ಲೋಕಲ್ ಸುದ್ದಿ

ಮಣಿಪುರ ಘಟನೆಗೆ ನ್ಯಾಯ ದೊರಕಿಸುವಂತೆ ಬಿಎಸ್‌ಪಿ ಮನವಿ 

ಮಣಿಪುರ ಘಟನೆಗೆ ನ್ಯಾಯ ದೊರಕಿಸುವಂತೆ ಬಿಎಸ್‌ಪಿ ಮನವಿ 

ದಾವಣಗೆರೆ: ಮಣಿಪುರದಲ್ಲಿ ನಡೆದಿರುವ ಅಮಾನವೀಯ ಘಟನೆಯನ್ನು ಬಹುಜನ ಸಮಾಜ ಪಾರ್ಟಿ ತೀವ್ರವಾಗಿ ಖಂಡಿಸಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಿ ಉಗ್ರ ಶಿಕ್ಷೆ ನೀಡುವಂತೆ ಒತ್ತಾಯಿಸಿ ಪಕ್ಷದ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಡಿ. ಹನುಮಂತಪ್ಪ, ಕಳೆದ ಮೇ.4ರಂದು ಮಣಿಪುರದಲ್ಲಿ ಕುಕಿ ಜನಾಂಗದ ಮಹಿಳೆಯರಿಬ್ಬರ ಮೇಲೆ ನಡೆದಿರುವ ಅತ್ಯಾಚಾರ ಮತ್ತು ನಗ್ನ ಮೆರವಣಿಗೆ ಅತ್ಯಂತ ಖಂಡನೀಯ ಮತ್ತು ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಣಿಪುರದಲ್ಲಿ ಈಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಕೇಂದ್ರದಲ್ಲೂ ಕೂಡ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಈ ಘಟನೆ ಬಗ್ಗೆ ಮೌನ ವಹಿಸಿರುವುದು ಖಂಡನಾರ್ಹ. ಅಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿದೆ. ಇಷ್ಟಾದರೂ ಕೂಡ ಅಧಿಕಾರದಲ್ಲಿರುವ ಸರ್ಕಾರಗಳಿಗೆ ಶಾಂತಿ ಕಾಪಾಡಲು ಸಾಧ್ಯವಾಗಿಲ್ಲ. ಕೂಡಲೇ ಮಣಿಪುರದ ಮುಖ್ಯಮಂತ್ರಿ ಬೀರೇನ್ ಸಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ನೈತಿಕತೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ರಾಷ್ಟ್ರಪತಿಗಳು ಮಣಿಪುರದ ಜನರ ಪ್ರಾಣ, ಆಸ್ತಿಪಾಸ್ತಿ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಹೆಚ್. ಮಲ್ಲೇಶ್, ಮಹಮದ್ ಕಲೀಂ, ಪರಶುರಾಮ ನಾಗನೂರು, ಕುಬೇರಪ್ಪ ಹೊನ್ನಾಳಿ, ಬಸವರಾಜ್, ಆಸೀಫ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
Click to comment

Leave a Reply

Your email address will not be published. Required fields are marked *

Most Popular

To Top