ರಸ್ತೆಯಲ್ಲಿ ಸಿಕ್ಕ ಚಿನ್ನದ ಸರ ಹಿಂತಿರುಗಿಸಿದ ಶಿಕ್ಷಕ

ರಸ್ತೆಯಲ್ಲಿ ಸಿಕ್ಕ ಚಿನ್ನದ ಸರ ಹಿಂತಿರುಗಿಸಿದ ಶಿಕ್ಷಕ

ದಾವಣಗೆರೆ(ಸಂತೇಬೆನ್ನೂರು): ಗ್ರಾಮದ ಚತುಷ್ಪಥ ರಸ್ತೆಯಲ್ಲಿ ಬಿದ್ದಿದ್ದ 3 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಪೊಲೀಸ್ ಠಾಣೆಗೆ ತಲುಪಿಸುವ ಮೂಲಕ ಶಿಕ್ಷಕ ದಂಪತಿ ಮಾನವೀಯತೆ ಮೆರೆದಿದ್ದಾರೆ.

ಹಿರೇಕೋಗಲೂರು ಗ್ರಾಮದ ಶ್ರೀನಿವಾಸ್ ಹಾಗೂ ಪೂರ್ಣಿಮ ನೀತಿಗೆರೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು. ಶನಿವಾರ ಶಾಲೆ ಮುಗಿಸಿ ಗ್ರಾಮದ ಅಂಗಡಿಯಲ್ಲಿ ಸಾಮಗ್ರಿ ಖರೀದಿಸಿ ಹಿಂತಿರುಗುವಾಗ ತಮ್ಮ ದ್ವಿಚಕ್ರ ವಾಹನದ ಬಳಿ ಚಿನ್ನದ ಸರ ಬಿದ್ದಿತ್ತು. ಅದನ್ನು ಕೈಗೆತ್ತಿಕೊಂಡು ತಕ್ಷಣ ಪೊಲೀಸ್ ಠಾಣೆಗೆ ತೆರಳಿ ಒಪ್ಪಿಸಿದ್ದಾರೆ.

ಅದೇ ಸಮಯಕ್ಕೆ ಸರ ಕಳೆದುಕೊಂಡಿದ್ದ ಗೊಲ್ಲರಹಳ್ಳಿ ಗ್ರಾಮದ ಲತಾ ಠಾಣೆಗೆ ದೂರು ನೀಡಲು ಧಾವಿಸಿದ್ದರು. ಪೂರ್ಣ ವಿವರಗಳನ್ನು ಸಂಗ್ರಹಿಸಿ ಎಸ್‌ಐ ದೇವರಾಜ್ ಲತಾ ಅವರಿಗೆ ಚಿನ್ನದ ಸರ ವಾಪಸ್‌ ನೀಡಿದರು. ಶಿಕ್ಷಕ ದಂಪತಿ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!