ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗಳಿಂದ ದೀಡಿರ್ ಹಾಸ್ಟೆಲ್‍ಗೆ ಭೇಟಿ ಕುಂದು ಕೊರತೆಗಳ ಅನಾವರಣ, ಸ್ವಚ್ಚತೆಗೆ ಸೂಚನೆ

ದಾವಣಗೆರೆ;  ದಾವಣಗೆರೆ ನಗರದ ವರ್ತುಲ ರಸ್ತೆಯಲ್ಲಿರುವ ಬಿಸಿಎಂ ಇಲಾಖೆ ಸರ್ಕಾರಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಕ್ಕೆ ಮಂಗಳವಾರ ಅನಿರೀಕ್ಷಿತ ಭೇಟಿ ನೀಡಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮಾ.ಕರೆಣ್ಣನವರ ಹಾಸ್ಟೆಲ್ ಸ್ವಚ್ಚತೆ ಕಾಪಾಡಿಕೊಂಡು ವಿದ್ಯಾರ್ಥಿಗಳ ಕುಂದುಕೊರತೆಗಳ ನಿವಾರಣೆ ಮಾಡಲು ತಿಳಿಸಿದರು.

ಈ ವೇಳೆ ವಿದ್ಯಾರ್ಥಿಗಳು ಮಾತನಾಡಿ ಊಟದಲ್ಲಿ ಕಲ್ಲು ಬರುತ್ತವೆ, ರುಚಿ ಇರುವುದಿಲ್ಲ, ತರಕಾರಿ ಸರಿಯಾಗಿ ಹಾಕುವುದಿಲ್ಲ, ವಾರದಲ್ಲಿ ನಾಲ್ಕು ಬಾರಿ ಪಲಾವ್‍ನ್ನು ಮಾಡಿ ಅದನ್ನೆ ಬೇರೆ ಹೆಸರು ಹೇಳಿ ಕೊಡುತ್ತಾರೆ. ದಿನನಿತ್ಯ ಮೆನು ಬದಲಾಯಿಸಬೇಕು. ಗ್ರಂಥಾಲಯ ಸೌಲಭ್ಯ ಇಲ್ಲ, ಶೌಚಲಯ ಸ್ವಚ್ಚತೆ ಇಲ್ಲ, ಕೆಲವು ವಿದ್ಯಾರ್ಥಿಗಳಿಗೆ ಮಂಚದ ಸೌಲಭ್ಯ ಇಲ್ಲದೆ ನೆಲದ ಮೇಲೆ ಮಲಗುತ್ತಾರೆ. ನಿಲಯಕ್ಕೆ ವೈದ್ಯರು ಭೇಟಿ ನೀಡುವುದಿಲ್ಲ, ಕೊಠಡಿಯಲ್ಲಿ 10 ರಿಂದ 20 ವಿದ್ಯಾರ್ಥಿಗಳು ಇರುತ್ತಾರೆ, ಸೋಲಾರ್ ಇದ್ದರು ಸಹ ಸ್ನಾನಕ್ಕೆ ಬಿಸಿನೀರು ದೊರೆಯುವುದಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಕುಂದುಕೊರತೆ ಬಗ್ಗೆ ಪ್ರಸ್ತಾಪಿಸಿದರು.


ವಿದ್ಯಾರ್ಥಿಗಳು ಹೇಳಿದ ಕುಂದುಕೊರತೆಗಳನ್ನು ನಿವಾರಣೆ ಮಾಡುವ ಕೆಲಸವನ್ನು ವಾರ್ಡನ್ ಮಾಡಬೇಕು. ಮತ್ತು ಇದಕ್ಕೆ ಬೇಕಾದ ವ್ಯವಸ್ಥೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುತ್ತದೆ ಎಂದ ನ್ಯಾಯಾಧೀಶರು ಹಾಸ್ಟೆಲ್‍ನಲ್ಲಿರುವ ಸಮಸ್ಯೆಗಳು ಗಂಭೀರವಾಗಿದ್ದು ಪರಿಹರಿಸಿ ವಿದ್ಯಾರ್ಥಿಗಳಿಗೆ ಉತ್ತಮ ಸೌಕರ್ಯಗಳನ್ನು ಸಿಗುವಂತೆ ಮಾಡಲು ತಿಳಿಸಿದ ಅವರು ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲು ಕ್ರಮ ಜರುಗಿಸಲಾಗುತ್ತದೆ ಎಂದರು.

ಕಾನೂನು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಅರುಣ್ ಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!