ಲೋಕಲ್ ಸುದ್ದಿ

ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ದೇವರ 61ನೇ ರಥೋತ್ಸವ ಪ್ರಯುಕ್ತ ಧರ್ಮಧ್ವಜಾರೋಹಣ

ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ದೇವರು 61ನೇ ರಥೋತ್ಸವ ಪ್ರಯುಕ್ತ ಧರ್ಮಧ್ವಜಾರೋಹಣ
ದಾವಣಗೆರೆ: (siddharameshwar) ಮನಸ್ಸಿನಲ್ಲಿ ವಿವಿಧ ರೂಪಗಳಲ್ಲಿ ಪ್ರಕಟಗೊಳ್ಳುವ ಭಾವನೆಗಳನ್ನು ಸಾಕ್ಷೀಪ್ರಜ್ಞೆಯಿಂದ ನೋಡುವುದು ಅರಿವಿನ ಮೊದಲ ಹೆಜ್ಜೆ. ಮಾನವ ಆತ್ಮಸಾಕ್ಷಿ ಪ್ರಜ್ಞೆಯೊಂದಿಗೆ ಅದ್ಯಮ ಚೇತನವನ್ನು ಆನಂದಿಸಬಹುದು. ಅಂತರಂಗ ಶುದ್ಧಿಗೊಂಡ ಮಾನವನ ಮನಸ್ಸಿನಿಂದಲ್ಲಿ ಮಹಾದೇವನ ಸಾಕ್ಷಾತ್ಕಾರ ಸಾಧ್ಯವೆಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ನಗರದ ವೆಂಕಭೋವಿ ಕಾಲೋನಿಯ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿಗುರುಪೀಠ ದಾವಣಗೆರೆ ಶಾಖಾಮಠದ ಆವರಣದಲ್ಲಿ ಜರುಗಿದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ದೇವರ 61ನೇ ರಥೋತ್ಸವ ಪ್ರಯುಕ್ತ ಧರ್ಮಧ್ವಜಾರೋಹಣ ಜರುಗಿದ ಸಮಾರಂಭದ ದಿವ್ಯಅಧ್ಯಕ್ಷತೆವಹಿಸಿ ಮಾತನಾಡಿದ ಅವರು ದೇವರ ನಿಜಸ್ವರೂಪ ನಮ್ಮ ಇಂದ್ರಿಯ, ಮನಸ್ಸು, ಬುದ್ಧಿಗಳಿಗಿಂತ ಎಷ್ಟೋ ಪಟ್ಟು ಸೂಕ್ಷ್ಮವಾದುದು. ಔನ್ನತ್ಯದಲ್ಲಿ ಯಾವ ಎಣಿಕೆಗೂ ನಿಲುಕದ್ದು. ಹಾಗಿರುವಾಗ, ಅತಿಸೂಕ್ಷ್ಮವಾದ ಪರಮಾಣುವನ್ನು ನಮ್ಮ ಕಣ್ಣು ಹೇಗೆ ನೋಡಲಾರದೋ ಹಾಗೆ -ಎಲ್ಲ ಸೂಕ್ಷ್ಮ ವಸ್ತುಗಳಿಗಿಂತಲೂ ಸೂಕ್ಷ್ಮವಾಗಿರುವ ಭಗವಂತನನ್ನು ನಮ್ಮ ಯಾವ ದೈಹಿಕ ಯಂತ್ರಗಳೂ ಗ್ರಹಿಸಲಾರವು.
ಭಗವಂತನನ್ನು ಕಾಣಲು ಸಾಮಾನ್ಯ ಕಣ್ಣು, ಸಾಮಾನ್ಯ ಮನಸ್ಸು ಸಾಲದು. ವಿಶೇಷ ಮನಸ್ಸು , ವಿಶೇಷ ಬುದ್ದಿ ಬೇಕು. ಅಂಥ ಹೊಸ ದೃಷ್ಟಿ ಬರಬೇಕಾದರೆ ಆಧ್ಯಾತ್ಮಿಕ ಸಾಧನೆ ಅಗತ್ಯ. ದೈಹಿಕಮಾನಸಿಕ ಪರಿಶುದ್ಧತೆ ಅಗತ್ಯ. ಆದ್ದರಿಂದ ಸತ್ಯದ ಬೆಳಕಲ್ಲಿ ತೆರೆದುಕೊಳ್ಳುವ ಮನಸ್ಸುಗಳು ಶುಭ್ರವಾಗಿರುತ್ತವೆ. ತಮ್ಮನ್ನು ಅಡಿಗಡಿಗೂ ಅಳೆದು ತೂಗಿ ನೋಡುವ, ವಿಮರ್ಶೆಯ ನಿಕಷಕ್ಕೊಡ್ಡಿ ಪರೀಕ್ಷಿಸಿಕೊಳ್ಳುವ ಅಪರೂಪದ ಗುಣವನ್ನು ಬೆಳಸಿಕೊಂಡವರು ಮಾತ್ರ ಮನಸ್ಸಿನಿಂದ ಮಹಾದೇವನ ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾನೆ. ಎಂದು ಹೇಳಿದರು.
ಈ ಸಂದರ್ಭದಲ್ಲಿ ಭೋವಿ ಸಮಾಜದ ಮುಖಂಡರಾದ ಡಿ.ಬಸವರಾಜ, ಇಂಜಿನಿಯರ್ ವೆಂಕಟೇಶ, ನಾಗರಾಜ, ಹೇಮರಾಜ್, ಶ್ರೀನಿವಾಸ, ಮಂಜುನಾಥ, ಗಣೇಶ, ಮಲೆಬೆನ್ನೂರು ಮಂಜಣ್ಣ, ಹರಿಹರ ಭದ್ರಪ್ಪ, ಶಿವಣ್ಣ, ಮೂರ್ತ್ಯಪ್ಪ, ಶೇಖರಪ್ಪ ಹಾಗೂ ಮುಂತಾದವರು ಉಪಸ್ಥಿತಿಯಿದ್ದರು.
Click to comment

Leave a Reply

Your email address will not be published. Required fields are marked *

Most Popular

To Top