ಜನಾರ್ಧನ ರೆಡ್ಡಿ ಪಕ್ಷದಿಂದ ಬಿಜೆಪಿಗೆ ನಷ್ಟವಿಲ್ಲ: ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ
ದಾವಣಗೆರೆ: ಜನಾರ್ದನ್ ರೆಡ್ಡಿ ಪಕ್ಷದಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ ಎಂದು ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಯಾರು ಏನು ತೊಂದರೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿಯಿಂದ ಹತ್ತಕ್ಕೆ ಹತ್ತು ಸ್ಥಾನ ಗೆಲ್ಲುತ್ತೇವೆ. ವಿಭಜಿತ ಜಿಲ್ಲೆಯಲ್ಲಿ ಐದು ಸೀಟ್ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜನಾರ್ದನ್ ರೆಡ್ಡಿಯಿಂದ ಏನು ಸಮಸ್ಯೆಯಾಗಲ್ಲ, ಬಿಜೆಪಿ ಬಿಜೆಪಿಯೇ. ಬಿಜೆಪಿ ಅಭಿಮಾನಿಗಳು ಹಾಗೂ ಮತದಾರರು ಬಿಜೆಪಿ ಜೊತೆಗೆ ಇದ್ದಾರೆ ಎಂದು ಸೋಮಶೇಖರ್ ಸ್ಪಷ್ಟಪಡಿಸಿದರು.
ಜನಾರ್ದನ್ ರೆಡ್ಡಿ ಜೊತೆಗೆ ಯಾವುದೇ ಕಮಿಟ್ ಮೆಂಟ್ ಇಲ್ಲ. ಸಂಬಂಧನೇ ಬೇರೆ ರಾಜಕೀಯವೇ ಬೇರೆ. ತಮ್ಮನ ಪತ್ನಿ ಅವರ ಪತ್ನಿಯೇ, ಆದರೆ ನಾನು ಅವರೊಂದಿಗೆ ಯಾವುದೇ ಕಮಿಟ್ ಮೆಂಟ್ ಮಾಡಿಕೊಂಡಿಲ್ಲ. ನಮ್ಮ ವಂಶದಲ್ಲಿಯೇ ಕಮಿಟ್ ಮೆಂಟ್ ಅನ್ನೋದೇ ಇಲ್ಲ. ಪಾರ್ಟಿ ಜೊತೆಗಷ್ಟೆ ಕಮೀಟ್ ಮೆಂಟ್ ನಮ್ಮದು ಎಂದು ಹೇಳಿದರು.
ಬಳ್ಳಾರಿ ಗ್ರಾಮಾಂತರದಿಂದ ಶ್ರೀರಾಮುಲು ಸ್ಪರ್ಧೇ ಖಚಿತವಾಗಿದೆ. ಇದರಿಂದ ನಮಗೆ ಇನ್ನಷ್ಟು ಬಲ ಬರಲಿದೆ. ಸಂಡೂರು ಕ್ಷೇತ್ರವನ್ನ ಸ್ಟ್ರಾಂಗ್ ಮಾಡಲು ಅಮಿತ್ ಶಾ ಅವರನ್ನ ಕರೆಸಿದ್ದೇವು ಎಂದು ಹೇಳಿದರು. ಇಡಿ ಸಮನ್ಸ್ ಬಗ್ಗೆ ಕೇಳಲಾದ ಪ್ರಶ್ನೆಗೆ, ನಾನು ಲೋಕಲ್ ಎಮ್ ಎಲ್ ಎ. ಹೀಗಾಗಿ ನಾನು ಲೋಕಲ್ ಅಷ್ಟೆ ಮಾತಾಡುತ್ತೇನೆ ಎಂದು ಉತ್ತರಿಸಿದರು.