ರಾಷ್ಟ್ರೀಯವಾದಿ ಸೈನಿಕರ ಗರಡಿಯಲ್ಲಿ ಸಮರಾಭ್ಯಾಸ.. 2ನೇ ವರ್ಷ ‘ಸಂಘಶಿಕ್ಷಾ ವರ್ಗ’ಕ್ಕೆ ತೆರೆ..

ಬೆಂಗಳೂರು: ರಾಷ್ಟ್ರೀಯವಾದಿ ಸೈನಿಕರನ್ನು ರೂಪಿಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಎರಡನೇ ವರ್ಷ ಶಿಕ್ಷಾವರ್ಗ ಗಮನಸೆಳೆಯಿತು. ರಾಜ್ಯದ ವಿವಿಧ ವಿಭಾಗಗಳ ಸ್ವಯಂಸೇವಕರು ಭಾಗವಹಿಸಿ ಪರಿಪೂರ್ಣ ಶಿಕ್ಷಣ ಪಡೆದೆರು.
ಬೆಂಗಳೂರಿನ ಚನ್ನೇನಹಳ್ಳಿಯಲ್ಲಿ ಮೇ 14ರಂದು ಪ್ರಾರಂಭವಾದ ಈ ಸಂಘಶಿಕ್ಷಾ ವರ್ಗ ಭಾನುವಾರ ಪರಿಪೂರ್ಣಗೊಂಡಿತು. ತಿಂಗಳ ಕಾಲ ನೆರವೇರಿದ ವರ್ಗದಲ್ಲಿ ರಾಜ್ಯದ 77 ಸ್ಥಾನಗಳಿಂದ 89 ಶಿಕ್ಷಾರ್ಥಿಗಳು ಭಾಗವಹಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನತೀರ್ಥರು ಭೇಟಿ ನೀಡಿ ಮಾರ್ಗದರ್ಶನ ನೀಡಿದರು.
ಗುರುಕುಲ ಮಾದರಿಯ ದಿನಚರಿ, ಸೈನ್ಯದ ಮಾದರಿ ಸಮರಾಭ್ಯಾಸ, ವೈದ್ಯಲೋಕವನ್ನೇ ಅಚ್ಚರಿಗೊಳಿಸುವ ರೀತಿಯ ದೈಹಿಕ ತರಬೇತಿ, ಶಿಕ್ಷಣ ಸಂಸ್ಥೆಗಳಲ್ಲಿ ಸಿಗದ ಬೌದ್ಧಿಕ ಶಿಕ್ಷಣವು ಆರೆಸ್ಸೆಸ್ನ ಈ ‘ಒಟಿಸಿ’ ವರ್ಗದಲ್ಲಿ ಸಿಗುತ್ತದೆ. ರಾಜ್ಯದ ಸಾವಿರಾರು ಸ್ವಯಂಸೇವಕರು ಎರಡನೇ ಸಂಘ ಶಿಕ್ಷಾವರ್ಗದಲ್ಲಿ ಭಾಗವಹಿಸಲು ಅಪೇಕ್ಷಿಸಿದ್ದರೂ ಸಂಘಟನೆಯ ಜವಾಬ್ಧಾರಿ ಹೊಂದಿರುವ ಕಾರ್ಯಕರ್ತರಿಗಷ್ಟೇ ಅವಕಾಶ ಕಲ್ಪಿಸಲಾಗಿತ್ತು.
ಸೈನ್ಯದಲ್ಲಿ, ಪೊಲೀಸ್ ಇಲಾಖೆಯಲ್ಲಿನ ತರಬೇತಿ ಸಂದರ್ಭದಲ್ಲಿ ಇರುವಂತೆಯೇ ಶಿಕ್ಷಾರ್ಥಿಗಳ ನಿರ್ಗಮನ ಸನ್ನಿವೇಶ ಎಲ್ಲರ ಗಮನಕೇಂದ್ರೀಕರಿಸಿತು. ಧಾರ್ಮಿಕ ಶಿಕ್ಷಣ, ಶಾರೀರಿಕ ಅಭ್ಯಾಸ, ಯೋಗ, ನಿಯುದ್ದ, ಬೌದ್ಧಿಕ ಇತ್ಯಾದಿ ಶಿಕ್ಷಣ ಪಡೆಯಲು ಸಂಘ ಶಿಕ್ಷಾ ವರ್ಗ ವೇದಿಕೆಯಾಯಿತು. ಸುಮಾರು ಒಂದು ತಿಂಗಳ ಅವಧಿಯಲ್ಲಿ ಪಡೆದುಕೊಂಡ ಶಿಕ್ಷಣವನ್ನು ಶನಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ಶಿಕ್ಷಾರ್ಥಿಗಳು ಪ್ರದರ್ಶಿಸಿದ ವೈಖರಿಯೂ ಕಾರ್ಯಕ್ರಮಕ್ಕೆ ಆಕರ್ಷಣೆ ತುಂಬಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ರವೀಂದ್ರ ಅವರು ಮಾರ್ಗದರ್ಶನ ಭಾಷಣ ಮಾಡಿದರು. ‘ನಾನೊಬ್ಬ ಹಿಂದು ಎಂದು ಹೇಳುವುದಕ್ಕೆ ಹಿಂಜರಿಯುತ್ತಿದ್ದ ವಾತಾವರಣದಿಂದ ಹೊರಬಂದು ಹಿಂದೂ ಎಂದು ಕರೆಸಿಕೊಳ್ಳುವುದು ನನ್ನ ಹೆಮ್ಮೆ ಎಂಬ ಭಾವ ನಿರ್ಮಾಣ ಕಾರ್ಯ ಸಂಘದ ಸಾಧನೆ’ ಎಂದು ಅವರು ಹೇಳಿದರು.
ಹಿಂದೂಗಳು ಸಾಮಾಜಿಕವಾಗಿ ಸಂಘಟಿತರಾಗಲು ಸಾಧ್ಯವೇ ಇಲ್ಲ ಎನ್ನುವ ವಾತಾವರಣ ಈಗ ಬದಲಾಗಿದೆ. ಒಂದೇ ಮತ, ಒಂದೇ ಭಾಷೆ, ಒಂದೇ ಆಚಾರ ವಿರುವ ರಾಷ್ಟ್ರಗಳೇ ಜಗಳವಾಡುತ್ತಿರುವಾಗ ಅಸಂಖ್ಯಾತ ಪಂಥಗಳು, ಭಾಷೆಗಳು, ಆಚಾರಗಳನ್ನೊಳಗೊಂಡ ನಮ್ಮ ರಾಷ್ಟ್ರದಲ್ಲಿ ಸಂಘಟಿತ ಮತ್ತು ಸಾಮರಸ್ಯದ ಜೀವನ ನಡೆಸುವ ಹಿಂದೂ ಸಮಾಜದ ನಿರ್ಮಾಣ ಸಂಘ ಕಾರ್ಯದ ಪರಿಣಾಮ ಎಂದು ನುಡಿದರು.
ಸಂಘ ಕಾರ್ಯ ಆಸಕ್ತಿ ಮತ್ತು ಅವಕಾಶದ ಕಾರಣಕ್ಕಾಗಿ ನಡೆಯುತ್ತಿರುವುದಲ್ಲ. ಬದಲಾಗಿ ಅಗತ್ಯತೆಯ ಕಾರಣಕ್ಕಾಗಿ ಸಂಘ ಕಾರ್ಯ ಮಾಡಬೇಕಾಗಿದೆ. ನನ್ನ ರಾಷ್ಟ್ರ ಎಂಬ ಭಾವಜಾಗೃತಿಯೊಂದಿಗೆ ಸಂಘದ ಹಿತೈಷಿಗಳೂ ಸ್ವಯಂಸೇವಕರು, ಕಾರ್ಯಕರ್ತರಾಗಿ ಜೊತೆಯಾಗಬೇಕಿದೆ ಎಂಬುದು ಧುರೀಣರ ಅಭಿಪ್ರಾಯ..
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೃಷಿ ವಿಜ್ಞಾನಿ ರಾಜೇಂದ್ರ ಹೆಗಡೆ, ಅಪ್ರತಿಮ ರಾಷ್ಟ್ರಭಕ್ತರನ್ನು ನಿರ್ಮಿಸುವಲ್ಲಿ ಸಂಘವು ಅಮೂಲ್ಯ ಕೊಡುಗೆ ನೀಡುತ್ತಿದೆ. ಸಾಮಾಜ ಸೇವೆಗಾಗಿ ಸದಾ ಮಿಡಿಯುವ ಸಂಘಟನೆಯಾಗಿ ಗುರುತಿಸಿಕೊಂಡಿದೆ. ಸಂಘವನ್ನು ತಿಳಿಯಬೇಕಿದ್ದರೆ, ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಅಭಿಪ್ರಾಯಪಟ್ಟರು.
ವರ್ಗದ ಸರ್ವಾಧಿಕಾರಿಯಾಗಿ ಕೃಷ್ಣಮೂರ್ತಿ ಅವರು, ಈ ಪರಿಪೂರ್ಣ ಶಿಬಿರವನ್ನು ಮನ್ನಡೆಸಿ ಯಶಸ್ವಿಗೊಳಿಸಿದರು.