reservation; ಲೋಕಸಭೆ ಚುನಾವಣೆಯೊಳಗೆ 2ಎ ಮೀಸಲಾತಿ ಸಿಗಬೇಕು: ಶ್ರೀಗಳು ಎಚ್ಚರಿಕೆ
![](https://garudavoice.com/wp-content/uploads/2023/10/reservation-1024x768.jpg)
ದಾವಣಗೆರೆ, ಅ.04: 2024ರ ಲೋಕಸಭೆ ಚುನಾವಣೆಯೊಳಗೆ 2ಎ ಮೀಸಲಾತಿ (reservation) ಸಿಗಬೇಕು ಎಂದು ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಶ್ರೀಗಳು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹೋರಾಟ ನಿರಂತರವಾಗಿ ನಡೆಯುತ್ತಿದೆ. ಈ ಸರ್ಕಾರ ಬರಲು ಪಂಚಮಸಾಲಿಗಳ ಆಶೀರ್ವಾದವಿದೆ. ಇದು ಜಗತ್ತಿಗೆ ಗೊತ್ತಿದೆ. ನಮ್ಮ ಸಮಾಜದ ಋಣವನ್ನ ಸರ್ಕಾರ ತೀರಿಸುವ ಕೆಲಸ ಮಾಡಬೇಕಿದೆ. 2024ರ ಲೋಕಸಭೆ ಚುನಾವಣೆಯೊಳಗೆ ಆ ಕೆಲಸವಾಗಬೇಕು. ಹಾಗಾಗಿ ದಾವಣಗೆರೆಯಲ್ಲಿಯೂ ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆಯುತ್ತೇವೆ. ನಮ್ಮ ಸಮಾಜದಲ್ಲಿ 11 ಜನ ಶಾಸಕರು, ಇಬ್ಬರು ಮಂತ್ರಿಗಳಾಗಿದ್ದಾರೆ. ಇಷ್ಟಕ್ಕೆ ನಮ್ಮ ಸಮಾಜ ತೃಪ್ತರಾಗಿಲ್ಲ. ನಮಗೆ 2ಎ ಮೀಸಲಾತಿ ಬೇಕಿದೆ ಎಂದರು.
ಮುಖ್ಯಮಂತ್ರಿಯಾಗಿದ್ದಾಗ ಬಸವರಾಜ್ ಬೊಮ್ಮಾಯಿ ಅವರು ಕೊಟ್ಟ ಭರವಸೆ ಈಡೇರಲಿಲ್ಲ. ಆಗ ಸರ್ಕಾರದ ಮಟ್ಟದಲ್ಲಿ ನಮ್ಮವರೂ ಇದ್ದರೂ ಕಾರ್ಯರೂಪಕ್ಕೆ ಬರಲಿಲ್ಲ. ಕೊನೆ ಗಳಿಗೆಯಲ್ಲಿ ಮೀಸಲಾತಿ ಘೋಷಿಸಿದರೂ ಉಪಯೋಗಕ್ಕೆ ಬರಲಿಲ್ಲ. ವಿಧಾನಸಭೆ ಚುನಾವಣೆ ಬಂದ ಕಾರಣ ಬೇಡಿಕೆ ಈಡೇರಲಿಲ್ಲ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದು, ನಮ್ಮ ಶಕ್ತಿ ಪ್ರದರ್ಶಿಸಬೇಕಿದೆ ಎಂದು ಹೇಳಿದರು.
Milk Union; ಪ್ರತ್ಯೇಕ ಹಾಲಿನ ಒಕ್ಕೂಟಕ್ಕೆ ಚಿಗೂರೊಡೆಯುತ್ತಿರುವ ಕನಸು; 40 ಸಾವಿರ ಸಬ್ಸಿಡಿಗೆ ಸಚಿವರ ಭರವಸೆ
ನಾವು ಸಂಘಟಿತರಾಗಿ ಹೋರಾಟ ಮಾಡಿದರೆ ಮಾತ್ರ ನಮ್ಮ ಹಕ್ಕು ಪಡೆಯಬಹುದು. ಆಗ ರಾಜ್ಯದ ಮೂಲೆ ಮೂಲೆಗಳಿಂದಲೂ ನಮ್ಮ ಹೋರಾಟಕ್ಕೆ ಬೆಂಬಲ ದೊರಕಿತ್ತು. ಈಗ ರಾಜ್ಯ ಸರ್ಕಾರವು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡದಿದ್ದರೆ ಅನಿವಾರ್ಯವಾಗಿ ಹೋರಾಟಕ್ಕೆ ಇಳಿಯಲೇಬೇಕಾಗುತ್ತದೆ. ಈ ಹಿಂದೆ ನೀಡಿದಂತೆ ಈ ಬಾರಿಯೂ ಬೆಂಬಲಿಸಿ. ನಾವೆಲ್ಲರೂ ಒಟ್ಟಾದರೆ ನಮ್ಮ ಹಕ್ಕು ಪಡೆಯುವುದು ಕಷ್ಟಸಾಧ್ಯವಾಗದು ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
2ಎ ಮೀಸಲಾತಿ ಸಿಗುವವರೆಗೆ ಹೋರಾಟ ನಿಲ್ಲದು. ಕೃಷಿಯನ್ನೇ ಹೆಚ್ಚಾಗಿ ಅವಲಂಬಿಸಿರುವ ಸಮಾಜ ನಮ್ಮದು. ಸಮಾಜಕ್ಕೆ ನ್ಯಾಯ ಸಿಗಲೇಬೇಕು. ಇದಕ್ಕಾಗಿ ಎಂತಹ ಹೋರಾಟಕ್ಕಾದರೂ ನಾನು ಸಿದ್ಧನಿದ್ದೇನೆ. ಸಮಾಜಕ್ಕೆ 2ಎ ಮೀಸಲಾತಿ ದೊರೆತರೆ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಬಲ ಸಿಗುತ್ತದೆ. ನಮ್ಮ ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ. ನಾವೆಲ್ಲರೂ ಒಟ್ಟಾಗೋಣ, ಮೀಸಲಾತಿ ಪಡೆದೇ ತೀರುತ್ತೇವೆ ಎಂಬ ಶಪಥ ಮಾಡೋಣ ಎಂದು ಕರೆ ನೀಡಿದರು.