಿ ಕೂರಿಸಿದ್ದನು ಎಂಬುದನ್ನು ಇತಿಹಾಸ ಹೇಳುತ್ತದೆ.

vachana; ಹಳ್ಳಿಮಕ್ಕಳಿಗೆ ವಚನ ನೃತ್ಯವನ್ನು ಮಾಡಿಸಬೇಕು: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ರಕ್ಷಾ ಬಂಧನದ ಅರ್ಥ

ರಕ್ಷಾ ಬಂಧನ ರಕ್ಷೆ (ರಕ್ಷಣೆ) ಹಾಗೂ ಬಂಧನ (ಸಂಬಂಧ) ಎಂಬ ಎರಡು ಪದಗಳಿಂದ ಕೂಡಿದೆ. ಪ್ರಸ್ತುತ, ಈ ಹಬ್ಬವು ಸಹೋದರ-ಸಹೋದರಿಯರ ನಡುವಿನ ಪ್ರೀತಿ ಮತ್ತು ಬಂಧದ ಸಮಾನಾರ್ಥಕವಾಗಿದೆ ಮತ್ತು ಇದು ಸಹೋದರಿ ಮತ್ತು ಸಹೋದರರ ನಡುವಿನ ಪ್ರೀತಿಯನ್ನು ಬಲಪಡಿಸುವ ಮತ್ತು ಪುನರುಚ್ಚರಿಸುವ ಉತ್ಸವವಾಗಿದೆ. ಒಂದು ಕಡೆ, ಸಹೋದರನು ತನ್ನ ಸಹೋದರಿಯನ್ನು ನೋಡಿಕೊಳ್ಳುವುದಾಗಿ ಮತ್ತು ತನ್ನ ಜೀವನಪರ್ಯಂತ ಅವಳನ್ನು ರಕ್ಷಿಸುವುದಾಗಿ ಭರವಸೆ ನೀಡುತ್ತಾನೆ. ಮತ್ತೊಂದೆಡೆ, ಸಹೋದರಿ ತನ್ನ ಸಹೋದರನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾಳೆ. ಇನ್ನು ಮನೆಯಲ್ಲಿ ಒಬ್ಬಳೇ ಹೆಣ್ಣು ಮಗಳಿದ್ದರೆ ಅಥವಾ ಸಹೋದರನನ್ನು ಹೊಂದಿರದಿದ್ದರೆ ಸಾಮಾನ್ಯವಾಗಿ ಸೋದರ ಸಂಬಂಧಿ ಅಥವಾ ಅವಳು ತನ್ನ ಸಹೋದರ ಎಂದು ಹೇಳಿಕೊಳ್ಳುವ ಯಾರೊಂದಿಗಾದರೂ ಆಚರಣೆಗಳನ್ನು ಮಾಡುತ್ತಾರೆ. ಈ ಹಬ್ಬವು ಒಡಹುಟ್ಟಿದವರು ಒಟ್ಟಿಗೆ ಬೆಳೆಯುವ ಮಹತ್ವವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ.

ಪ್ರತಿ ಬಾರಿಯಂತೆ ಈ ಬಾರಿಯೂ ರಾಖಿ ಹಬ್ಬದ ವ್ಯಾಪಾರ ಜೋರಾಗಿದೆ, ಒಂದು ರೂಪಾಯಿಯಿಂದ ಸಾವಿರ ರೂಪಾಯಿ ತನಕ ರಾಖಿ ಇದೆ. ಅವರಿಗೆ ಇಚ್ಚೇನುಸಾರ ರಾಖಿ ಖರೀದಿ ನಡೆಯುತ್ತಿದೆ. ಪ್ರತಿ ದಿನ ಒಂದು ಅಂಗಡಿಯಲ್ಲಿ ಹತ್ತರಿಂದ ಮೂವತ್ತು ಸಾವಿರ ವ್ಯಾಪಾರ ನಡೆಯುತ್ತಿದೆ. ಅದರಲ್ಲೂ ವೋಲ್ ಸೇಲ್ ದರದಲ್ಲಿ ಹೆಚ್ಚು ರಾಖಿಗಳನ್ನು ಚಿಲ್ಲರೇ ಅಂಗಡಿ ಮಾಲೀಕರು ತೆಗೆದುಕೊಂಡು ಹೋಗುತ್ತಿದ್ದಾರೆ. ಅಂಗಡಿಗಳಲ್ಲಿ ವಿವಿಧ ವಿನ್ಯಾಸದಲ್ಲಿರುವ ಚಿತ್ತಾಕರ್ಷಕ ಹಾಗೂ ಫ್ಯಾನ್ಸಿ ರಾಖಿಗಳು ಹಳೆ ದಾವಣಗೆರೆ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಮಾರುಕಟ್ಟೆ ಪ್ರದೇಶದಲ್ಲಿ ಕಾಲಿಟ್ಟರೆ ಸಾಕು ಪ್ರತಿಯೊಂದು ಅಂಗಡಿಗಳಲ್ಲಿ ನೂರಾರು ಬಗೆಯ ರಾಖಿಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಮಂಡಿಪೇಟೆ, ಚೌಕಿಪೇಟೆ, ಗಡಿಯಾರ ಕಂಬ, ಗುಂಡಿ ಸರ್ಕಲ್, ಎವಿಕೆ ಕಾಲೇಜ್ ರೋಡ್ ಸೇರಿದಂತೆ ವಿವಿಧ ಅಂಗಡಿ ಮುಗ್ಗಟ್ಟುಗಳಲ್ಲಿ ಅಷ್ಟೇ ಅಲ್ಲದೇ ರಸ್ತೆ ಬದಿ ತಳ್ಳುಗಾಡಿಗಳಲ್ಲಿಯೂ ಸಹ ರಾಖಿ ಮಾರಾಟ ಭರ್ಜರಿಯಾಗಿ ನಡೆದಿದೆ. ಇನ್ನೂ ಕೆಲವೆಡೆಗಳಲ್ಲಿ ಹಬ್ಬದ ನಿಮಿತ್ತ ರಸ್ತೆ ಮೇಲೆ ಅಂಗಡಿ ತೆರೆಯಲಾಗಿದೆ. ರಸ್ತೆ ಮೇಲೆ ಟೆಂಟ್ ಹಾಕಿ ತಳ್ಳುಗಾಡಿಗಳಲ್ಲಿ ರಾಖಿ ಖರೀದಿಸುವಲ್ಲಿ ಮಹಿಳೆಯರು ಮುಗಿ ಬಿದ್ದಿದ್ದಾರೆ.

ತರಹೇವಾರಿ ರಾಖಿ

ಮಾರುಕಟ್ಟೆಯಲ್ಲಿ ಕಾಲಕ್ಕೆ ತಕ್ಮಂತೆ ರಾಖಿಗಳ ವಿನ್ಯಾಸವೂ ಬದಲಾಗಿದೆ. ಈ ಬಾರಿ ಮಾರುಕಟ್ಟೆಯಲ್ಲಿ ಶ್ರೀ, ಓಂಕಾರ, ಭಾರತ್‌,ರಾಜಶ್ರೀ, ಗಣೇಶ, ರಾಧಾ-ಕೃಷ್ಣಾ, ಗೋಪಾಲ, ಜಿಆರ್ ಬಿ, ರಾಮದೇವ, ಶುಭ, ರುಚಿ, ಸಾಚಿ, ಯಮ್ಮಾರ, ಎಂಎ ಸ್ಪೆಶಲ್, ಸುಜ್, ಬೆಳ್ಳಿ ಹಾಗೂ ಬಂಗಾರ ಲೇಪಿತ, ರೇಷ್ಮೆ ದಾರ, ಮುತ್ತಿನ ರಾಖಿ, ವೆಲ್ವಟ್, ದೇವರಮೂರ್ತಿ ಒಳಗೊಂಡ ರಾಖಿ, ಮುತ್ತು, ಹವಳ, ಮೆಟಲ್‌, ಹಿತ್ತಾಳೆ, ಚಿನ್ನ, ಬೆಳ್ಳಿ ಲೇಪಿತ, ಸ್ಪಂಜ್, ಕಸೂತಿ, ಮಣಿ ಜೋಡಣೆ, ಕ್ರಿಸ್ಟಲ್, ಸ್ಟೋನ್ಸ್, ಝರದೋಸಿ ಹಾಗೂ ಥರ್ಮಾಕೋಲ್ ನಿಂದ ತಯಾರಿಸಿದ ಮತ್ತು ಮಕ್ಕಳಿಗೆ ವಿಶೇಷ ರಾಖಿಗಳು ಗಮನ ಸೆಳೆಯುವುದರೊಂದಿಗೆ ಆಕರ್ಷಣೀಯವಾಗಿವೆ.

ರಾಮದೇವ್ ರಾಖಿಗಳು ಸಿಲ್ವರ್‌ ಕೋಟ್‌ನಲ್ಲಿ ತಯಾರಿಸಲ್ಪಟ್ಟಿವೆ. ಶುಭಂ, ರುಚಿ, ಎಂಆರ್, ಎಂಎ ರಾಖಿಗಳು ಫ್ಯಾನ್ಸಿಯಲ್ಲಿವೆ. ಇವುಗಳಲ್ಲಿಯೂ ಶ್ರೀ, ಭಾರತ, ರಾಜಶ್ರೀ, ಗೋಪಾಲ, ರಾಧಾ ರಾಖಿಗಳು ಹವಳ ಮತ್ತು ಮುತ್ತುಗಳಿಂದ ಕೂಡಿವೆ. ಕೆಂಪು, ಹಳದಿ, ಕೇಸರಿ, ನೀಲಿ, ಬೀಳಿ, ಗುಲಾಬಿ ಸೇರಿದಂತೆ ವಿವಿಧ ಬಣ್ಣದ ಮುತ್ತುಗಳಿಂದ ಅಲಂಕೃತ ರಾಖಿಗಳು ಸಿಗುತ್ತಿವೆ.

ರಾಖಿಗಳ ಬೆಲೆಯೂ ಸಾಮಾನ್ಯ ಜನರಿಂದ ಹಿಡಿದು ಶ್ರೀಮಂತರ ಅಗತ್ಯಕ್ಕನುಗುಣವಾದ ಬೆಲೆಯಿದೆ. ಕೆಲವು ಫ್ಯಾನ್ಸಿ ಸ್ಟೋರ್ ಗಳಲ್ಲಿ ರಾಖಿಗಳ ಮಾರಾಟಕ್ಕೆಂದು ತೆರೆದ ವಿಶೇಷ ಕೌಂಟರ್‌ಗಳಲ್ಲಿ ರಾಖಿಗಳ ಮಾರಾಟ ಭರದಿಂದ ಸಾಗಿದೆ. ಒಟ್ಟಾರೆ ರಕ್ಷಾ ಬಂಧನ ರಂಗೇರಿದೆ.

Leave a Reply

Your email address will not be published. Required fields are marked *

error: Content is protected !!