ಶಬರಿಮಲೆ ಹಾಗೂ ಓಂಶಕ್ತಿ ಯಾತ್ರೆಗೆ ಹೋಗಿಬಂದವರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಸೂಚನೆ

ದಾವಣಗೆರೆ: ಇತ್ತೀಚೆಗೆ ದಾವಣಗೆರೆ ಜಿಲ್ಲೆಯಿಂದ ಕೇರಳ ರಾಜ್ಯದ ಶಬರಿಮಲೆ ಹಾಗೂ ತಮಿಳುನಾಡಿನ ಓಂಶಕ್ತಿ ಯಾತ್ರೆಗೆ ಹೋಗಿಬಂದವರು ಕೂಡಲೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ಮನವಿ ಮಾಡಿದ್ದಾರೆ.
ಕೋವಿಡ್ ಸೋಂಕು ದಿನೇ ದಿನೇ ಏರಿಕೆ ಪ್ರಮಾಣದಲ್ಲಿದ್ದು, ಹೊರ ರಾಜ್ಯದಿಂದ ಜಿಲ್ಲೆಗೆ ಆಗಮಿಸಿದವರು, ಅದರಲ್ಲೂ ಪ್ರಮುಖವಾಗಿ ಕೇರಳ ರಾಜ್ಯದ ಶಬರಿಮಲೆ ಹಾಗೂ ತಮಿಳುನಾಡಿನ ಓಂಶಕ್ತಿ ಯಾತ್ರೆಗೆ ಹೋಗಿಬಂದವರು ಕೂಡಲೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು, ಈ ಮೂಲಕ ಸೋಂಕು ತಮ್ಮ ಕುಟುಂಬ ಸದಸ್ಯರಿಗೆ ಹಾಗೂ ಸಮುದಾಯಕ್ಕೆ ಹರಡುವುದನ್ನು ತಡೆಗಟ್ಟಲು ಸಹಕರಿಸಬೇಕು.

ಮುಂಚೂಣಿ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು, ಪೊಲೀಸ್, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್, ಅಗ್ನಿಶಾಮಕ ದಳ, ಮಹಾನಗರಪಾಲಿಕೆ ಸಿಬ್ಬಂದಿ ಅಲ್ಲದೆ ಕೆಪಿಎಂಇ ಅಡಿ ಬರುವ ಎಲ್ಲ ಸಿಬ್ಬಂದಿಗಳು, ವೈದ್ಯರು, ನರ್ಸ್‍ಗಳು ಸೇರಿದಂತೆ ಎಲ್ಲ ಅರ್ಹ ಫಲಾನುಭವಿಗಳು ಎರಡನೆ ಡೋಸ್ ಪಡೆದು 39 ವಾರಗಳಾಗಿದ್ದಲ್ಲಿ, ಅಂತಹವರು ಕೂಡಲೆ ಬೂಸ್ಟರ್ ಡೋಸ್ ಪಡೆದುಕೊಳ್ಳಬೇಕು. ಇದುವರೆಗೂ ಎರಡನೆ ಡೋಸ್ ಪಡೆಯದೇ ಇರುವವರಿಗೆ ಲಸಿಕೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಲಸಿಕೆಯನ್ನು ಗ್ರಾಮೀಣ, ನಗರ ಆರೋಗ್ಯ ಕೇಂದ್ರ ಮತ್ತು ಜಿಲ್ಲಾಸ್ಪತ್ರೆಯಲ್ಲಿ ನೀಡಲಾಗುವುದು.

ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್‍ಗಳಲ್ಲಿ ಐಎಲ್‍ಐ ಮತ್ತು ಸಾರಿ ಪ್ರಕರಣಗಳು ಕಂಡುಬಂದಲ್ಲಿ ಜಿಲ್ಲಾ ಆಸ್ಪತ್ರೆಯ ಕೊಠಡಿ ಸಂಖ್ಯೆ 02 ರಲ್ಲಿ ಕೋವಿಡ್ ಟೆಸ್ಟ್‍ಗೆ ಒಳಪಡಬೇಕು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!